×
Ad

107 ಅಭ್ಯರ್ಥಿಗಳ ನೇಮಕಾತಿ ಆದೇಶ ಶೀಘ್ರ: ಬಸವರಾಜ ರಾಯರೆಡ್ಡಿ

Update: 2018-02-21 19:51 IST

ಬೆಂಗಳೂರು, ಫೆ.21: ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಹುದ್ದೆಗಳಿಗೆ ಕೆಇಎಯಿಂದ ನೇಮಕಾತಿಗೊಂಡು ಸರಕಾರಿ ಆದೇಶಕ್ಕೆ ಕಾಯುತ್ತಿರುವ 107 ಅಭ್ಯರ್ಥಿಗಳಿಗೆ ಮಂದಿನ ವಾರದೊಳಗೆ ನೇಮಕಾತಿ ಆದೇಶವನ್ನು ಹೊರಡಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದರು.

ವಿಧಾನಪರಿಷತ್‌ನಲ್ಲಿ ನಿಯಮ 330ರ ಅಡಿಯಲ್ಲಿ ಪರಿಷತ್ ಸದಸ್ಯ ಪುಟ್ಟಣ್ಣ ಪ್ರಶ್ನೆಗೆ ಉತ್ತರಿಸಿದ ಅವರು, ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇದ್ದ 2,060 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಿಂದ 2,034 ಅಭ್ಯರ್ಥಿಗಳು ನೇಮಕಾತಿ ಆಗಿದ್ದಾರೆ. ಇದರಲ್ಲಿ 1,902 ಅಭ್ಯರ್ಥಿಗಳಿಗೆ ಸರಕಾರ ಈಗಾಗಲೆ ನೇಮಕಾತಿ ಆದೇಶವನ್ನು ಹೊರಡಿಸಿದೆ. ಈ ಪೈಕಿ 1,880 ಅಭ್ಯರ್ಥಿಗಳಿಗೆ ಕಾಲೇಜು ಶಿಕ್ಷಣ ಇಲಾಖೆ ಕೌನ್ಸೆಲಿಂಗ್ ನಡೆಸಿ ಸ್ಥಳನಿಯುಕ್ತಿ ಆದೇಶವನ್ನು ನೀಡಿರುತ್ತಾರೆ. 13ಅಭ್ಯರ್ಥಿಗಳು ಸರಕಾರದಿಂದ ನೇಮಕಾತಿ ಆದೇಶವನ್ನು ಪಡೆದಿದ್ದು, ಸ್ಥಳ ನಿಯುಕ್ತಿಗಾಗಿ ಕೌನ್ಸಲಿಂಗ್‌ಗೆ ಹಾಜರಾಗಿಲ್ಲ. ಹಾಗೂ 9 ಅಭ್ಯರ್ಥಿಗಳ ನೇಮಕಾತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣಗಳು ಬಾಕಿಯಿರುವುದರಿಂದ ಅವರಿಗೆ ನೇಮಕಾತಿ ನೀಡಿದಾಗಿಯೂ ಸ್ಥಳನಿಯುಕ್ತಿ ಆದೇಶ ನೀಡಿಲ್ಲವೆಂದು ತಿಳಿಸಿದರು.

24 ಅಭ್ಯರ್ಥಿಗಳು ನಕಲಿ ಶೈಕ್ಷಣಿಕ/ಜಾತಿ ದಾಖಲೆ ಸಲ್ಲಿಸಿರುವ ಕಾರಣ ಅವರನ್ನು ಆಯ್ಕೆ ಪಟ್ಟಿಯಿಂದ ತೆಗೆದು ಹಾಕಿ ಆದೇಶವನ್ನು ಹೊರಡಿಸಲಾಗಿರುತ್ತದೆ. ಒಬ್ಬ ಅಭ್ಯರ್ಥಿ ನಿಧನರಾಗಿದ್ದಾರೆ. ಹೀಗಾಗಿ ಬಾಕಿಯಿರುವ 107 ಅಭ್ಯರ್ಥಿಗಳಿಗೆ ನೇಮಕಾತಿ ಹಾಗೂ ಸ್ಥಳ ನಿಯುಕ್ತಿ ಆದೇಶಕ್ಕೆ ಮುಂದಿನ ವಾರದೊಳಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಸಹಾಯಕ ಪ್ರಾಧ್ಯಾಪಕರಾಗಿ ವಿವಿಧ ವಿಷಯಗಳಿಗೆ ಸ್ಥಳನಿಯುಕ್ತಿಗೊಂಡಿರುವ ಅಭ್ಯರ್ಥಿಗಳಲ್ಲಿ ಕೆಲವು ಅಭ್ಯರ್ಥಿಗಳು ಅನಾರೋಗ್ಯದ ನಿಮಿತ್ತ ಹಾಗೂ ಪತಿ/ಪತ್ನಿ ಪ್ರಕರಣದಡಿ ಸ್ಥಳ ಮಾರ್ಪಾಡು ಮಾಡಿಕೊಡುವಂತೆ ಕೋರಿದ್ದು, ಇದಕ್ಕೆ ನಿಯಮಗಳಲ್ಲಿ ಅವಕಾಶವಿರುವುದಿಲ್ಲ. ಆದಾಗ್ಯು ಅಭ್ಯರ್ಥಿಗಳ ಹಿತದೃಷ್ಟಿಯಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಉನ್ನತ ಶಿಕ್ಷಣ ಇಲಾಖೆಯ ಮುಖಾಂತರ ಆಗಲೇಬೇಕಾಗಿದ್ದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ, ಎಸ್‌ಇಪಿ-ಟಿಎಸ್ಪಿ ಅನುದಾನ ಬಳಕೆ ಸೇರಿದಂತೆ ಹಲವು ಕಾರ್ಯಕ್ರಮಗಳು ಸಮಯಕ್ಕೆ ಸರಿಯಾಗಿ ಜಾರಿಯಾಗುವಲ್ಲಿ ವಿಫಲವಾಗಿದೆ. ಇದರಿಂದ ನನಗೂ ಬೇಸರವಾಗಿದ್ದು, ಈ ಬಗ್ಗೆ ಕಾರಣ ಕೇಳಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ.
-ಬಸವರಾಜ ರಾಯರೆಡ್ಡಿ ಉನ್ನತ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News