ಮೂಲವ್ಯಾಧಿಯಿಂದ ನರಳುತ್ತಿದ್ದೀರಾ?: ಹಾಗಿದ್ದರೆ ಈ ಆಹಾರಗಳನ್ನು ಸೇವಿಸಬೇಡಿ

Update: 2018-02-19 14:07 GMT

ಅತ್ಯಂತ ರಗಳೆಯ ಕಾಯಿಲೆಯೇನಾದರೂ ಇದ್ದರೆ ಅದು ಮೂಲವ್ಯಾಧಿ. ಮಲಬದ್ಧತೆ ಈ ರೋಗಕ್ಕೆ ಮೂಲಕಾರಣ. ಆದರೆ ಹೆಚ್ಚಿನವರು ಮಲಬದ್ಧತೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಮೂಲವ್ಯಾಧಿಯಿಂದ ನರಳುತ್ತಿರುವವರಲ್ಲಿ ಹೆಚ್ಚಿನವರು ಮುಜುಗರ ದಿಂದಾಗಿ ವೈದ್ಯರಲ್ಲಿ ಹೋಗುವುದೇ ಇಲ್ಲ ಮತ್ತು ಅಸಹನೀಯ ನೋವನ್ನು ಮೌನವಾಗಿ ಸಹಿಸಿಕೊಳ್ಳುತ್ತಿರುತ್ತಾರೆ. ಆದರೆ ಮೂಲವ್ಯಾಧಿಗೆ ಆರಂಭದಲ್ಲಿಯೇ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಮುಂದೆ ತೀವ್ರ ಸಮಸ್ಯೆಯನ್ನೆದುರಿಸಬೇಕಾಗುತ್ತದೆ. ನೀವು ಮೂಲವ್ಯಾಧಿಯಿಂದ ನರಳುತ್ತಿರುವ ವ್ಯಕ್ತಿಯಾಗಿದ್ದರೆ ಕೆಲವು ದಿನಗಳಲ್ಲಿ ಮಲವಿಸರ್ಜನೆ ಸಂದರ್ಭದಲ್ಲಿ ಇತರ ದಿನಗಳಿಗಿಂತ ಹೆಚ್ಚಿನ ನೋವು ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ನೀವು ಮುನ್ನಾದಿನ ರಾತ್ರಿ ಸೇವಿಸಿದ ಆಹಾರ ಇದಕ್ಕೆ ಕಾರಣವಾಗಿರುತ್ತದೆ. ಆದ್ದರಿಂದ ಮೂಲವ್ಯಾಧಿಯಿಂದ ನರಳುತ್ತಿದ್ದರೆ ಇಲ್ಲಿ ಪಟ್ಟಿ ಮಾಡಿರುವ ಆಹಾರಗಳಿಂದ ದೂರವೇ ಇರಿ.....

►ಕರಿದ ಮತ್ತು ಸಂಸ್ಕರಿತ ಆಹಾರಗಳು

 ಶೀತಲೀಕೃತ ಊಟದಂತಹ ಸಂಸ್ಕರಿತ ಆಹಾರಗಳು, ಫಾಸ್ಟ್‌ಫುಡ್ ಮತ್ತು ಕರಿದ ಆಹಾರ ಪದಾರ್ಥಗಳು ಜೀರ್ಣಗೊಳ್ಳುವುದು ಕಷ್ಟ. ಅವು ಕೆಲವೇ ಪೋಷಕಾಂಶಗಳು, ಅಧಿಕ ಉಪ್ಪು ಮತ್ತು ಅನಾರೋಗ್ಯಕರ ಕೊಬ್ಬುಗಳನ್ನು ಒಳಗೊಂಡಿರುತ್ತವೆ. ಇವೆಲ್ಲ ಜೀರ್ಣಕ್ರಿಯೆಯಲ್ಲಿ ತೊಂದರೆ ಮತ್ತು ಮಲಬದ್ಧತೆಗೆ ಕಾರಣವಾಗುತ್ತವೆ.

►ಮಸಾಲೆಭರಿತ ಆಹಾರ

ನೀವು ಮಸಾಲೆಭರಿತ ಆಹಾರವನ್ನು ಇಷ್ಟಪಡುತ್ತೀರಾ? ಆದರೆ ಮೂಲವ್ಯಾಧಿಯಿಂದ ನರಳುತ್ತಿದ್ದರೆ ಇಂತಹ ಆಹಾರಗಳನ್ನು ಸೇವಿಸುವ ಮುನ್ನ ಎರಡೆರಡು ಬಾರಿ ಯೋಚಿಸಿ, ಏಕೆಂದರೆ ಇವು ಮಲವಿಸರ್ಜನೆ ಸಂದರ್ಭದಲ್ಲಿ ಹೆಚ್ಚಿನ ನೋವಿಗೆ ಕಾರಣವಾಗುತ್ತವೆ.

