ನ್ಯಾ.ವಿಶ್ವನಾಥ ಶೆಟ್ಟಿಗೆ ಚಾಕು ಇರಿತ ಪ್ರಕರಣ: ಡಿಸಿಪಿ ಯೋಗೇಶ್ ಅಮಾನತು
ಬೆಂಗಳೂರು, ಮಾ.8: ಲೋಕಾಯುಕ್ತ ನ್ಯಾ.ವಿಶ್ವನಾಥಶೆಟ್ಟಿಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ವೈಪಲ್ಯವೆಸಗಿದ ಆರೋಪದ ಅಡಿಯಲ್ಲಿ ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಯೋಗೇಶ್ರನ್ನು ಗೃಹ ಸಚಿವ ರಾಮಲಿಂಗಾರೆಡ್ಡಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ವಿಧಾನಸೌಧ ಮತ್ತು ಎಂ.ಎಸ್ ಬಿಲ್ಡಿಂಗ್ ಭದ್ರತೆಯ ಉಸ್ತುವಾರಿ ಹೊತ್ತಿರುವ ಯೋಗೇಶ್, ಮೇಲ್ನೋಟಕ್ಕೆ ಭದ್ರತಾ ವೈಫಲ್ಯ ಎಸಗಿರುವುದು ಸಾಬೀತಾಗಿರುವುದರಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಗೃಹ ಸಚಿವರು ಯೋಗೇಶ್ರನ್ನು ಅಮಾನತು ಮಾಡಲಾಗಿದ್ದು, ಗೃಹ ಸಚಿವರು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ವರದಿ ಸಲ್ಲಿಸುವಂತೆ ಕೇಳಿದ್ದರು ಎನ್ನಲಾಗಿದೆ.
ವಿಧಾನಸೌಧದ ಪಕ್ಕದಲ್ಲಿರುವ ಲೋಕಾಯುಕ್ತ ಕಚೇರಿಯಲ್ಲಿ ಬುಧವಾರ ಮಧ್ಯಾಹ್ನ ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಅವರ ಮೇಲೆ ಹಲ್ಲೆ ಯತ್ನ ನಡೆದಿತ್ತು. ತೇಜ್ರಾಜ್ ಶರ್ಮಾ ಎಂಬಾತ ಕಚೇರಿ ಒಳಗೆ ನುಗ್ಗಿ ಲೋಕಾಯುಕ್ತರಿಗೆ ಚಾಕುವಿನಿಂದ ಇರಿದಿದ್ದ.