ಹಲವು ಪ್ರಥಮಗಳ ಗರಿ ಕರ್ನಾಟಕದ ಯಶಸ್ಸಿನ ಕಿರೀಟವನ್ನು ಅಲಂಕರಿಸಿದೆ: ಸಿದ್ದರಾಮಯ್ಯ

Update: 2018-02-16 16:16 GMT

ಬೆಂಗಳೂರು, ಫೆ. 16: ‘ಸರಕಾರವೆಂದರೆ, ಕನ್ನಡಿಗರ ಕಣ್ಣುಗಳಲ್ಲಿನ ಕನಸುಗಳನ್ನು ನನಸು ಮಾಡುವ ಭರವಸೆ. ನಾವು ಕೇವಲ ಕನಸು ಬಿತ್ತುವವರಲ್ಲ, ಬಿತ್ತಿದ ಕನಸನ್ನು ಬೆಳೆಸಿ ನನಸು ಮಾಡುವವರು. ಈ ಪ್ರಾಮಾಣಿಕ ಪ್ರಯತ್ನದ ಫಲವಾಗಿಯೇ ಕರ್ನಾಟಕ ದೇಶಕ್ಕೆ ಮಾದರಿ ರಾಜ್ಯವಾಗಿ ರೂಪುಗೊಳ್ಳುತ್ತಿದೆ. ಹಲವು ಪ್ರಥಮಗಳ ಗರಿ ಕರ್ನಾಟಕದ ಯಶಸ್ಸಿನ ಕಿರೀಟವನ್ನು ಅಲಂಕರಿಸಿದೆ’ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್ ಭಾಷಣದಲ್ಲಿ ‘ಕಾವ್ಯದ ವಾಗ್ಝರಿ’ಯನ್ನೇ ಹರಿಸಿದ್ದಾರೆ.

ಶುಕ್ರವಾರ ಬೆಳಗ್ಗೆ 11:32ರ ಸುಮಾರಿಗೆ ತಮ್ಮ ಸಂಪುಟ ಸಹೊದ್ಯೋಗಿಗಳೊಂದಿಗೆ ಅತ್ಯಂತ ಲವಲವಿಕೆಯಿಂದಲೇ ವಿಧಾನಸಭೆ ಸಭಾಂಗಣ ಪ್ರವೇಶಿಸಿದ ಸಿದ್ದರಾಮಯ್ಯ, ‘ಆಯವ್ಯಯ ಎಂದರೆ ನನ್ನ ಪಾಲಿಗೆ ಅಂಕಿ-ಅಂಶಗಳ ಕಸರತ್ತು ಅಲ್ಲ. ನಿರ್ಜೀವ ಲೆಕ್ಕಗಳ ಗಣಿತವೂ ಅಲ್ಲ. ಸರಳವಾಗಿ ಹೇಳುವುದಾದರೆ ಇದು ಈ ರಾಜ್ಯದ ಪ್ರತಿಯೊಬ್ಬ ಪ್ರಜೆಯ ನಿತ್ಯದ ಬದುಕಿನ ಲೆಕ್ಕ. ಆತನ ಮನೆಯ ಲೆಕ್ಕ ಎಂದು ಉಲ್ಲೇಖಿಸಿದರು.

‘ಒಲ್ಲನೆಂಬುದು ವೈರಾಗ್ಯ, ಒಲಿವೆನೆಂಬುದು ಕಾಯಗುಣ, ಆವ ಪದಾರ್ಥವಾದಡೇನು? ತನ್ನಿದ್ದೆಡೆಗೆ ಬಂದುವ, ಲಿಂಗಾರ್ಪಿತವ ಮಾಡಿ ಭೋಗಿಸುವುದೇ ಆಚಾರ, ಕೂಡಲ ಸಂಗಮ ದೇವರನೊಲಿಸ ಬಂದ, ಪ್ರಸಾದ ಕಾಯ ಕೆಡಿಸಲಾಗದು’ ಎನ್ನುವ ಬಸವಣ್ಣನ ವಚನವನ್ನು ಉಲ್ಲೇಖದೊಂದಿಗೆ ಬಜೆಟ್ ಭಾಷಣ ಆರಂಭಿಸಿದರು.

