ಆರೆಸ್ಸೆಸ್ ಪಾಳಯದ ಬಿಪ್ಲಬ್ ದೇಬ್ ತ್ರಿಪುರದ ನೂತನ ಮುಖ್ಯಮಂತ್ರಿ

Update: 2018-03-05 14:16 GMT

ಅಗರ್ತಲ, ಮಾ.5: 48ರ ಹರೆಯದ ಬಿಪ್ಲಬ್ ದೇಬ್ ಗುರುವಾರದಂದು ಸಂಜೆ ಐದು ಗಂಟೆಗೆ ತ್ರಿಪುರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಕುರಿತು ಮಂಗಳವಾರದಂದು ಹೊಸದಾಗಿ ಆಯ್ಕೆಯಾಗಿರುವ ಬಿಜೆಪಿ ಶಾಸಕರ ಸಭೆಯ ನಂತರ ಅಧಿಕೃತ ಘೋಷಣೆ ಮಾಡಲಾಗುವುದು. ಈ ಸಭೆಯಲ್ಲಿ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ಜುವಲ್ ಒರಮ್ ಭಾಗವಹಿಸಲಿದ್ದಾರೆ ಎಂದು ವರದಿ ತಿಳಿಸಿದೆ.

60 ಸದಸ್ಯ ಬಲದ ತ್ರಿಪುರ ವಿಧಾನಸಭೆಯಲ್ಲಿ ಬಿಜೆಪಿಯು ತನ್ನ ಮಿತ್ರಪಕ್ಷ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ (ಐಪಿಎಫ್‌ಟಿ)ಯೊಂದಿಗೆ ಸೇರಿ 43 ಸ್ಥಾನಗಳನ್ನು ಜಯಿಸುವ ಮೂಲಕ ರಾಜ್ಯದಲ್ಲಿ 25 ವರ್ಷಗಳ ಕಾಲ ಆಡಳಿತ ನಡೆಸಿದ ಎಡರಂಗ ಸರಕಾರಕ್ಕೆ ಆಘಾತ ನೀಡಿದೆ. ಐದು ವರ್ಷಗಳ ಹಿಂದೆ ನಡೆದ ರಾಜ್ಯ ಚುನಾವಣೆಯಲ್ಲಿ ಒಂದು ಸ್ಥಾನ ಗೆಲ್ಲಲೂ ವಿಫಲವಾಗಿದ್ದ ಬಿಜೆಪಿ ಈ ಬಾರಿ 35 ಸ್ಥಾನಗಳಲ್ಲಿ ಗೆಲುವು ಸಾಧಿಸಿ ದಾಖಲೆ ಸೃಷ್ಟಿಸಿದೆ. ತ್ರಿಪುರದಲ್ಲಿ ಸರಕಾರ ರಚಿಸಲು ಬೇಕಾಗಿರುವುದು 31 ಸದಸ್ಯ ಬಲ.

ತ್ರಿಪುರದಲ್ಲಿ ಗಳಿಸಿದ ಅಭೂತಪೂರ್ವ ಗೆಲುವಿನಿಂದಾಗಿ ಎಲ್ಲರ ದೃಷ್ಟಿ ನೆಟ್ಟಿದ್ದು ನೇರವಾಗಿ ಪಕ್ಷದ ರಾಜ್ಯಾಧ್ಯಕ್ಷ ಬಿಪ್ಲಬ್ ದೇಬ್ ಅವರತ್ತ. ಇಡೀ ದೇಶದಲ್ಲಿ ಬಿಜೆಪಿ ಅತ್ಯಂತ ಕಿರಿಯ ರಾಜ್ಯಾಧ್ಯಕ್ಷರಾಗಿರುವ ದೇಬ್, ಮುಖ್ಯಮಂತ್ರಿ ಜವಾಬ್ದಾರಿಯನ್ನು ಹೊರಲು ಸಿದ್ಧರಾಗಿದ್ದೀರಾ ಎಂದು ಮಾಧ್ಯಮಗಳು ಈ ಹಿಂದೆ ಕೇಳಿದ ಪ್ರಶ್ನೆಗೆ, ನಾನು ಯಾವ ಜವಾಬ್ದಾರಿಯನ್ನು ಹೊರಲೂ ಸಿದ್ಧನಾಗಿದ್ದೇನೆ. ಪಕ್ಷದ ವರಿಷ್ಠರು ಯಾವ ನಿರ್ಧಾರ ಕೈಗೊಳ್ಳುತ್ತಾರೊ ಅದೇ ಅಂತಿಮವಾಗಿದೆ. ನಾನೆಂದೂ ಜವಾಬ್ದಾರಿಯಿಂದ ದೂರ ಓಡುವುದಿಲ್ಲ ಎಂದು ಉತ್ತರಿಸಿದ್ದರು.

ಬುಡಕಟ್ಟು ಜನಾಂಗದ ವ್ಯಕ್ತಿ ತ್ರಿಪುರದ ಮುಖ್ಯಮಂತ್ರಿಯಾಗಬೇಕು ಎಂದು ಐಪಿಎಫ್‌ಟಿ ಆಗ್ರಹಿಸಿದ್ದರೂ ಬಿಜೆಪಿ ಮೇಲೆ ಒತ್ತಡ ಹೇರಲು ಅದಕ್ಕೆ ಸಂಖ್ಯಾಬಲ ಕಡಿಮೆಯಿದೆ. ಹಾಗಾಗಿ ಬಿಪ್ಲಬ್ ದೇಬ್ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆ ದಟ್ಟವಾಗಿದೆ.

