ಬೆಂಗಳೂರು: ಐಜಿಪಿ ಹರಿಶೇಖರನ್ ಜತೆ ಶಾಸಕ ಹಾರಿಸ್ ಸಮಾಲೋಚನೆ

Update: 2018-02-19 13:29 GMT

ಬೆಂಗಳೂರು, ಫೆ. 19: ವಿಧಾನಸಭೆಯ ಆಡಳಿತ ಪಕ್ಷದ ಮೊಗಸಾಲೆಯಲ್ಲಿನ ಸಚಿವರ ವಿಶ್ರಾಂತಿ ಕೊಠಡಿಯಲ್ಲಿ ಪೊಲೀಸ್ ಕೇಂದ್ರ ಕಚೇರಿ ಆಡಳಿತ ವಿಭಾಗದ ಐಜಿಪಿ ಹರಿಶೇಖರನ್ ಜತೆ ಶಾಸಕ ಹಾರಿಸ್ ಸಮಾಲೋಚನೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ಸೋಮವಾರ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸದನಕ್ಕೆ ಆಗಮಿಸಿದ್ದ ಶಾಸಕ ಹಾರಿಸ್ ಕೆಲ ಕಾಲ ಕಲಾಪದಲ್ಲಿ ಪಾಲ್ಗೊಂಡಿದ್ದರು. ಆ ಬಳಿಕ ತಮ್ಮ ಪುತ್ರ ಮೊಹಮ್ಮದ್ ನಲಪಾಡ್ ಎರಡು ದಿನಗಳ ಹಿಂದೆ ಹೊಟೇಲ್‌ವೊಂದರಲ್ಲಿ ವಿದ್ವತ್ ಎಂಬವರ ಮೇಲೆ ಹಲ್ಲೆ ನಡೆಸಿದ್ದರು. ಈ ಪ್ರಕರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಸ್ವತಃ ಹಾರಿಸ್ ಅವರಿಗೆ ತೀವ್ರ ಮುಜುಗರ ಸೃಷ್ಟಿಸಿತ್ತು. ಹೀಗಾಗಿ ಪ್ರಕರಣ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಿದ್ದರಾಮಯ್ಯ ಸೂಚನೆ ನೀಡಿದ್ದರು.

ಹೀಗಾಗಿ ಆ ಪ್ರಕರಣದ ಹಿನ್ನೆಲೆಯಲ್ಲಿ ಶಾಸಕ ಹಾರಿಸ್ ಅವರೊಂದಿಗೆ ಐಜಿಪಿ ಹರಿಶೇಖರನ್ ವಿಧಾನಸಭೆ ಮೊಗಸಾಲೆಯಲ್ಲಿ ಸಮಾಲೋಚನೆ ನಡೆಸಿರುವುದು ತೀವ್ರ ಕುತೂಹಲ ಸೃಷ್ಟಿಸಿದೆ. ಈ ಮಧ್ಯೆ ಹೊಟೇಲ್‌ನಲ್ಲಿ ನಡೆದಿದ್ದ ಹಲ್ಲೆ ಪ್ರಕರಣ ಸಂಬಂಧ ಶಾಸಕ ಹಾರಿಸ್ ಪುತ್ರ ಆರೋಪಿ ಮೊಹಮ್ಮದ್ ನಲಪಾಡ್ ಪೊಲೀಸರಿಗೆ ಶರಣಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News