ಬೆಂಗಳೂರು: ಸಿಬ್ಬಂದಿ ಆಧಾರಿತ ವೇತನ ಅನುದಾನ ನೀಡಲು ಆಗ್ರಹ

Update: 2018-02-19 17:39 GMT

ಬೆಂಗಳೂರು, ಫೆ. 19: ವಿದ್ಯಾರ್ಥಿ ಕೇಂದ್ರಿತ ಅನುದಾನ ಪದ್ಧತಿಯನ್ನು ರದ್ದುಪಡಿಸಿ ಸಿಬ್ಬಂದಿ ಆಧಾರಿತ ವೇತನ ಅನುದಾನಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸಿ ರಾಜ್ಯ ಖಾಸಗಿ ಐಟಿಐಗಳ ಅನುದಾನ ಹೋರಾಟ ಸಮನ್ವಯ ಸಮಿತಿ ವತಿಯಿಂದ ಫೆ. 21 ರಂದು ನಗರದ ಪುರಭವನದ ಎದುರು ಧರಣಿ ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸಂಚಾಲಕ ಕೆ.ಕಲವೀರಾಚಾರ್ಯ, ಸರಕಾರವು ಡಿಜಿಇಟಿ ಸಂಯೋಜನೆ ಪಡೆದು 7 ವರ್ಷಗಳನ್ನು ಪೂರೈಸಿದ ಐಟಿಐಗಳಿಗೆ 2010 ರವರೆಗೂ ಸಿಬ್ಬಂದಿ ಆಧಾರಿತವಾಗಿ 196 ಐಟಿಐಗಳಿಗೆ ವೇತನ ಅನುದಾನ ನೀಡಲಾಗಿದೆ. ಆದರೆ, ಕಳೆದ 8 ವರ್ಷಗಳಿಂದ ಈ ಅನುದಾನ ನಿಲ್ಲಿಸಿದ್ದಾರೆ. ಇದರಿಂದಾಗಿ ಐಟಿಐಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ ಎಂದು ಹೇಳಿದರು.

ಈಗಾಗಲೇ 7 ವರ್ಷ ಪೂರೈಸಿದ ಅರ್ಹ ಐಟಿಐಗಳನ್ನು ಇಲಾಖೆಯಿಂದ ಪರಿವೀಕ್ಷಣೆಗೆ ಒಳಪಡಿಸಿ ಪಟ್ಟಿಯನ್ನು ಸಿದ್ಧಪಡಿಸಿ ಅಂದಾಜು ವೆಚ್ಚದೊಂದಿಗೆ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಈ ಸಂಬಂಧ ಸಚಿವ ಸಂಪುಟ ಉಪಸಮಿತಿಯು ಸಚಿವ ಸಂಪುಟಕ್ಕೆ ಶಿಫಾರಸ್ಸು ಮಾಡಲಾಗಿದೆ. ಆದುದರಿಂದ ಕೂಡಲೇ ವಿದ್ಯಾರ್ಥಿ ಕೇಂದ್ರೀಕೃತ ಅನುದಾನ ಪದ್ಧತಿ ರದ್ದು ಮಾಡಿ, ಸಿಬ್ಬಂದಿ ಆಧಾರಿತ ವೇತನ ಅನುದಾನಕ್ಕೆ ಒಳಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News