ಬೆಂಗಳೂರು: ಬಡ ನಿವಾಸಿಗಳಿಗೆ ಹಕ್ಕು ಪತ್ರ ನೀಡಲು ಒತ್ತಾಯಿಸಿ ಧರಣಿ

Update: 2018-02-19 17:01 GMT

ಬೆಂಗಳೂರು, ಫೆ.19: ನಗರದ ಸಿಂಗಸಂದ್ರ ಗ್ರಾಮದ ಅಂಬೇಡ್ಕರ್ ನಗರದಲ್ಲಿನ 350ಕ್ಕೂ ಹೆಚ್ಚು ಬಡ ನಿವಾಸಿಗಳಿಗೆ ಸರಕಾರ ಹಕ್ಕು ಪತ್ರ ನೀಡುವಂತೆ ದಲಿತ ಸಂಘರ್ಷ ಸಮಿತಿ(ಸಮತಾವಾದ) ಆಗ್ರಹಿಸಿದೆ.

ಸೋಮವಾರ ನಗರದ ಪುರಭವನದ ಎದುರು ದಸಂಸ(ಸಮತಾವಾದ) ನೇತೃತ್ವದಲ್ಲಿ ಅಂಬೇಡ್ಕರ್ ನಗರದ ವಾಸಿಸುತ್ತಿರುವ ದಲಿತರಿಗೆ ಹಕ್ಕುಪತ್ರಗಳನ್ನು ವಿತರಿಸದೇ ವಿಳಂಬ ನೀತಿ ಅನುಸರಿಸುತ್ತಿರುವುದು ಖಂಡಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಮಿತಿ ಅಧ್ಯಕ್ಷ ಎಚ್.ಮಾರಪ್ಪ,ಬೆಂಗಳೂರು ನಗರ ಜಿಲ್ಲೆಯ ಸಿಂಗಸಂದ್ರ ಗ್ರಾಮದ ಅಂಬೇಡ್ಕರ್ ನಗರದಲ್ಲಿ 35 ವರ್ಷಗಳಿಂದ ಸರಕಾರಿ ಜಾಗದಲ್ಲಿ 350ಕ್ಕೂ ಅಧಿಕ ದಲಿತ ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಂಡಿದ್ದು, ಸರಕಾರ ಇದುವರೆಗೆ ಹಕ್ಕುಪತ್ರ ನೀಡದೇ ವಂಚಿಸುತ್ತಿದೆ ಎಂದು ಆರೋಪಿಸಿದರು.

ಬೆಂ.ದಕ್ಷಿಣ ತಾಲೂಕಿನ ಚಿಕ್ಕಬೇಗೂರು, ಶ್ರೀನಗರ ಗುಟ್ಟೆ ಪ್ರದೇಶದಲ್ಲಿ ಹತ್ತಾರು ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡಿರುವವರಿಗೆ ಕೂಡಲೇ ಹಕ್ಕುಪತ್ರ ನೀಡಬೇಕು. ಇನ್ನು, ಬೆಂ.ಉತ್ತರ ತಾಲೂಕಿನ ಕೊಂಡಪ್ಪ ಬಡಾವಣೆ, ಕೋಗಿಲು ಬಡಾವಣೆ, ಹೆಬ್ಬಾಳ ಕುಂತಿ ಗ್ರಾಮ, ಮತ್ತೀಕೆರೆ ಎಂ.ಆರ್.ಜಯರಾಂ ಕಾಲನಿ, ಲಗ್ಗೆರೆ, ಹೆಗ್ಗನವಳ್ಳಿ ಗ್ರಾಮಗಳಲ್ಲಿ ನೂರಾರು ದಲಿತರು ಮನೆಗಳನ್ನು ನಿರ್ಮಿಸಿಕೊಂಡಿದ್ದು, ಅವರಿಗೆ ಸೂಕ್ತ ಭದ್ರತೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಭಾವಿ ರಾಜಕಾರಣಿಗಳು, ಕಾರ್ಪೋರೇಟ್ ಕಂಪೆನಿಗಳು, ಉಳ್ಳವರು, ಸ್ಥಳೀಯ ಪ್ರಭಾವಿಗಳು ದಬ್ಬಾಳಿಕೆ ನಡೆಸಿ ನೂರಾರು ಎಕರೆ ಭೂಮಿಯನ್ನು ಕಬಳಿಸುತ್ತಿದ್ದಾರೆ. ಆದರೆ, ನಿವೇಶನ ರಹಿತರಿಗೆ ಹಾಗೂ ಭೂಮಿಯಿಲ್ಲದವರಿಗೆ ಭೂ ಮತ್ತು ನಿವೇಶ ನೀಡಲು ಕಾನೂನು ತೊಡಕಿದೆ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರ ಪ್ರದೇಶದಲ್ಲಿರುವ ದಲಿತರು ಬಾಡಿಗೆ ಮನೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಅವರಿಗೆ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗದೇ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಮತ್ತೊಂದು ಕಡೆ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ, ಕುಟುಂಬ ನಿರ್ವಹಣೆ ಕಠಿಣ ಸ್ಥಿತಿಯಲ್ಲಿದ್ದಾರೆ. ಇದರ ನಡುವೆ ಸರಕಾರಿ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡಿರುವ ದಲಿತರನ್ನು ಒಕ್ಕಲೆಬ್ಬಿಸುವ ಮೂಲಕ ನಮ್ಮನ್ನಾಳುತ್ತಿರುವ ಸರಕಾರಗಳು ದಲಿತರನ್ನು ಬೀದಿ ಪಾಲು ಮಾಡಲು ಮುಂದಾಗಿದ್ದಾರೆ ಎಂದು ಆಪಾದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News