×
Ad

ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗೆ ಪೂರಕ ವಾತಾವರಣವಿಲ್ಲ: ನರಹಳ್ಳಿ ಬಾಲಸುಬ್ರಹ್ಮಣ್ಯ

Update: 2018-01-31 22:37 IST

ಬೆಂಗಳೂರು, ಜ.31: ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಬಳಿ ಒಂದು ವರ್ಷಕ್ಕೆ ಲಕ್ಷಾಂತರ ರೂ. ಪ್ರವೇಶ ಶುಲ್ಕ ಕಟ್ಟಿಸಿಕೊಳ್ಳುತ್ತವೆ. ಆದರೆ, ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡಲು ಪೂರಕವಾದ ವಾತಾವರಣವಿಲ್ಲವೆಂದು ಹಿರಿಯ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ವಿಷಾದಿಸಿದರು.

ಬುಧವಾರ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ನಗರದ ಜೈನ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಸಾಹಿತ್ಯ/ಅಂರ್‌ಶಿಸ್ತೀಯತೆ’ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಆಸಕ್ತಿ ಕ್ಷೇತ್ರಗಳತ್ತ ಸಂಶೋಧನೆ ಮಾಡಲು ಪ್ರೋತ್ಸಾಹಿಸುವುದು ವಿಶ್ವವಿದ್ಯಾಲಯಗಳ ಜವಾಬ್ದಾರಿ. ಆದರೆ, ದೇಶದ ಬಹುತೇಕ ವಿಶ್ವವಿದ್ಯಾಲಯಗಳು ಸಂಶೋಧನಾ ಕ್ಷೇತ್ರದತ್ತ ಹೆಚ್ಚು ಆಸಕ್ತಿ ತೋರುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಜಗತ್ತಿನ ಮುನ್ನೂರು ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ಭಾರತದ ಯಾವ ವಿಶ್ವವಿದ್ಯಾಲಯವು ಸ್ಥಾನ ಪಡೆದಿಲ್ಲ. ದೇಶದ ಶಿಕ್ಷಣ ಕ್ಷೇತ್ರ ಯಾವ ಸ್ಥಿತಿಯಲ್ಲಿದ್ದೇವೆಂದು ಈ ಅಂಕಿ ಅಂಶಗಳಿಂದಲೆ ತಿಳಿಯಬಹುದಾಗಿದೆ. ಹೀಗಾಗಿ ಸರಕಾರ, ವಿಶ್ವವಿದ್ಯಾಲಯಗಳು ಸಂಶೋಧನೆಗೆ ಅಗತ್ಯವಾದ ಆರ್ಥಿಕ ನೆರವು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ನೀಡಬೇಕು ಎಂದು ಅವರು ಆಶಿಸಿದರು.

ಮುಂದುವರೆದ ದೇಶಗಳ ಒಂದು ವಿಶ್ವವಿದ್ಯಾಲಯದ ಒಂದು ವರ್ಷದ ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡುವ ಸ್ಕಾಲರ್‌ಶಿಪ್ ಮೊತ್ತ ನಮ್ಮ ರಾಜ್ಯದ ಒಂದು ವರ್ಷದ ಬಜೆಟ್‌ಗೆ ಸಮವಾಗಿರುತ್ತದೆ. ಆ ಮಟ್ಟದಲ್ಲಿ ವಿದೇಶಿ ವಿವಿಗಳು ಸಂಶೋಧನಾ ಕ್ಷೇತ್ರಕ್ಕೆ ಪ್ರಾಮುಖ್ಯತೆ ಕೊಡಲಾಗುತ್ತಿದೆ. ಅದೇ ಮಾದರಿಯಲ್ಲಿ ನಮ್ಮ ದೇಶದಲ್ಲಿ ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚಿನ ಹಣಕಾಸಿನ ನೆರವನ್ನು ನೀಡಬೇಕು ಎಂದು ಅವರು ಹೇಳಿದರು.

ನಾನು ಜಗತ್ತಿನ ಹಲವು ದೇಶಗಳನ್ನು ಸುತ್ತಿದ ಮೇಲೆ ಭಾರತದ ನಿಜವಾದ ಸೌಂದರ್ಯ, ಜ್ಞಾನದ ಅರಿವಾಯಿತು. ಸ್ವಿಟ್ಜರ್‌ಲ್ಯಾಂಡ್‌ಗಿಂತ ನಮ್ಮ ಕೊಡುಗಿನ ಸೌಂದರ್ಯ ಮನಮೋಹಕವಾಗಿದೆ. ಹೀಗಾಗಿ ನಾವು ದೇಶದ ಗ್ರಾಮಾಂತರ ಪ್ರದೇಶದ ಸಂಸ್ಕೃತಿ, ಜನಜೀವನ ಹಾಗೂ ಪರಿಸರದ ಕುರಿತು ಸಂಶೋಧನೆಗೆ ಹೆಚ್ಚಿನ ಆಸಕ್ತಿ ವಹಿಸಬೇಕಾಗಿದೆ ಎಂದು ಅವರು ಹೇಳಿದರು.

