4.96 ಲಕ್ಷ ರೈತರಿಗೆ 781.51 ಕೋಟಿ ರೂ.ಬೆಳೆ ವಿಮೆ ಪಾವತಿ: ಕೃಷ್ಣಭೈರೇಗೌಡ
ಬೆಂಗಳೂರು, ಫೆ.23: ರಾಜ್ಯ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು 2016ರ ಮುಂಗಾರು ಹಂಗಾಮಿನಿಂದ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗಿದೆ. 2016-17ನೆ ಸಾಲಿನ ಮುಂಗಾರು ಹಂಗಾಮಿನಲ್ಲಿ 9.44 ಲಕ್ಷ ರೈತರು 12.04 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ 1493 ಕೋಟಿ ರೂ.ಗಳ ವಿಮಾ ಕಂತನ್ನು ಪಾವತಿಸಿ ಪಾಲ್ಗೊಂಡಿದ್ದಾರೆ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.
ಶುಕ್ರವಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಹಾಗೂ ಇನ್ನಿತರ ಸದಸ್ಯರು ನಿಯಮ 69ರ ಮೇರೆಗೆ ಫಸಲ್ ಬಿಮಾ ಯೋಜನೆಯಡಿ 2016-17ನೆ ಸಾಲಿನಲ್ಲಿ 1.83 ಲಕ್ಷ ರೈತರಿಗೆ 245.31 ಕೋಟಿ ರೂ.ಬಾಕಿ ಇರುವ ಕುರಿತು ಪ್ರಸ್ತಾಪಿಸಿದ ವಿಷಯಕ್ಕೆ ಅವರು ಉತ್ತರಿಸಿದರು.
ಸಂರಕ್ಷಣೆ ಪೋರ್ಟಲ್ನಲ್ಲಿ 6.80 ಲಕ್ಷ ಫಲಾನುಭವಿ ರೈತರಿಗೆ 1026.83 ಕೋಟಿ ರೂ.ಬೆಳೆ ವಿಮೆ ಪರಿಹಾರವನ್ನು ಪಾವತಿಸುವಂತೆ ವಿಮಾ ಸಂಸ್ಥೆಗಳಿಗೆ ಕಳುಹಿಸಿದ್ದು, ಇಲ್ಲಿಯವರೆಗೆ 4.96 ಲಕ್ಷ ಫಲಾನುಭವಿ ರೈತರಿಗೆ 781.51 ಕೋಟಿ ರೂ.ಬೆಳೆ ವಿಮೆ ಪರಿಹಾರವನ್ನು ನೇರವಾಗಿ ರೈತರ ಉಳಿತಾಯ ಖಾತೆಗಳಿಗೆ ವಿಮಾ ಸಂಸ್ಥೆಗಳಿಂದ ಜಮೆ ಮಾಡಲಾಗಿದೆ. ಇನ್ನು ಒಟ್ಟು 245.32 ಕೋಟಿ ರೂ.ಬೆಳೆ ವಿಮೆ ಪರಿಹಾರ 1.84 ಲಕ್ಷ ರೈತರಿಗೆ ವಿತರಿಸಲು ಬಾಕಿಯಿದೆ ಎಂದು ಅವರು ಹೇಳಿದರು.
ಬಹುಕಟಾವು ಬೆಳೆಗಳ ಇಳುವರಿ ವ್ಯತ್ಯಾಸದ ಸಮಿತಿ ಸಲ್ಲಿಸಿರುವ ವರದಿ ಬಗ್ಗೆ ವಿಮಾ ಸಂಸ್ಥೆಗಳು ತಕರಾರು ಸಲ್ಲಿಸಿರುವುದರಿಂದ 163.48 ಕೋಟಿ ರೂ., ಭತ್ತ-ಅಕ್ಕಿ ಇಳುವರಿ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಸೂಚನೆಯ ನಿರೀಕ್ಷಣೆಯಿಂದಾಗಿ 63.65 ಕೋಟಿ ರೂ., ರೈತರ ಬ್ಯಾಂಕ್ ಖಾತೆ ಸಂಖ್ಯೆಗಳು ತಪ್ಪಾಗಿ ದಾಖಲಾಗಿರುವುದರಿಂದ 11.03 ಕೋಟಿ ರೂ., ಬೆಳೆ ಕಟಾವು ಪ್ರಯೋಗದಲ್ಲಿ ಸಣ್ಣ ಪುಟ್ಟ ಲೋಪ ದೋಷಗಳಿಂದ 7.16 ಕೋಟಿ ರೂ. ಬೆಳೆ ವಿಮೆ ಪರಿಹಾರ ಬಾಕಿ ಉಳಿದುಕೊಂಡಿದೆ ಎಂದು ಕೃಷ್ಣಭೈರೇಗೌಡ ವಿವರಣೆ ನೀಡಿದರು.
