×
Ad

ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ನೋಟಿಸ್

Update: 2018-01-31 22:43 IST

ಬೆಂಗಳೂರು, ಜ.30: ನಿಯಮ ಉಲ್ಲಂಘಿಸಿ ನಗರದ ಹೈಕೋರ್ಟ್ ಆವರಣದೊಳಗೆ 'ಅನಂತು ವರ್ಸಸ್ ನುಸ್ರತ್' ಚಿತ್ರದ ನಾಯಕ ನಟ ವಿನಯ್ ರಾಜ್‌ಕುಮಾರ್ ಅವರ ಫೋಟೋ ಶೂಟ್ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಹೈಕೋರ್ಟ್ ಸಹಾಯಕ ಪೊಲೀಸ್ ಆಯುಕ್ತರು ಹಾಗೂ ವಿಧಾನಸೌಧ ಸಬ್ ಇನ್ಸ್‌ಪೆಕ್ಟರ್ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಸಂವಿಧಾನದ 1950ರ ಕಾಯ್ದೆಯನ್ನು ಉಲ್ಲಂಘಿಸಿ ಹೈಕೋರ್ಟ್ ಆವರಣದೊಳಗೆ ವಿನಯ್ ರಾಜ್‌ಕುಮಾರ್ ಅವರ ಫೋಟೋ ಶೂಟ್ ನಡೆಸಿದ ಪ್ರಕರಣವನ್ನು ತನಿಖೆಗೆ ನಿರ್ದೇಶಿಸಬೇಕೆಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ನಡೆಸಿದ ಹಂಗಾಮಿ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು.
       
ನಗರದ ಹೈಕೋರ್ಟ್ ಆವರಣ ಮತ್ತು ಬೆಂಗಳೂರು ವಕೀಲರ ಸಂಘದ ಗ್ರಂಥಾಲಯದಲ್ಲಿ 2017ರ ಆ.15ರಂದು 'ಅನಂತು ವರ್ಸಸ್ ನುಸ್ರತ್' ಚಿತ್ರಕ್ಕಾಗಿ ನಾಯಕ ನಟ ವಿನಯ್ ರಾಜ್‌ಕುಮಾರ್ ಅವರ ಫೋಟೋ ಶೂಟ್ ನಡೆಸಲಾಗಿತ್ತು. ಈ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಲಾಗಿತ್ತು.

ಲಾಂಛನಗಳು ಮತ್ತು ಹೆಸರುಗಳು (ಅನುಚಿತ ನಿಯಂತ್ರಣ) ಕಾಯ್ದೆ-1950ರ ಪ್ರಕಾರ ಸಂಸತ್, ರಾಜ್ಯ ಶಾಸನಸಭೆ, ಸುಪ್ರೀಂಕೋರ್ಟ್, ರಾಜ್ಯ ಹೈಕೋರ್ಟ್, ಕೇಂದ್ರ ಸಚಿವಾಲಯ ಅಥವಾ ರಾಜ್ಯ ಸಚಿವಾಲಯ ಹಾಗೂ ಇತರೆ ಸರಕಾರಿ ಕಚೇರಿಗಳ ಹೆಸರು ಅಥವಾ ಈ ಮೇಲ್ಕಂಡ ಕಚೇರಿ ಕಟ್ಟಡಗಳ ಚಿತ್ರಗಳನ್ನು ಬಳಸುವುದು ನಿಷಿದ್ಧ. ಈ ನಿಯಮ ಮತ್ತು ಹೈಕೋರ್ಟ್ ಭದ್ರತಾ ವ್ಯವಸ್ಥೆ ಉಲ್ಲಂಘಿಸಿ, ಹೈಕೋರ್ಟ್ ಆವರಣದಲ್ಲಿ ವಿನಯ್ ರಾಜ್‌ಕುಮಾರ್ ಅವರ ಫೋಟೋ ಶೂಟ್ ನಡೆಸಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಹಳದಿ ನಾಮಫಲಕದ ವಾಹನ, ಮಾಧ್ಯಮದವರ ಕ್ಯಾಮರಾ ಹಾಗೂ ಲ್ಯಾಪ್‌ಟಾಪ್ ಸೇರಿ ಇನ್ನಿತರ ವಸ್ತುಗಳನ್ನು ಹೈಕೋರ್ಟ್ ಆವರಣದೊಳಗೆ ತರುವಂತಿಲ್ಲ. ಅದಕ್ಕಾಗಿ ಹೈಕೋರ್ಟ್ ರಿಜಿಸ್ಟ್ರಾರ್ ಅನುಮತಿ ಪಡೆಯಬೇಕು. ಫೋಟೋ ಶೂಟ್‌ಗೆ ಅನುಮತಿ ಪಡೆದಿಲ್ಲ. ಮುಖ್ಯವಾಗಿ 2017ರ ಅ.14ರಂದು ಹೈಕೋರ್ಟ್ ಸಹಾಯಕ ಪೊಲೀಸ್ ಆಯುಕ್ತರು ದಾಖಲಿಸಿದ ದೂರಿನ ಮೇಲೆ ಈವರೆಗೂ ವಿಧಾನಸೌಧ ಠಾಣಾ ಸಬ್ ಇನ್ಸ್‌ಪೆಕ್ಟರ್ ಯಾವುದೇ ಕ್ರಮ ಜರುಗಿಸಿಲ್ಲ. ಹೀಗಾಗಿ, ಎಸಿಪಿಯ ದೂರಿನ ತನಿಖೆ ನಡೆಸಲು ಮತ್ತು ಹೈಕೋರ್ಟ್ ಭದ್ರತಾ ವ್ಯವಸ್ಥೆ ಉಲ್ಲಂಘಿಸಿದವರನ್ನು ಬಂಧಿಸಿ, ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಸಲು ವಿಧಾನಸೌಧ ಠಾಣಾ ಸಬ್ ಇನ್ಸ್‌ಪೆಕ್ಟರ್‌ಗೆ ನಿರ್ದೇಶಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಅರ್ಜಿದಾರರ ಪರವಾಗಿ ಜಿ.ಆರ್.ಮೋಹನ್, ಸರಕಾರದ ಪರವಾಗಿ ಹೆಚ್ಚುವರಿ ಅಡ್ವೋಕೇಟ್ ಜನರಲ್  ಎ.ಎಸ್.ಪೊನ್ನಣ್ಣ ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News