ಪಂಚಾಯತ್ರಾಜ್ ವ್ಯವಸ್ಥೆಯಲ್ಲಿ ನಿರ್ಲಕ್ಷ ಧೋರಣೆ: ಸದನದ ಬಾವಿಗಿಳಿದು ಬಿಜೆಪಿ ಪ್ರತಿಭಟನೆ
ಬೆಂಗಳೂರು, ಫೆ.23: ಪಂಚಾಯತ್ರಾಜ್ ವ್ಯವಸ್ಥೆಯ ಕಾರ್ಯಕ್ರಮ, ಆಡಳಿತ ಯಂತ್ರ, ಹಣಕಾಸು ಸಮರ್ಪಕ ನಿರ್ವಹಣೆಯಲ್ಲಿ ಸರಕಾರದ ನಿರ್ಲಕ್ಷ ಧೋರಣೆ ಖಂಡಿಸಿ ಬಿಜೆಪಿ ಸದಸ್ಯರು ಶುಕ್ರವಾರ ಪರಿಷತ್ ಕಲಾಪದಲ್ಲಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಪಂಚಾಯತ್ ರಾಜ್ ವ್ಯವಸ್ಥೆಯ ಸಬಲೀಕರಣಕ್ಕಾಗಿ 3ಎಫ್ ಪಂಚಾಯತ್ಗಳಿಗೆ ವರ್ಗಾಯಿಸಿ ಅಧಿಕಾರ ವಿಕೇಂದ್ರೀಕರಣಕ್ಕೆ ಒತ್ತು ಕೊಡಬೇಕೆಂಬುದು ಸಹಸ್ರಾರು ಜನಪ್ರತಿನಿಧಿಗಳ ಒಕ್ಕೊರಲ ಒತ್ತಾಯವಾಗಿದ್ದರೂ ಸರಕಾರ ಯಾವುದೇ ಕ್ರಮಗೊಂಡಿಲ್ಲ. ಈ ಬಗ್ಗೆ ನಿರ್ಲಕ್ಷ ಮಾಡುತ್ತಾ ಬಂದಿದೆ ಎಂದು ಆರೋಪಿಸಿದ ಕೋಟಾ ಶ್ರೀನಿವಾಸ ಪೂಜಾರಿ, ಪ್ರದೀಪ್ ಶೆಟ್ಟರ್, ಪ್ರಾಣೇಶ್, ಬಸವರಾಜ್ ಪಾಟೀಲ್ ಯತ್ನಾಳ್ ಅವರು ಸದನದ ಬಾವಿಗಿಳಿದು ಧರಣಿ ನಡೆಸಿದರು.
ಸ್ವಂತ ಸ್ಥಳೀಯ ಸರಕಾರದಂತೆ ಕೆಲಸ ಮಾಡಲು ಸ್ಥಳೀಯ ಅಂಗನವಾಡಿ, ಕೃಷಿ, ತೋಟಗಾರಿಕೆ, ಪ್ರಾಥಮಿಕ ಶಾಲೆ, ಗ್ರಂಥಾಲಯ, ಕಾರ್ಮಿಕ ಇಲಾಖೆಯ ಪೂರ್ಣ ಜವಾಬ್ದಾರಿ ಸಹಕಾರಿ, ಆರೋಗ್ಯ ಮತ್ತು ನಾಗರಿಕ ಸರಬರಾಜು ಸೇರಿ 29 ವಿಷಯಗಳನ್ನು ಪಂಚಾಯತ್ಗಳಿಗೆ ವರ್ಗಾಯಿಸಬೇಕೆಂದು ಆಗ್ರಹಿಸಿದ್ದೆವು. ಪಂಚಾಯತ್ರಾಜ್ ಕಾಯ್ದೆಯಡಿ ಕೆಲಸ ಮಾಡುವ ರಾಜ್ಯ ಸರಕಾರ ಫಲಾನುಭವಿಗಳ ಆಯ್ಕೆಯನ್ನು ಸರಕಾರಿ ಕಚೇರಿಯಲ್ಲಿ ಮಾಡದೆ ಗ್ರಾಮ ಸಭೆಗಳಲ್ಲಿ ಮಾಡುವಂತೆ ಕೋರಿದ್ದೆವು. ಅಭಿವೃದ್ಧಿ ಅನುಷ್ಠಾನ, ವ್ಯವಸ್ಥೆ ವಿಧಾನಸೌಧದಲ್ಲಿ ಆಗದೆ ಗ್ರಾಮಸೌಧದಲ್ಲಿ ಆಗಬೇಕೆಂದು ಕೋರಿಕೆ ಸಲ್ಲಿಸಿದ್ದೆವು. ಗ್ರಾಮ ಪಂಚಾಯತ್ ಸಭೆಗೆ ಅಧಿಕಾರಿಗಳ ಕಡ್ಡಾಯ ಹಾಜರಾತಿ, ಕೇರಳ ಮಾದರಿಯಲ್ಲಿ ಪಂಚಾಯತ್ ಸದಸ್ಯರ ಗೌರವ ಧನ, ಬಾಕಿ ಉಳಿಸಿಕೊಂಡಿರುವ 6 ಸಾವಿರಕೋಟಿಗೂ ಬಾಕಿಯಿರುವ ತೆರಿಗೆ ಸಂಗ್ರಹಣೆ ಮತ್ತು ವಸೂಲಾತಿ ಸೇರಿದಂತೆ ಅನೇಕ ಅಗತ್ಯ ಬೇಡಿಕೆಗಳ ಬಗ್ಗೆ ಸರಕಾರ ಈ ಕ್ಷಣದವರೆಗೂ ಸ್ಪಂದಿಸಿಲ್ಲ ಎಂದು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದರು.
ಎಲ್ಲ ಪಕ್ಷಗಳ ಶಾಸಕರು ಒಟ್ಟಾಗಿ ಪಂಚಾಯತ್ರಾಜ್ ಸಬಲೀಕರಣಕ್ಕೆ ಪ್ರತಿಭಟನೆ ನಡೆಸಿದರೂ ಸರಕಾರ ಮೌನ ವಹಿಸಿದೆ. ಮುಖ್ಯಮಂತ್ರಿಗಳಿಗೆ, ಪಂಚಾಯತ್ರಾಜ್ ಸಚಿವರು, ಇಲಾಖೆ ಅಧಿಕಾರಿಗಳ ಜಾಣ ಮೌನ ಅರ್ಥವಾಗುತ್ತಿಲ್ಲ. 3ಎಫ್ ಪಂಚಾಯತ್ಗಳಿಗೆ ವರ್ಗಾಯಿಸಿ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿ ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಪಂಚಾಯತ್ರಾಜ್ ಸಚಿವ ಎಚ್.ಕೆ.ಪಾಟೀಲ್, ಕೂಡಲೇ ಸಭೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಪಕ್ಷದ ಸದಸ್ಯರು ಧರಣಿ ಹಿಂಪಡೆದರು.