ಪತ್ರಕರ್ತರಿಗೆ ‘ಮಾಧ್ಯಮ ಸಂಜೀವಿನಿ’: ವಾರ್ತಾ ಇಲಾಖೆಗೆ-239 ಕೋಟಿ ರೂ. ಅನುದಾನ
ಪತ್ರಿಕೆ ಹಂಚುವವರಿಗೆ ‘ಕ್ಷೇಮ ನಿಧಿ’
ಬೆಂಗಳೂರು, ಫೆ. 16: ಪತ್ರಕರ್ತರು ವೃತ್ತಿನಿರತ ಕೆಲಸಗಳ ವೇಳೆ ಅಪಘಾತಕ್ಕೆ ಒಳಗಾದರೆ, ಇಲ್ಲವೆ ಇನ್ನಿತರ ಅವಘಡಗಳಿಗೆ ತುತ್ತಾಗಿ ಅಕಾಲಿಕ ಮರಣ ಹೊಂದಿದ ಸಂದರ್ಭದಲ್ಲಿ ಅವರ ಕುಟುಂಬದವರಿಗೆ 5 ಲಕ್ಷ ರೂ.ವರೆಗಿನ ಜೀವ ವಿಮೆ ಖಾತರಿ ನೀಡಲು ‘ಮಾಧ್ಯಮ ಸಂಜೀವಿನಿ’ ಎಂಬ ಸಮೂಹ ಜೀವವಿಮೆ ಸೌಲಭ್ಯವನ್ನು ಪತ್ರಕರ್ತರಿಗೆ ಕಲ್ಪಿಸಲಾಗುವುದು.
ಪತ್ರಕರ್ತರಿಗೆ ನೀಡುತ್ತಿರುವ ರಾಜೀವ್ ಆರೋಗ್ಯ ಯೋಜನೆಯನ್ನು ಮತ್ತಷ್ಟು ಬಲವರ್ಧನೆಗೊಳಿಸುವ ಮೂಲಕ ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸಲಾಗುವುದು. ಡಾ.ರಾಜ್ಕುಮಾರ್ ಸ್ಮರಣಾರ್ಥ ರಾಜ್ಕುಮಾರ್ ಪುಣ್ಯಭೂಮಿ ಆವರಣದಲ್ಲಿ ಸುಸಜ್ಜಿತವಾದ ಯೋಗ ಕೇಂದ್ರ ಸ್ಥಾಪಿಸಲಾಗುವುದು.
ಪತ್ರಿಕೆಗಳನ್ನು ಮನೆಮನೆಗೆ ಹಂಚುತ್ತಾ ಅನಿಶ್ಚಿತ ಬದುಕು ಸಾಗಿಸುವ ಪತ್ರಿಕೆ ಹಂಚುವವರ ಕ್ಷೇಮಾಭಿವೃದ್ಧಿಗೆ 2 ಕೋಟಿ ರೂ.ಗಳ ‘ಕ್ಷೇಮ ನಿಧಿ’ ಸ್ಥಾಪಿಸಲಾಗುವುದು. ಬೆಂಗಳೂರಿನಲ್ಲಿ 5 ಕೋಟಿ ರೂ.ಗಳ ವೆಚ್ಚದಲ್ಲಿ ಪತ್ರಕರ್ತರ ಭವನವನ್ನು ನಿರ್ಮಿಸಲಾಗುವುದು.
ಕರ್ನಾಟಕ ಚಲನಚಿತ್ರ ಅಕಾಡೆಮಿಯ ಜೇನುಗೂಡು ಕಥಾ ಕಣಜದಿಂದ ಕಥೆಗಳನ್ನು ಆಯ್ದುಕೊಂಡು ಚಲನಚಿತ್ರ ನಿರ್ಮಿಸುವ ನಿರ್ಮಾಪಕರಿಗೆ ತಲಾ 20 ಲಕ್ಷ ರೂ. ಮತ್ತು ಕಥಾ ಲೇಖಕರಿಗೆ ತಲಾ 5 ಲಕ್ಷ ರೂ.ಗಳ ವಿಶೇಷ ಸಹಾಯಧನವನ್ನು ಪ್ರತಿ ವರ್ಷ 8 ಚಲನಚಿತ್ರಗಳಿಗೆ ನೀಡಲಾಗುವುದು.