2016ರ ಮುಂಗಾರು ಹಂಗಾಮಿನಲ್ಲಿ 102521 ರೈತರು 0.904 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ 421 ಕೋಟಿ ರೂ.ಗಳ ವಿಮಾ ಕಂತನ್ನು ಪಾವತಿಸಿದ್ದಾರೆ. ಸಂರಕ್ಷಣೆ ಪೋರ್ಟಲ್ ಮೂಲಕ 2631 ಕೋಟಿ ರೂ.ಗಳ ವಿಮಾ ಪರಿಹಾರವನ್ನು 149669 ಸಂಖ್ಯೆಯ ಪ್ರಕರಣಗಳಿಗೆ ಇನಿಷಿಯೇಟ್ ಮಾಡಲಾಗಿದ್ದು, ಇದರಲ್ಲಿ 2244 ಕೋಟಿ ರೂ.ಗಳ ವಿಮಾ ಪರಿಹಾರವನ್ನು 129049 ಸಂಖ್ಯೆಯ ಪ್ರಕರಣಗಳಿಗೆ ವಿಮಾ ಸಂಸ್ಥೆಯ ಮೂಲಕ ಪಾವತಿಸಲಾಗಿದೆ. ಉಳಿದ 387 ಕೋಟಿ ರೂ.ಬಾಕಿಯಿದೆ ಎಂದು ಅವರು ಮಾಹಿತಿ ನೀಡಿದರು.
2016-17ರ ಹಿಂಗಾರು ಬೇಸಿಗೆ ಹಂಗಾಮಿನಲ್ಲಿ ಒಟ್ಟು 11.87 ಲಕ್ಷ ರೈತರು 17.02 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 70.40 ಕೋಟಿ ರೂ.ವಿಮಾ ಮೊತ್ತ ಪಾವತಿಸಿ ನೋಂದಣಿಯಾಗಿದ್ದಾರೆ. ಹಿಂಗಾರು ಹಂಗಾಮಿನಲ್ಲಿ ಒಟ್ಟು 42038 ಬೆಳೆ ಕಟಾವು ಪ್ರಯೋಗಗಳನ್ನು ಆಯೋಜಿಸಲಾಗಿತ್ತು ಎಂದು ಕೃಷ್ಣಭೈರೇಗೌಡ ತಿಳಿಸಿದರು.
ಈ ಪ್ರಯೋಗಗಳಲ್ಲಿ ಅಗ್ರಿಕಲ್ಚರ್ ಇನ್ಸೂರೆನ್ಸ್ ಸಂಸ್ಥೆಯವರು ಬೆಂಗಳೂರು ನಗರ, ಬಾಗಲಕೋಟೆ, ಬೀದರ್, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ಧಾರವಾಡ, ಗದಗ, ಮೈಸೂರು, ರಾಮನಗರ, ಶಿವಮೊಗ್ಗ, ವಿಜಯಪುರ, ಉಡುಪಿ ಜಿಲ್ಲೆಗಳಿಗೆ ಸಂಬಂಧಿಸಿದ ಒಟ್ಟು 4577 ಬೆಳೆ ಕಟಾವು ಪ್ರಯೋಗಗಳಿಗೆ ಆಕ್ಷೇಪನೆ ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು.
ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಸಂಸ್ಥೆಯವರು ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕಲಬುರ್ಗಿ, ಕೊಡಗು, ಮಂಡ್ಯ, ರಾಯಚೂರು, ತುಮಕೂರು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಒಟ್ಟು 3817 ಬೆಳೆ ಕಟಾವು ಪ್ರಯೋಗಗಳಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಶ್ರೀರಾಮ್ ವಿಮಾ ಸಂಸ್ಥೆಯವರು ಬೆಳಗಾವಿ, ದಾವಣಗೆರೆ, ಹಾವೇರಿ, ಕೋಲಾರ, ಕೊಪ್ಪಳ, ಉತ್ತರ ಕನ್ನಡ ಮತ್ತು ಯಾದಗಿರಿ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಒಟ್ಟು 4203 ಬೆಳೆ ಕಟಾವು ಪ್ರಯೋಗಳಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು.
ಈ ಆಕ್ಷೇಪಣೆಗಳನ್ನು ಜಿಲ್ಲಾ ಮಟ್ಟದಲ್ಲಿ ವಿಮಾ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಇತ್ಯರ್ಥಪಡಿಸಲು ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ನಿರ್ದೇಶಕರು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಶೀಘ್ರವಾಗಿ ವಿಮಾ ನಷ್ಟ ಪರಿಹಾರವನ್ನು ರೈತರ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ಕೃಷ್ಣಭೈರೇಗೌಡ ತಿಳಿಸಿದರು.