►ಮದ್ಯ

ಮೂಲವ್ಯಾಧಿ ರೋಗಿಗಳು ಮದ್ಯ ಸೇವನೆಯ ಅಭ್ಯಾಸ ಹೊಂದಿದ್ದರೆ ಅದಕ್ಕೆ ಕಡಿವಾಣ ಹಾಕಲೇಬೇಕು. ಮದ್ಯವು ಜೀರ್ಣಕ್ರಿಯೆಯ ಅಸಮತೋಲನಕ್ಕೆ ಕಾರಣವಾಗುವ ಜೊತೆಗೆ ಕರುಳಿನ ನಿರ್ಜಲೀಕರಣವನ್ನೂ ಉಂಟು ಮಾಡುತ್ತದೆ.

►ಡೇರಿ ಉತ್ಪನ್ನಗಳು

ಡೇರಿ ಉತ್ಪನ್ನಗಳು ಹೆಚ್ಚಿನ ಸಲ ಹೊಟ್ಟೆಯಲ್ಲಿ ವಾಯು, ನೋವು ಮತ್ತು ಮಲಬದ್ಧತೆಗೆ ಕಾರಣವಾಗುತ್ತವೆ. ಮೂಲವ್ಯಾಧಿ ಉಲ್ಬಣ ಸ್ಥಿತಿಯಲ್ಲಿದ್ದಾಗ ಹಾಲು, ಚೀಸ್ ಮತ್ತು ಇತರ ಡೇರಿ ಉತ್ಪನ್ನಗಳ ಸೇವನೆ ಪರಿಸ್ಥಿತಿಯು ಇನ್ನಷ್ಟು ಬಿಗಡಾಯಿಸಲು ಕಾರಣ ವಾಗುತ್ತದೆ.

►ಅಪಕ್ವ ಹಣ್ಣುಗಳು

ಮೂಲವ್ಯಾಧಿಯ ಲಕ್ಷಣಗಳನ್ನು ನಿವಾರಿಸುವಲ್ಲಿ ಹಣ್ಣುಗಳು ಮುಖ್ಯಪಾತ್ರವನ್ನು ವಹಿಸುತ್ತವೆ. ಆದರೆ ನೀವು ಸೇವಿಸುವ ಹಣ್ಣುಗಳು ಸಂಪೂರ್ಣವಾಗಿ ಮಾಗಿರಬೇಕು ಎನ್ನುವುದನ್ನು ನೆನಪಿಟ್ಟುಕೊಳ್ಳಿ. ಪಕ್ವಗೊಂಡಿರದ ಹಣ್ಣುಗಳು ಮಲಬದ್ಧತೆ ಮತ್ತು ಕೆರಳಿಸುವಿಕೆಗೆ ಕಾರಣವಾಗುವ ಕೆಲವು ಸಂಯುಕ್ತಗಳನ್ನು ಒಳಗೊಂಡಿರಬಹುದು ಮತ್ತು ಇವು ನೋವು ಹಾಗೂ ನರಳುವಿಕೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ. * ಸಂಸ್ಕರಿತ ಧಾನ್ಯಗಳು

ಬಿಳಿ ಅಕ್ಕಿ, ಬಿಳಿ ಬ್ರೆಡ್, ಕುಕೀಸ್ ಮತ್ತು ಕೇಕ್‌ನಂತಹ ಸಂಸ್ಕರಿತ ಆಹಾರಗಳು ತಮ್ಮಲ್ಲಿರುವ ಮುಖ್ಯ ಪೋಷಕಾಂಶಗಳನ್ನು ಕಳೆದುಕೊಂಡಿರುತ್ತವೆ ಮತ್ತು ಅವುಗಳಲ್ಲಿ ನಾರು ಅತ್ಯಲ್ಪ ಪ್ರಮಾಣದಲ್ಲಿರುತ್ತದೆ. ಹೀಗಾಗಿ ಸಂಸ್ಕರಿತ ಧಾನ್ಯಗಳ ಬದಲು ಇಡಿಯ, ಸಾರವನ್ನು ಕಳದುಕೊಂಡಿರದ ಧಾನ್ಯಗಳನ್ನು ಬಳಸಿ.

►ಅಧಿಕ ಉಪ್ಪಿರುವ ಆಹಾರಗಳು

ಚಿಪ್ಸ್, ಉಪ್ಪು ಬೆರೆಸಿದ ನೆಲಗಡಲೆ ಬೀಜಗಳನ್ನು ಇಷ್ಟಪಡದವರಿಲ್ಲ. ಪಾಸ್ತಾ ಮಿಕ್ಸ್‌ಗಳು, ಸಾಸೇಜ್ ಮತ್ತು ಕ್ಯಾನ್ಡ್ ಫುಡ್ ಇತ್ಯಾದಿಗಳೂ ಈ ಸಾಲಿನಲ್ಲಿವೆ. ಆದರೆ ಇವುಗಳಲ್ಲಿ ಉಪ್ಪು ಅಧಿಕ ಪ್ರಮಾಣದಲ್ಲಿರುವುದರಿಂದ ಅವು ಗುದದ್ವಾರದಲ್ಲಿ ನಿಮಗೆ ತೊಂದರೆ ನೀಡುತ್ತಿರುವ ರಕ್ತನಾಳಗಳು ಸೇರಿದಂತೆ ಎಲ್ಲ ರಕ್ತನಾಳಗಳ ಮೇಲೆ ದುಷ್ಪರಿಣಾಮಗಳನ್ನು ಉಂಟು ಮಾಡುತ್ತವೆ.

