ಬೆಂಗಳೂರು: ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದವರ ಸೆರೆ

Update: 2018-02-14 15:49 GMT

ಬೆಂಗಳೂರು,ಫೆ.14: ನಗರದ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ಪಡೆದು ವಂಚನೆ ಮಾಡುತ್ತಿದ್ದ ಇಬ್ಬರನ್ನು ಆಗ್ನೇಯ ವಿಭಾಗದ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ನಾತಕೋತ್ತರ(ಪಿಜಿ) ಸೀಟು ಕೊಡಿಸುವುದಾಗಿ ನಂಬಿಸುತ್ತಿದ್ದ ನಗರದ ಎಲೆಕ್ಟ್ರಾನಿಕ್ ಸಿಟಿಯ ಡ್ಯಾಡೀಸ್ ಎಲಿಕ್ಸರ್ ಅಪಾರ್ಟ್‌ಮೆಂಟ್‌ನ ರಜತ್ ಶೆಟ್ಟಿ(31) ಹಾಗೂ ಕೊಡಿಗೆಹಳ್ಳಿಯ ಜಯಪ್ರಕಾಶ್ ಸಿಂಗ್(31) ಬಂಧಿತ ಆರೋಪಿಗಳು ಎಂದು ಗುರುತಿಸಿದ್ದು, ಅವರಿಂದ 1.3 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಿಟಿಎಂ ಲೇಔಟ್‌ನ 2ನೆ ಹಂತದಲ್ಲಿ ಗ್ಲೋಬಲ್ ಲರ್ನಿಂಗ್ ಅಂಡ್ ಎಜುಕೇಷನ್ ಕನ್ಸಲ್ಟೆನ್ಸಿ ಕಚೇರಿ ತೆಗೆದು ಸೀಟು ಕೊಡಿಸುವುದಾಗಿ ವೈದ್ಯಕೀಯ ವಿದ್ಯಾರ್ಥಿಗಳನ್ನು ವಂಚಿಸುತ್ತಿದ್ದರು. ಆರೋಪಿಗಳಿಂದ ವಂಚನೆಗೊಳಗಾದ ಸುದರ್ಶನ್, ಸಂದೀಪ್ ಹಾಗೂ ರಾಹುಲ್ ಕುಮಾರ್ ಎಂಬುವವರು ನೀಡಿದ್ದ ದೂರು ದಾಖಲಿಸಿ ತನಿಖೆ ಕೈಗೊಂಡ ಮೈಕೋ ಲೇಔಟ್ ಪೊಲೀಸ್ ಇನ್ಸ್‌ಪೆಕ್ಟರ್ ಆರ್.ಎಂ.ಅಜಯ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಲ್ಲಿ ರಜತ್ ಶೆಟ್ಟಿ ಕುಂದಾಪುರ ಮೂಲದವನಾಗಿದ್ದು, ಬಿಇ ಪದವೀಧರನಾಗಿದ್ದಾನೆ. ಮಣಿಪಾಲ್‌ನಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ಹಲವರಿಗೆ ವಂಚಿಸಿದ್ದ. ಈ ಸಂಬಂಧ 2013 ರಲ್ಲಿ ಮಣಿಪಾಲ್ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ 8 ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯದ ವಿಚಾರಣೆಯಲ್ಲಿವೆ.

ಇನ್ನೊಬ್ಬ ಆರೋಪಿ ಜಯಪ್ರಕಾಶ್ ಸಿಂಗ್ ಜಾರ್ಖಂಡ್‌ನ ಧನ್ ಭಾಗ್ ಮೂಲದವನಾಗಿದ್ದು, ಬಿಬಿಎಂ ಪದವೀಧರನಾಗಿದ್ದಾನೆ. ಈತನ ವಿರುದ್ಧ ಸಂಜಯ್ ನಗರ ಹಾಗೂ ಕೊಡಿಗೆಹಳ್ಳಿ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಬಂಧಿತ ಜಯಪ್ರಕಾಶ್ ಸಿಂಗ್ ಅತ್ತೆ, ಮಾವನ ಹೆಸರಿನಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಮುಂಗಡವಾಗಿರಿಸಿಕೊಂಡಿದ್ದ 50 ಲಕ್ಷ ರೂ. ಹಾಗೂ ಉಳಿತಾಯ ಖಾಯೆಯಲ್ಲಿದ್ದ 12 ಲಕ್ಷ ರೂ. ಮತ್ತು ಅಪಾರ್ಟ್‌ಮೆಂಟ್‌ವೊಂದು ಖರೀದಿ ಮಾಡಲು ಆರೋಪಿ ರಜತ್‌ಶೆಟ್ಟಿ ಮುಂಗಡವಾಗಿ ನೀಡಿದ್ದ 20 ಲಕ್ಷ ರೂ.ಗಳ ಜೊತೆಗೆ ಖಾಸಗಿಯವರಿಗೆ ನೀಡಿದ್ದ 9.45 ಲಕ್ಷ ರೂ. ಮತ್ತು ಷೇರುಗಳಲ್ಲಿ ತೊಡಗಿಸಿದ್ದ 12.5 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಅಲ್ಲದೆ, ಬಲೋನಾ ಕಾರು, ರಾಯಲ್ ಎನ್‌ಫೀಲ್ಡ್ ಬೈಕ್, 3 ಲಕ್ಷ ರೂ. ಬೆಲೆಯ ಚಿನ್ನಾಭರಣ, ಲ್ಯಾಪ್‌ಟಾಪ್ ಹಾಗೂ ಇತರೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳು ನಗರದ ವಿವಿಧೆಡೆ ಜೆ.ಪಿ. ಕನ್ಸಲ್ಟೆನ್ಸಿ, ನಾರಾಯಣ ಕನ್ಸಲ್ಟೆನ್ಸಿ, ಐಆರ್‌ಎಸ್ ಕನ್ಸಲ್ಟೆನ್ಸಿ ಇನ್ನಿತರ ಹೆಸರುಗಳಲ್ಲಿ 5 ಕಚೇರಿಗಳನ್ನು ತೆರೆದು ವೈದ್ಯಕೀಯ ಸೀಟು ಕೊಡಿಸುವುದಾಗಿ ಆಕಾಂಕ್ಷಿಗಳಿಂದ ಕೋಟ್ಯಂತರ ರೂ. ಗಳ ವಂಚನೆ ನಡೆಸಿ, ವಿದೇಶ ಪ್ರಯಾಣ ಮಾಡಿ, ಮೋಜು ಮಸ್ತಿ ಮಾಡುತ್ತಾ ವಿಲಾಸಿ ಜೀವನ ನಡೆಸುತ್ತಿರುವುದು ತನಿಖೆಯಲ್ಲಿ ಕಂಡು ಬಂದಿದೆ ಎಂದು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್  ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News