ಜಾಗತಿಕ ಬದಲಾವಣೆಗೆ ವಿದ್ಯಾಕ್ಷೇತ್ರದ ಬೆಳವಣಿಗೆ ಅಗತ್ಯ: ಬಸವರಾಜರಾಯರಡ್ಡಿ

Update: 2018-02-18 16:44 GMT

ಧಾರವಾಡ, ಫೆ.18: ಉನ್ನತ ಶಿಕ್ಷಣದಲ್ಲಿ ನಮ್ಮ ರಾಜ್ಯವು ಸಾಕಷ್ಟು ಪ್ರಗತಿ ಸಾಧಿಸಿದೆ. ಕಳೆದ ಎರಡು ವರ್ಷಗಳ ಹಿಂದೆ ಶೇ.24ರಷ್ಟು ಇದ್ದ ಉನ್ನತ ಶಿಕ್ಷಣ ಬೆಳವಣಿಗೆಯು, ಈಗ ಶೇ.28ಕ್ಕೆ ಏರಿದೆಯಾದರೂ, ಜಾಗತಿಕ ಮಟ್ಟಕ್ಕೆ ಹೋಲಿಸಿದಾಗ ಮಹತ್ವದ ಅಭಿವೃದ್ಧಿ ಸಾಧಿಸಬೇಕಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜರಾಯರಡ್ಡಿ ತಿಳಿಸಿ್ದಾರೆ.

ನಗರದ ಕೃಷಿ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಉನ್ನತ ಶಿಕ್ಷಣ ಅಕಾಡಮಿಯ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಉಪನ್ಯಾಸಕರಿಗೆ ಅತ್ಯುತ್ತಮ ಗುಣಮಟ್ಟದ ತರಬೇತಿ ನೀಡಲು ರಾಜ್ಯ ಸರಕಾರವು ಧಾರವಾಡದಲ್ಲಿ ಉನ್ನತ ಶಿಕ್ಷಣ ಅಕಾಡಮಿ ಸ್ಥಾಪಿಸುತ್ತಿದೆ. ಕಷಿ ವಿವಿಯ ಕ್ಯಾಂಪಸ್ಸಿನ 27 ಎಕರೆ ಪ್ರದೇಶದಲ್ಲಿ 90 ಕೋಟಿ ರೂ.ವೆಚ್ಚದಲ್ಲಿ ತಲೆ ಎತ್ತಲಿರುವ ಉನ್ನತ ಶಿಕ್ಷಣ ಅಕಾಡಮಿಯು ದೇಶಕ್ಕೆ ಮಾದರಿಯಾದ ಸಂಸ್ಥೆಯಾಗಿ ರೂಪಿಸುವದು ನಮ್ಮ ಗುರಿಯಾಗಿದೆ ಎಂದು ಅವರು ಹೇಳಿದರು.

ಒಟ್ಟು 165 ಕೋಟಿ ರೂ.ಗಳ ಅನುಮೋದನೆಯನ್ನು ಸರಕಾರ ನೀಡಿದೆ. ಈಗಾಗಲೇ ಒಂದು ಹಂತದ ಕಾಮಗಾರಿ ಮುಗಿಯಬೇಕಾಗಿತ್ತು. ಆಡಳಿತಾತ್ಮಕ ಕಾರಣಗಳಿಂದಾಗಿ ಕೆಲಕಾಲ ವಿಳಂಬವಾಯಿತು. ಪ್ರೊ.ಎಸ್.ಎಂ.ಶಿವಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಧಾರವಾಡದ ಉನ್ನತ ಶಿಕ್ಷಣ ಅಕಾಡೆಮಿಯು ಇಡೀ ಶಿಕ್ಷಣ ರಂಗಕ್ಕೆ ದಿಕ್ಸೂಚಿಯಾಗಬಲ್ಲ ಸಂಸ್ಥೆಯಾಗಿ ರೂಪುಗೊಳ್ಳುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.

ನಮ್ಮ ರಾಜ್ಯದ ವಿವಿಗಳನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಕೊಂಡೊಯ್ಯುವ ಸಂಸ್ಥೆಯಾಗಲಿದೆ. 225 ಕೋಟಿ ರೂ.ವೆಚ್ಚದಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಾದರಿಯಲ್ಲಿ, ಬೆಂಗಳೂರಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಸ್ಥಾಪನೆ ಮಾಡಿದ್ದೇವೆ. ಇನ್ನು ಒಂದು ವಾರದ ಅವಧಿಯಲ್ಲಿ ಅದಕ್ಕೆ ನೂತನ ನಿರ್ದೇಶಕರನ್ನು ನೇಮಕ ಮಾಡಲಾಗುವುದು ಎಂದು ಬಸವರಾಜರಾಯರಡ್ಡಿ ಹೇಳಿದರು.

