×
Ad

ಮಲಹೊರುವ ಪದ್ಧತಿ ತಡೆಗೆ ಕಠಿಣ ಕಾನೂನು ಜಾರಿಗೆ ಆಗ್ರಹಿಸಿ ಫೆ.7ಕ್ಕೆ ಪ್ರತಿಭಟನೆ

Update: 2018-01-31 23:18 IST

ಬೆಂಗಳೂರು, ಜ.31: ರಾಜ್ಯದಲ್ಲಿ ಮಲಗುಂಡಿಗಳಿಗೆ ಇಳಿಸಿ ಅಮಾನವೀಯವಾಗಿ ದಲಿತರನ್ನು ಕೊಲ್ಲುತ್ತಿರುವ ಪದ್ಧತಿಯನ್ನು ನಿಲ್ಲಿಸಲು ಕಠಿಣ ಕಾನೂನು ಜಾರಿ ಮಾಡಬೇಕು ಅಥವಾ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಭಾರತೀಯ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದ-ಲೆನಿನ್‌ವಾದ)(ಲಿಬರೇಷನ್)ದ ವತಿಯಿಂದ ಫೆ.7 ರಂದು ಪ್ರತಿಭಟನಾ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಮುಖಂಡ ಎಸ್.ಬಾಲನ್, ಕರ್ನಾಟಕದಲ್ಲಿ ಕಳೆದೆರಡು ದಶಕಗಳಲ್ಲಿ ಮಲ ಹೊರುವ ಪದ್ಧತಿಯಿಂದಾಗಿ 75 ಕ್ಕೂ ಅಧಿಕ ಅಮಾನವೀಯ ಕೊಲೆಗಳು ನಡೆದಿದ್ದು, ಇಲ್ಲಿ ಅಧಿಕಾರ ನಡೆಸಿದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳೇ ಈ ಕೊಲೆಗಳಿಗೆ ಹೊಣೆಗಾರರಾಗಿದ್ದಾರೆ ಎಂದು ಆರೋಪಿಸಿದರು.

 ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ತಂತ್ರಜ್ಞಾನದಲ್ಲಿ ಅಭಿವೃದ್ಧಿಯಾಗುತ್ತಿದೆ. ಆದರೆ, ಇಂದಿಗೂ ಇಲ್ಲಿ ಬರೀ ಕೈನಲ್ಲಿ ಮಲಗುಂಡಿಗಳನ್ನು ಸ್ವಚ್ಛ ಮಾಡುವ ಪದ್ಧತಿ ದೂರವಾಗಿಲ್ಲ. ಮಲಗುಂಡಿ, ಎಸ್‌ಟಿಪಿ ಅಥವಾ ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವುದಕ್ಕೆ ಆಧುನಿಕ ತಂತ್ರಜ್ಞಾನವನ್ನು ಬಳಸದಿರುವುದು ಮತ್ತು ದಲಿತರನ್ನು ಗುಲಾಮರನ್ನಾಗಿ ನೋಡುವ ಸರಕಾರ ವ್ಯವಸ್ಥೆಯೇ ಈ ಕಾರ್ಮಿಕರ ದುರ್ಮರಣಕ್ಕೆ ಮೂಲ ಕಾರಣವಾಗಿದೆ ಎಂದು ಅವರು ಹೇಳಿದರು.

ಇತ್ತೀಚಿಗೆ ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕಕ್ಕೆ ಉತ್ತರ ಪ್ರದೇಶದ 300 ದಲಿತರನ್ನು ಕರೆದುಕೊಂಡು ಬಂದು ಅವರ ಕೈನಲ್ಲಿ ಮಲ ಹೊರಿಸುವ ಯೋಜನೆ ರೂಪಿಸಿದ್ದಾರೆ. ಕಾನೂನಡಿಯಲ್ಲಿ ಕ್ರಮ ಕೈಗೊಳ್ಳಬೇಕಾದ ಜಿಲ್ಲಾಧಿಕಾರಿ, ಯಾವುದೇ ಕ್ರಮ ಕೈಗೊಳ್ಳದೆ ಪರೋಕ್ಷವಾಗಿ ಈ ಕೃತ್ಯಕ್ಕೆ ಬೆಂಬಲ ನೀಡಿದ್ದಾರೆ. ಹೀಗಾಗಿ, ಕೂಡಲೇ ಜಿಲ್ಲಾಧಿಕಾರಿಯನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯದಲ್ಲಿ ಮಲಗುಂಡಿ ಸ್ವಚ್ಛ ಮಾಡುವ ಸಂದರ್ಭದಲ್ಲಿ ಸಾವಿಗೀಡಾಗುತ್ತಿರುವ ಶೇ.95 ರಷ್ಟು ಜನರು ದಲಿತರಾಗಿದ್ದಾರೆ. ಸರಕಾರ ಹಾಗೂ ಸಮಾಜ ಇಂದಿಗೂ ದಲಿತರು ನಮ್ಮ ಹಾಗೆ ಮನುಷ್ಯರು ಎಂಬ ಮಾನವೀಯ ವೌಲ್ಯವನ್ನು ಬೆಳೆಸಿಕೊಂಡಿಲ್ಲ ಎಂದ ಅವರು, ಮಲಹೊರುವ ಪದ್ಧತಿ ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಲು ಹಾಗೂ ಸಫಾಯಿ ಕರ್ಮಚಾರಿಗಳ ಪುನರ್ವಸತಿಗಾಗಿ 2013 ರಲ್ಲಿ ಕಾನೂನನ್ನು ಜಾರಿ ಮಾಡಲಾಗಿದೆ. ಆದರೆ, ದಿನನಿತ್ಯ ಈ ಕಾಯ್ದೆಯನ್ನು ಉಲ್ಲಂಘನೆ ಮಾಡಲಾಗುತ್ತಿದೆ ಎಂದು ದೂರಿದರು.

ಮಲಹೊರುವ ಪದ್ಧತಿಗೆ ಬೆಂಬಲ ನೀಡಿದ ಹಾಸನ ಜಿಲ್ಲಾಧಿಕಾರಿಯನ್ನು ಕೂಡಲೇ ಬಂಧಿಸಬೇಕು. ಮುಂದಿನ ಬಜೆಟ್‌ನಲ್ಲಿ ಮಲಹೊರುವ ಪದ್ಧತಿಗೆ ಸಿಲುಕಿರುವ ಎಲ್ಲರನ್ನು ಬಿಡುಗಡೆ ಮಾಡಿ ಪುನರ್ವಸತಿ ಕಲ್ಪಿಸಲು ಸೂಕ್ತ ಅನುದಾನ ಕಾಯ್ದಿರಿಸಬೇಕು. ಬಲವಂತವಾಗಿ ಈ ಪದ್ಧತಿ ಅಡಿ ಕೆಲಸ ಮಾಡಿಸುವ ಇಲಾಖೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಈ ಪದ್ಧತಿಯಿಂದ ಮರಣ ಹೊಂದಿದ ಕುಟುಂಬಗಳಿಗೆ 50 ಲಕ್ಷ ಪರಿಹಾರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News