ಬೆಂಗಳೂರು: ಪಿಡಬ್ಲೂಡಿ ಎಂಜಿನಿಯರ್ಗಳ ವಿರುದ್ಧ ಎಸಿಬಿಗೆ ದೂರು
ಬೆಂಗಳೂರು, ಫೆ. 8: ಸರಕಾರಿ ಕಾಮಗಾರಿ ಗುತ್ತಿಗೆ ಪಡೆಯಲು ಶೇ.15ರಷ್ಟು ಹಣ ನೀಡುವ ಯೋಗತ್ಯೆ ಇರುವವರಷ್ಟೇ ಬನ್ನಿ. ಪದೇ ಪದೇ ತೊಂದರೆ ನೀಡಿದರೆ ಕೊಲೆ ಮಾಡಿಸುತ್ತೇವೆ ಎಂದು ಪಿಡಬ್ಲೂಡಿ ಕಾರ್ಯಪಾಲಕ ಎಂಜಿನಿಯರ್ ಎಚ್.ಆರ್.ಕೃಷ್ಣಮೂರ್ತಿ, ಸಹಾಯಕ ಎಂಜಿನಿಯರ್ ಜಿ.ಚಂದ್ರಶೇಖರ್ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘ, ಎಸಿಬಿಗೆ ದೂರು ನೀಡಿದೆ.
ಎಸ್ಸಿ-ಎಸ್ಟಿ ಗುತ್ತಿಗೆದಾರರು ಟೆಂಡರ್ ಪ್ರಕಟಣೆ ಪ್ರತಿ ಕೇಳಿದರೆ ನೀಡುವುದಿಲ್ಲ. ಅಲ್ಲದೆ, ನೋಟಿಸ್ ಬೋರ್ಡಿನಲ್ಲಿಯೂ ಪ್ರಕಟಿಸುವುದಿಲ್ಲ. ದಿನಪತ್ರಿಕೆಗಳಲ್ಲಿ ಪ್ರಕಟಣೆಯನ್ನು ನೀಡದೆ ಉದ್ದೇಶಪೂರ್ವಕವಾಗಿ ಟೆಂಡರ್ನಲ್ಲಿ ಭಾಗವಹಿಸುವುದನ್ನು ತಪ್ಪಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಶೇ.15ರಷ್ಟು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಮಹದೇವಸ್ವಾಮಿ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಸಂಬಂಧ ತನಿಖೆ ನಡೆಸಬೇಕು. ಪ್ಯಾಕೇಜ್ ಟೆಂಡರ್ ಆಹ್ವಾನಿಸದೆ ಕಾನೂನು ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೊಲೆ ಬೆದರಿಕೆ ಹಾಕಿದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನಿನ ಅನ್ವಯ ಕ್ರಮ ಜರುಗಿಸಬೇಕು ಎಂದು ಸಂಘದ ಅಧ್ಯಕ್ಷ ಎನ್.ಮಹದೇವಸ್ವಾಮಿ ದೂರಿನಲ್ಲಿ ಮನವಿ ಮಾಡಿದ್ದಾರೆ.