ಜಿಲ್ಲಾಧಿಕಾರಿ ಸಿಂಧೂರಿ ವರ್ಗಾವಣೆಗೆ ಸಿಎಟಿ ತಡೆ: ಸರಕಾರಕ್ಕೆ ಮುಜುಗರ
ಬೆಂಗಳೂರು, ಮಾ.8: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ವರ್ಗವಣೆಗೊಳಿಸಿ ರಾಜ್ಯ ಸರಕಾರ ಹೊರಡಿಸಿದ್ದ ಆದೇಶಕ್ಕೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ(ಸಿಎಟಿ) ತಾತ್ಕಾಲಿಕ ತಡೆ ನೀಡಿದೆ.
ನಿಯಮ ಬಾಹಿರವಾಗಿ ಅವಧಿಗೆ ಮುನ್ನವೇ ವರ್ಗಾವಣೆ ಮಾಡುವ ಸರಕಾರದ ನಿರ್ಧಾರವನ್ನು ರೋಹಿಣಿ ಅವರು ಸಿಎಟಿನಲ್ಲಿ ಪ್ರಶ್ನಿಸಿದ್ದರು. ಜಿಲ್ಲಾಧಿಕಾರಿಗಳ ಮನವಿಯನ್ನು ವಿಚಾರಣೆ ನಡೆಸಿದ ಸಿಎಟಿ ವರ್ಗಾವಣೆ ಆದೇಶಕ್ಕೆ ಮಾ. 13ರವರೆಗೆ ತಡೆ ನೀಡಿದೆ.
ರೋಹಿಣಿ ಅವರ ವರ್ಗಾವಣೆ ಸಂಬಂಧ ಆದೇಶವನ್ನು ಮಂಗಳವಾರದಂದು ಹಿಂಪಡೆದಿದ್ದ ನ್ಯಾಯಾಲಯ ಮತ್ತೆ ಬುಧವಾರದಂದು ಒಟ್ಟು 12 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಹೊರಡಿಸಿದ್ದ ಆದೇಶದಲ್ಲಿ ಇವರ ಹೆಸರನ್ನೂ ಸೇರಿಸಿತ್ತು. ರೋಹಿಣಿ ಅವರನ್ನು ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿತ್ತು.
ಸಿಎಟಿಯ ಈ ಆದೇಶದಿಂದ ರೋಹಿಣಿ ಸಿಂಧೂರಿ ಹಾಸನ ಜಿಲ್ಲಾಧಿಕಾರಿಯಾಗಿ ಮುಂದುವರಿಯಲಿದ್ದಾರೆ. ಇದರಿಂದ ರಾಜ್ಯ ಸರಕಾರಕ್ಕೆ ಮುಜುಗರ ಉಂಟಾಗಿದೆ. ಇದೇ ವೇಳೆ ಸರಕಾರ, ವರ್ಗಾವಣೆ ಸಂಬಂಧ ಮಾ.12ರ ಒಳಗೆ ಪ್ರತಿಕ್ರಿಯೆ ನೀಡುವುದಾಗಿ ಸಿಎಟಿ ಗೆ ಹೇಳಿದೆ.