ನೆನೆಗುದಿಗೆ ಬಿದ್ದಿದ್ದ ಬೆಂಗಳೂರು ವಿವಿ ವಿಭಜನೆ ಕಾರ್ಯ ಪೂರ್ಣಗೊಳಿಸಲಾಗಿದೆ. ಕರ್ನಾಟಕ ರಾಜ್ಯ ಮುಕ್ತ ವಿವಿ ಸಮಸ್ಯೆಯನ್ನು ವಿಶೇಷ ಸಮಿತಿ ರಚಿಸಿ ಪರಿಹರಿಸಿ, 2013-14 ಹಾಗೂ 2014-15ರ ಸಾಲಿನ ವಿದ್ಯಾರ್ಥಿಗಳಿಗೆ ಶೀಘ್ರ ಪದವಿ ಪ್ರದಾನ ಮಾಡಲಾಗುವುದು. ಸಂಕಷ್ಟದಲ್ಲಿದ್ದ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಸಬಲಗೊಳಿಸಲಾಗಿದೆ. ವಿವಿಗಳ ಸಮಗ್ರ ಸುಧಾರಣೆಗಾಗಿ ಹೊಸ ಕಾಯ್ದೆಯನ್ನು ವಿಧಾನಸಭೆಯಲ್ಲಿ ಶೀಘ್ರ ಅನುಮೋದನೆ ಪಡೆದುಕೊಳ್ಳಲಾಗುವುದು. ಸ್ನಾತಕೋತ್ತರ ಪದವಿ ಗಳಿಸಿದವರು ಮಾತ್ರ ಇನ್ನು ಮುಂದೆ ಸಿಂಡಿಕೇಟ್ ಸದಸ್ಯರಾಗಲು ಸಾಧ್ಯ ಎಂದು ಅವರು ತಿಳಿಸಿದರು.

32 ಸಾವಿರ ಎಸ್ಸಿ ಹಾಗೂ ಎಸ್ಟಿ ವಿದ್ಯಾರ್ಥಿಗಳಿಗೆ ಈಗಾಗಲೇ ಲ್ಯಾಪ್ ಟಾಪ್ ವಿತರಣೆ ಮಾಡಲಾಗಿದೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲು ಯೋಜನೆ ರೂಪಿಸಲಾಗಿದೆ. ರಾಜಕೀಯ ಕಾರಣಗಳಿಗಾಗಿ ಅದನ್ನು ವಿಳಂಬ ಮಾಡಿಸಲಾಯಿತು. ಸದನ ಸಮಿತಿ ತನಿಖೆ ಮಾಡಿ ವರದಿ ನೀಡಿದೆ, ಟೆಂಡರ್ ಕರೆಯಲಾಗಿದೆ. 1.5 ಲಕ್ಷ ಸಾಮಾನ್ಯ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಫೆ.27 ರಂದು ಉದ್ಘಾಟನೆಯಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಎಲ್ಲ ಜಾತಿ, ಧರ್ಮಗಳ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಲ್ಯಾಪ್ ಟಾಪ್ ಸಿಗಲಿದೆ. ಸ್ನಾತಕೋತ್ತರ ಶಿಕ್ಷಣದವರೆಗೆ ಎಲ್ಲ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಘೋಸಿರುವುದು ಐತಿಹಾಸಿಕ ನಿರ್ಣಯವಾಗಿದೆ. ಈಗಾಗಲೇ 16 ವಸತಿಸಹಿತ ಕಾಲೇಜುಗಳನ್ನು ಆರಂಭಿಸಲಾಗಿದೆ. 2160 ಸಹಾಯಕ ಪ್ರಾಧ್ಯಾಪಕರನ್ನು ನೇಮಿಸಿ, ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಖಾಲಿ ಇದ್ದ ಹುದ್ದೆಗಳ ನೇಮಕಕ್ಕೆ ಒಪ್ಪಿಗೆ ನೀಡಲಾಗಿದೆ. ಶಿಕ್ಷಣಕ್ಕೆ ರಾಜ್ಯ ಬಜೆಟ್‌ನಲ್ಲಿ 31 ಸಾವಿರ ಕೋಟಿ ರೂ. ಮೀಸಲಿಟ್ಟಿದೆ ಎಂದು ಅವರು ಹೇಳಿದರು.

ಕಟ್ಟಡದ ಮಾದರಿ ಅನಾವರಣಗೊಳಿಸಿ ಮಾತನಾಡಿದ ಇಸ್ರೋದ ಮಾಜಿ ಅಧ್ಯಕ್ಷ ಪ್ರೊ.ಎ.ಎಸ್.ಕಿರಣ್‌ಕುಮಾರ್, ಇವತ್ತಿನ ಪ್ರಪಂಚದಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನ ಆಧರಿಸಿ ಹೊಸ ಹೊಸ ವಿಷಯಗಳಿಗೆ ತೆರೆದುಕೊಳ್ಳುತ್ತಿದ್ದಾರೆ. ಶಿಕ್ಷಕರು ಆ ಮಟ್ಟದಲ್ಲಿ ಸಿದ್ಧವಾಗಬೇಕು. ಉನ್ನತ ಶಿಕ್ಷಣ ಅಕಾಡಮಿಯು ಆ ನಿಟ್ಟಿನಲ್ಲಿ ತರಬೇತಿ, ಕಲಿಕೆಯ ಕೇಂದ್ರವನ್ನು ಕರ್ನಾಟಕ ಸರಕಾರ ಆರಂಭಿಸಿರುವುದು ಶ್ಲಾಘನೀಯ ಎಂದರು.

ಸಮಾರಂಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್‌ಕುಲಕರ್ಣಿ, ಶಾಸಕ ಅರವಿಂದ ಬೆಲ್ಲದ, ಅಕಾಡಮಿಯ ನಿರ್ದೇಶಕ ಪ್ರೊ.ಎಸ್.ಎಂ.ಶಿವಪ್ರಸಾದ್, ಕೃಷಿ ವಿವಿ ಕುಲಪತಿ ಪ್ರೊ.ಪ್ರಮೋದ್‌ಗಾಮಿ, ಸಮನ್ವಯಾಧಿಕಾರಿ ವಿ.ವಿ.ಘೋರ್ಪಡೆ, ಡಾ.ಅರುಂಧತಿ ಕುಲಕರ್ಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News