ಹಿರಿಯ ಲೇಖಕ ಡಾ.ಕೆ.ಪುಟ್ಟಸ್ವಾಮಿ ಮಾತನಾಡಿ, ಸಾಹಿತ್ಯ ಹಾಗೂ ವಿಜ್ಞಾನ ಕ್ಷೇತ್ರಗಳ ಅಂತಿಮ ಗುರಿ ಸತ್ಯಾನ್ವೇಷಣೆ ಮಾಡುವುದಾಗಿದೆ. ಆದರೆ, ಸಾಗುವ ದಾರಿ ಮಾತ್ರ ಭಿನ್ನವಾಗಿರುತ್ತದೆ. ಪ್ರತಿಯೊಂದು ವಿಜ್ಞಾನದ ಚಿಂತನೆಯು ಕಲ್ಪನೆಯಿಂದ ಪ್ರಾರಂಭಗೊಂಡು, ಸಿದ್ಧಾಂತವಾಗಿ ರೂಪಗೊಳ್ಳುತ್ತದೆ. ಆದರೆ, ಸಾಹಿತ್ಯವು ತಾತ್ವಿಕತೆಯಿಂದ ಆರಂಭವಾಗಿ ಕಲೆಯಾಗಿ ರೂಪತಾಳುತ್ತದೆ ಎಂದು ತಿಳಿಸಿದರು.

12 ಶತಮಾನದ ಬಸವಣ್ಣನ ವಚನಗಳಿಗೂ ವಿಜ್ಞಾನಿ ಡಾರ್ವಿನ್‌ನ ಜೀವ ವಿಕಾಸದ ಸಿದ್ಧಾಂತಕ್ಕೂ ನೇರವಾದ ಸಂಬಂಧವಿದೆ. ಬಸವಣ್ಣ ತನ್ನ ವಚನವೊದರಲ್ಲಿ ‘ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ’ ಎಂದಿದ್ದಾನೆ. ಅದನ್ನೆ ಚಾಲ್ಸ್ ಡಾರ್ವಿನ್ ಯಾವುದೆ ಜೀವಿ ಕಾಲಕ್ಕೆ, ಸಂದರ್ಭದ ಒತ್ತಡ, ಸಂಘರ್ಷಗಳಿಗೆ ಹೊಂದಿಕೊಂಡರೆ ಮಾತ್ರ ಜೀವಿಸಲು ಸಾಧ್ಯವೆಂದು ವೈಜ್ಞಾನಿಕ ಸಂಶೋಧನೆಗಳ ಮೂಲಕ ಸಾಬೀತು ಪಡಿಸಿದ್ದಾರೆ. ಹೀಗೆ ಸಾಹಿತ್ಯ ಹಾಗೂ ವಿಜ್ಞಾನ ಪೂರಕವಾದ ಅಂತರ್ ಸಂಬಂಧವನ್ನು ಹೊಂದಿರುತ್ತವೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಜೈನ್ ವಿಶ್ವವಿದ್ಯಾಲಯದ ಮಾನವಿಕ ಮತ್ತು ಸಮಾಜಶಾಸ್ತ್ರಗಳ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ.ಮೈಥಿಲಿ ರಾವ್, ಅಂತರ್‌ಶಿಸ್ತೀಯ ಸಂಶೋಧಕ ಶಶಿಕುಮಾರ್, ಸಂಗೀತ ಕಲಾವಿದೆ ಶ್ರೀದೇವಿ ಕಳಸದ, ಅಭಿನವ ಪ್ರಕಾಶನದ ರವಿಕುಮಾರ್ ಮತ್ತಿತರರಿದ್ದರು.

 ರಾಜ್ಯದ ಯಾವುದೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಯಾವುದೆ ಕ್ಷೇತ್ರದಲ್ಲಿ ಸಂಶೋಧನೆ ಮಾಡಲು ಮುಂದಾದರೆ ‘ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್’ ವತಿಯಿಂದ ಸ್ಕಾಲರ್‌ಶಿಪ್ ನೀಡಲಾಗುವುದು. ಹಾಗೂ ಸಂಶೋಧನಾ ಕೃತಿಯನ್ನು ಟ್ರಸ್ಟ್ ವತಿಯಿಂದ ಪ್ರಕಟನೆ ಮಾಡಲಾಗುವುದು.
-ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಅಧ್ಯಕ್ಷ, ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News