ಬಸವಣ್ಣ ಆರ್ಥಿಕ ಪರಿಣತರೂ ಹೌದು, ಬಿಜ್ಜಳನ ಆಸ್ಥಾನದಲ್ಲಿ ಅರ್ಥ ಸಚಿವರಾಗಿದ್ದ ಬಸವಣ್ಣ ನನ್ನ ಪಾಲಿನ ಮಾರ್ಗದರ್ಶಕ. ಅವರ ಧರ್ಮ, ಪ್ರಸಾದ ಕೆಡಿಸದ ಧರ್ಮವನ್ನೇ ನಾನು ನಂಬಿಕೊಂಡು ನಡೆದಿದ್ದೇನೆ. ಬೊಕ್ಕಸದಲ್ಲಿನ ತೆರಿಗೆ ಹಣವನ್ನು ನಿರ್ವಹಿಸುವ ಟ್ರಸ್ಟಿಯಾಗಿ ಕರ್ತವ್ಯ ನಿರ್ವಹಿಸಿದ್ದೇನೆ’ ಎಂದು ಅವರು ಹೇಳಿದರು.

‘ಮನುಷ್ಯರನ್ನು ಬದಲಾಯಿಸುವ ಹೋರಾಟದ ಮುಂಚೂಣಿಯಲ್ಲಿ ಹೆಣ್ಣು ಮಕ್ಕಳಿದ್ದರೆ ಮಾತ್ರ, ನಮಗೆ ಜಯ ಸಿಗಲು ಸಾಧ್ಯ. ಈ ಪಾತ್ರವನ್ನು ಅವಳಿಗೆ ನೀಡಬೇಕಾದುದು ಮಹಾ ಕರ್ತವ್ಯ’ ಎಂಬ ಗಾಂಧೀಜಿಯವರ ಮಾತುಗಳೊಂದಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಜೆಟ್ ಮಂಡಿಸಿದರು.

‘ಪ್ರೀತಿ ಕರುಣೆ ಸ್ನೇಹ ಮರುಕ, ಇವೇ ನಮ್ಮ ದೇವರು, ಇಲ್ಲಿ ಇಲ್ಲ ಜಾತಿಗೀತಿ, ಇಲ್ಲಿ ಇರುವುದೊಂದೇ ಪ್ರೀತಿ’ ಎನ್ನುವ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ ಕಾವ್ಯವನ್ನು ವಾಚಿಸಿ, ಜಾತಿ ಮೀರಿ ಪ್ರೀತಿ ಸಾರುವ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಅಲ್ಪಸಂಖ್ಯಾತರ ಇಲಾಖೆ ಆಯವ್ಯಯ ಮಂಡಿಸಿದರು.

‘ನಾವೆಲ್ಲರು ಒಂದೇ ಜಾತಿ, ಒಂದೇ ಮತ, ಒಂದೇ ಕುಲ; ನಾವು ಮನುಜರು’ ಎಂಬ ಗೋಪಾಲಕೃಷ್ಣ ಅಡಿಗ ಕಾವ್ಯದೊಂದಿಗೆ ಸಮಾಜ ಕಲ್ಯಾಣ ಇಲಾಖೆ ಆಯವ್ಯಯ ಮಂಡನೆ ಮಾಡಿದ ಸಿದ್ದರಾಮಯ್ಯ, ‘ಇದೇ ನನ್ನ ತಾಯಿ ನಾಡು, ಇದೇ ನನ್ನ ತೊಟ್ಟಿಲು, ಅನ್ನ ನೀರನಿತ್ತು ಸಲಹಿದಂತ, ತಟ್ಟೆ ಬಟ್ಟಲು ಆದಿಪಂಪ ಆಸೆಪಟ್ಟ, ದುಂಬಿಯಾಗಿ ಹುಟ್ಟಲು, ನಂದನಕ್ಕೆ ಇಲ್ಲಿಂದಲೇ ಇರುವುದೊಂದೇ ಮೆಟ್ಟಿಲು’ ಎನ್ನುವ ಸು.ರಂ.ಎಕ್ಕುಂಡಿಯವರ ಕವನವನ್ನು ಪಸ್ತಾಪಿಸಿ ಸಂಸ್ಕೃತಿ ಇಲಾಖೆ ಬಜೆಟ್ ಮಂಡನೆ ಮಾಡಿದರು.

‘ಹಳ್ಳಿಗಳು ಭಾರತದ ಆತ್ಮ’ ಎಂಬ ಮಹಾತ್ಮ ಗಾಂಧೀಜಿಯವರ ಮಾತುಗಳನ್ನು ಉಲ್ಲೇಖಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯವ್ಯಯ ಮಂಡಿಸಿದರು. ತಮ್ಮ ಬಜೆಟ್ ಭಾಷಣದಲ್ಲಿ ಶರಣರ ವಚನಗಳ ಉಲ್ಲೇಖ, ಕಾವ್ಯದ ವಾಗ್ಝರಿ ಮೂಲಕ ಆಯವ್ಯಯಕ್ಕೆ ಕಾವ್ಯದ ಸ್ಪರ್ಶ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News