►ಕಬ್ಬಿಣಾಂಶದ ಪೂರಕಗಳು ಮತ್ತು ಇತರ ಕೆಲವು ಔಷಧಿಗಳು

ಮೂಲವ್ಯಾಧಿಯಿಂದ ನರಳುವುದಕ್ಕೆ ಮೊದಲು ನೀವು ಕಬ್ಬಿಣಾಂಶದ ಪೂರಕಗಳನ್ನು ಸೇವಿಸುತ್ತಿರಬಹುದು. ಆದರೆ ಕಬ್ಬಿಣವು ಮಲಬದ್ಧತೆಯನ್ನುಂಟು ಮಾಡುತ್ತದೆ. ಅಲ್ಲದೆ ಶೀತ ಮತ್ತು ಕೆಮ್ಮಿನಿಂದ ಪಾರಾಗಲು ಬಳಸುವಂತಹ ಕೆಲವು ಸಾಮಾನ್ಯ ಉಪಯೋಗದ ಔಷಧಿಗಳೂ ಮಲಬದ್ಧತೆಯ ತೊಂದರೆಗೆ ಕಾರಣವಾಗುತ್ತವೆ. ನೀವು ತೆಗೆದುಕೊಳ್ಳುತ್ತಿರುವ ಔಷಧಿಗಳನ್ನು ನಿಲ್ಲಿಸುವ ಅಥವಾ ಅವುಗಳ ಸೇವನೆಯ ಪ್ರಮಾಣವನ್ನು ಬದಲಿಸುವ ಗೋಜಿಗೆಂದೂ ಹೋಗಬೇಡಿ. ನಿಮ್ಮ ವ್ಯೆದ್ಯರನ್ನು ಸಂಪರ್ಕಿಸಿ ಅವರ ಸಲಹೆಗಳನ್ನು ಪಡೆದುಕೊಳ್ಳುವದು ಒಳ್ಳೆಯದು.

►ಅತಿಯಾದ ನಾರು

ಮಲಬದ್ಧತೆಯಿಂದ ಪಾರಾಗಲು ಹೆಚ್ಚಿನ ನಾರನ್ನು ಸೇವಿಸಿ ಎಂದು ನಿಮ್ಮ ಹಿತೈಷಿಗಳು ಸಲಹೆ ನೀಡಬಹುದು. ಆದರೆ ಅವುಗಳನ್ನು ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಟ್ಟುಬಿಡಿ. ನಾರುಗಳು ಮಲವಿಸರ್ಜನೆ ಸುಸೂತ್ರವಾಗುವಂತೆ ಮಾಡುತ್ತವೆ ಯೇನೋ ಹೌದು. ಆದರೆ ಅವು ಇತರ ಬಗೆಯ ಮಲಬದ್ಧತೆಗಳಿಗೆ ಪ್ರಯೋಜನ ಕಾರಿಯೇ ಹೊರತು ಮೂಲವ್ಯಾಧಿಗಲ್ಲ. ನಿಮ್ಮ ಕರುಳನ್ನು ಆರೋಗ್ಯಕರವಾಗಿರಿಸಲು ನಿಯಮಿತವಾಗಿ ಸೀಮಿತ ಪ್ರಮಾಣದಲ್ಲಿ ನಾರುಗಳ ಸೇವನೆ ಒಳ್ಳೆಯದು. ನೀವು ಏಕಾಏಕಿಯಾಗಿ ಹೆಚ್ಚಿನ ನಾರಿನ ಸೇವನೆಯನ್ನು ಆರಂಭಿಸಬೇಕಿಲ್ಲ. ಕ್ರಮೇಣ ಅದರ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು.

ಮೂಲವ್ಯಾಧಿಗೆ ಹೆದರಿಕೊಳ್ಳಬೇಕಿಲ್ಲ. ಮೂಲವ್ಯಾಧಿ ಬಂದಿತೆಂದರೆ ಜಗತ್ತೇ ಕೊನೆಯಾಯಿತು ಎಂಬ ಅರ್ಥವಲ್ಲ. ಅದನ್ನು ದಿಢೀರಾಗಿ ವಾಸಿ ಮಾಡುವ ಯಾವುದೇ ಪವಾಡವಿಲ್ಲ,ನಿಜ. ಆದರೆ ಸೂಕ್ತವೈದ್ಯರಿಂದ ಚಿಕಿತ್ಸೆ ಮತ್ತು ಸೂಕ್ತ ಆಹಾರ ಸೇವನೆಯಿಂದ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News