ಭೂ ನ್ಯಾಯಮಂಡಳಿ ಮಾಜಿ ಸದಸ್ಯನ ವಿರುದ್ಧ ದೂರು ದಾಖಲಿಸಲು ಹೈಕೋರ್ಟ್ ಆದೇಶ
ಬೆಂಗಳೂರು, ಫೆ.1: ನ್ಯಾಯಾಲಯಕ್ಕೆ ನಕಲಿ ದಾಖಲೆ ಸಲ್ಲಿಸಿದ ಕಾರಣಕ್ಕೆ ಕರ್ನಾಟಕ ಭೂ ನ್ಯಾಯಮಂಡಳಿ ಮಾಜಿ ಸದಸ್ಯ ಎಂ.ನಾರಾಯಣ ಸ್ವಾಮಿ ವಿರುದ್ಧ ಕ್ರಿಮಿನಲ್ ಪ್ರಾಸಿಕ್ಯೂಷನ್ ನಡೆಸುವಂತೆ ರಿಜಿಸ್ಟ್ರಾರ್ಗೆ ಮತ್ತು ದೂರು ದಾಖಲಿಸಲು ಪೊಲೀಸರಿಗೆ ಹೈಕೋರ್ಟ್ ಗುರುವಾರ ಆದೇಶಿಸಿದೆ.
ಈ ಮಧ್ಯೆ ನ್ಯಾಯಮೂರ್ತಿಗಳ ನಿರ್ದೇಶನದ ಮೇರೆಗೆ ಕೋರ್ಟ್ ಹಾಲಿನಲ್ಲಿಯೇ ನಾರಾಯಣ ಸ್ವಾಮಿಯನ್ನು ವಶಕ್ಕೆ ಪಡೆದ ಪೊಲೀಸರು, ಒಂದೆರಡು ಗಂಟೆ ನಂತರ ಬಿಡುಗಡೆಗೊಳಿಸಿದರು.
ಜಮೀನುವೊಂದರ ವಿವಾದ ಸಂಬಂಧ ಹೊಸಕೋಟೆಯ ಇಂಜಿನಹಳ್ಳಿ ನಿವಾಸಿ ವಿ.ರಾಜಣ್ಣ ಹಾಗೂ ಇತರರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿತು.
ಪ್ರಕರಣವೇನು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಅಪ್ಪಸಂದ್ರ ಗ್ರಾಮದ ಸರ್ವೇ ನಂ 29ರ ಐದು ಎಕರೆ ಜಮೀನು ಮಾಲಕತ್ವದ ಬಗ್ಗೆ ಅರ್ಜಿದಾರ ವಿ.ರಾಜಣ್ಣ ಮತ್ತು ಕರ್ನಾಟಕ ಭೂ ನ್ಯಾಯಮಂಡಳಿಯ ಮಾಜಿ ಸದಸ್ಯ ಎಂ.ನಾರಾಯಣಸ್ವಾಮಿ ನಡುವೆ ವಿವಾದವಿದೆ. ಈ ಸಂಬಂಧ ವಿ.ರಾಜಣ್ಣ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ನಾರಾಯಣ ಸ್ವಾಮಿ ಪ್ರತಿವಾದಿಯಾಗಿದ್ದಾರೆ.
ಅರ್ಜಿಗೆ ನಾರಾಯಣ ಸ್ವಾಮಿ ಆಕ್ಷೇಪಣೆ ಸಲ್ಲಿಸಿದ್ದರು. ಹಾಗೆಯೇ, ಆಕ್ಷೇಪಣೆಯಲ್ಲಿನ ಎಲ್ಲ ಅಂಶಗಳು ಸತ್ಯದಿಂದ ಕೂಡಿವೆ ಎಂದು ಪ್ರಮಾಣೀಕರಿಸಿ ಪ್ರಮಾಣಪತ್ರ ಸಲ್ಲಿಸಿದ್ದರು. ಆದರೆ, ತಮ್ಮ ಆಕ್ಷೇಪಣೆ ಪತ್ರದೊಂದಿಗೆ ಸಲ್ಲಿಸಿದ್ದ ದಾಖಲೆ (ಗೇಣಿ)ಯಲ್ಲಿನ ಮಾಹಿತಿಯನ್ನು ನಾರಾಯಣ ಸ್ವಾಮಿ ತಿರುಚಿದ್ದರು. ಈ ಅಂಶ ಪತ್ತೆ ಹಚ್ಚಿದ ನ್ಯಾಯಮೂರ್ತಿಗಳು, ಮೂಲ ದಾಖಲೆ ಪರಿಶೀಲಿಸಿದಾಗ ದಾಖಲೆ ತಿರುಚಿರುವುದು ಬಹಿರಂಗವಾಯಿತು.
ಈ ವೇಳೆ ನಾರಾಯಣ ಸ್ವಾಮಿ ವಿವರಣೆ ನೀಡಿದರೂ ಅದಕ್ಕೆ ತೃಪ್ತರಾಗದ ನ್ಯಾಯಮೂರ್ತಿಗಳು, ನ್ಯಾಯಾಲಯಕ್ಕೆ ನಕಲಿ ದಾಖಲೆ ಸಲ್ಲಿಸಿರುವ ನಾರಾಯಣ ಸ್ವಾಮಿ ವಿರುದ್ಧ ಕ್ರಿಮಿನಲ್ ಪ್ರಾಸಿಕ್ಯೂಷನ್ ನಡೆಸುವಂತೆ ರಿಜಿಸ್ಟ್ರಾರ್ಗೆ ನಿರ್ದೇಶಿಸಿದರು. ಹಾಗೆಯೇ, ಪ್ರಕರಣ ಸಂಬಂಧ ದೂರು ದಾಖಲಿಸುವಂತೆ ಸಂಬಂಧಪಟ್ಟ ಠಾಣಾ ಪೊಲೀಸರಿಗೆ ಸೂಚಿಸಿದರು.
ನ್ಯಾಯಾಲಯದ ಆದೇಶದ ಮೇರೆಗೆ ಗುರುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಕೋರ್ಟ್ ಹಾಲಿನಲ್ಲಿಯೇ ನಾರಾಯಣಸ್ವಾಮಿಯನ್ನು ಹೈಕೋರ್ಟ್ ವಿಭಾಗದ ಪೊಲೀಸರು ವಶಕ್ಕೆ ಪಡೆದರು. ಸಂಜೆಯ ವೇಳೆಗೆ ಭದ್ರತಾ ಖಾತರಿ ಪಡೆದು ಬಿಡುಗಡೆ ಮಾಡಿದರು.