1969ರ ನವಂಬರ್ 25ರಂದು ತ್ರಿಪುರದ ಗೋಮತಿ ಜಿಲ್ಲೆಯ ರಾಜ್ಧರ್ ನಗರ್ ಗ್ರಾಮದಲ್ಲಿ ಮಧ್ಯಮ ಕುಟುಂಬದಲ್ಲಿ ದೇಬ್ ಜನಿಸಿದರು. ಅವರ ತಂದೆ ಹರಧನ್ ದೇಬ್ ಜನಸಂಘದ ನಾಯಕರಾಗಿದ್ದರು. 1999ರಲ್ಲಿ ತ್ರಿಪುರದ ಉದಯಪುರ ಕಾಲೇಜಿನಲ್ಲಿ ಪದವಿ ಮುಗಿಸಿದ ದೇಬ್ ನಂತರ ಆರೆಸ್ಸೆಸ್ ಸೇರಲು ದಿಲ್ಲಿಗೆ ತೆರಳಿದರು.ಅಲ್ಲಿ 16 ವರ್ಷಗಳ ಕಾಲ ಪ್ರಮುಖರಾದ ಗೋಬಿಂದ ಆಚಾರ್ಯ ಮತ್ತು ಕೃಷ್ಣಗೋಪಾಲ ಶರ್ಮಾ ಅವರಿಂದ ತರಬೇತಿ ಪಡೆದರು. 2016 ಜನವರಿಯಲ್ಲಿ ಅವರನ್ನು ತ್ರಿಪುರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಿಸಲಾಯಿತು.

 ಬಿಜೆಪಿಯ ಸೈದ್ಧಾಂತಿಕ ಅಂಗ ಆರೆಸ್ಸೆಸ್‌ನಿಂದ ತರಬೇತು ಹೊಂದಿರುವ ಮತ್ತು 2014ರ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿ ಕ್ಷೇತ್ರದಲ್ಲಿ ಪ್ರಧಾನಿ ಮೋದಿಯ ಅಭಿಯಾನದ ಮೇಲುಸ್ತುವಾರಿ ನೋಡಿಕೊಂಡಿದ್ದ ತ್ರಿಪುರ ಬಿಜೆಪಿ ಮುಖ್ಯಸ್ಥ ಸುನೀಲ್ ದಿಯೋಧರ್ ಅವರಿಂದ ಮಾರ್ಗದರ್ಶನ ಪಡೆದಿದ್ದ ದೇಬ್‌ರನ್ನು ಬಿಜೆಪಿಯು ತ್ರಿಪುರದಲ್ಲಿ ಪಕ್ಷವನ್ನು ಸಂಘಟಿಸಲು ನೇಮಿಸಿತು.

ರಾಜ್ಯದಲ್ಲಿ ಪಕ್ಷವನ್ನು ಶೂನ್ಯದಿಂದ ಮೇಲೆತ್ತುವ ಜವಾಬ್ದಾರಿ ಅವರ ಮೇಲಿತ್ತು. 2017ರ ಬಿಜೆಪಿಯ ಆಂತರಿಕ ಸಮೀಕ್ಷೆಯ ಪ್ರಕಾರ ದೇಬ್ ತ್ರಿಪುರದಲ್ಲಿ ಮಾಣಿಕ್ ಸರ್ಕಾರ್‌ಗಿಂತಲೂ ಹೆಚ್ಚು ಜನಪ್ರಿಯರಾಗಿದ್ದರು.

ವಿಶೇಷವೆಂದರೆ ಈಗ ಬಿಪ್ಲಬ್ ದೇಬ್ ತಾನೊಬ್ಬ ಜಿಮ್ ತರಬೇತುದಾರ ಅಲ್ಲ ಎಂಬುದನ್ನು ಎಲ್ಲರಿಗೂ ವಿವರಿಸಿ ಹೇಳಬೇಕಾದ ಅನಿವಾರ್ಯತೆ ಎದುರಾಗಿದೆ. ಮಾಧ್ಯಮಗಳು ದೇಬ್ ಈ ಹಿಂದೆ ಜಿಮ್ ತರಬೇತುದಾರರಾಗಿದ್ದರು ಎಂದು ವರದಿ ಮಾಡಿದ್ದವು. ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ದೇಬ್, ಸಂದರ್ಶನವೊಂದರಲ್ಲಿ ನಾನು ಜಿಮ್‌ಗೆ ಹೋಗುತ್ತಿದ್ದೆ, ಆದರೆ ಈಗ ನನಗೆ ಸಮಯ ಸಿಗುತ್ತಿಲ್ಲ ಎಂದು ಹೇಳಿದ್ದೆ. ಆದರೆ ಮಾಧ್ಯಮಗಳು ನಾನೇ ಜಿಮ್ ತರಬೇತುದಾರ ಎಂದು ವರದಿ ಮಾಡಿರುವುದನ್ನು ಕಂಡು ನನಗೆ ಆಶ್ಚರ್ಯವಾಯಿತು ಎಂದು ಬಿಪ್ಲಬ್ ದೇಬ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News