ಕಾಲೇಜಿನ ಎದುರೇ ಕತ್ತು ಸೀಳಿ ವಿದ್ಯಾರ್ಥಿನಿಯ ಹತ್ಯೆ

Update: 2018-03-10 03:53 GMT

ಚೆನ್ನೈ, ಮಾ.10: ಕಾಲೇಜು ವಿದ್ಯಾರ್ಥಿನಿಯನ್ನು ವಿವಾಹವಾಗುವಂತೆ ಪೀಡಿಸುತ್ತಿದ್ದ ವ್ಯಕ್ತಿಯೊಬ್ಬ ಆಕೆಯ ಕಾಲೇಜಿನ ಪ್ರವೇಶ ದ್ವಾರದೆದುರೇ ಕತ್ತುಸೀಳಿ ಭೀಬತ್ಸವಾಗಿ ಹತ್ಯೆ ಮಾಡಿರುವ ಪ್ರಕರಣ ಕೆ.ಕೆ.ನಗರದಲ್ಲಿ ನಡೆದಿದ್ದು, ನಾಗರಿಕರಲ್ಲಿ ದಿಗ್ಭ್ರಮೆ ಮೂಡಿಸಿದೆ.

ಮೀನಾಕ್ಷಿ ಅಕಾಡಮಿ ಆಫ್ ಹೈಯರ್ ಎಜ್ಯುಕೇಶನ್ ಅಂಡ್ ರೀಸರ್ಚ್‌ನ ಮೊದಲ ವರ್ಷದ ಬಿಕಾಂ ವಿದ್ಯಾರ್ಥಿನಿ ಎಂ.ಅಶ್ವಿನಿ (19) ಹತ್ಯೆಗೀಡಾದವರು. ಅಶ್ವಿನಿ ಬಸ್ ನಿಲುಗಡೆ ಸ್ಥಳಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಅಲಗೇಶನ್ (26) ಎಂಬಾತ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ. ಕ್ಷಣಾರ್ಧದಲ್ಲೇ ಕತ್ತು ಸೀಳಿ ಹತ್ಯೆ ಮಾಡಿದನೆನ್ನಲಾಗಿದೆ.

ನೀರು ಸರಬರಾಜು ಮಾಡುವ ಹುಡುಗನೊಬ್ಬ ತಕ್ಷಣ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾನೆ. ವಿದ್ಯಾರ್ಥಿನಿಯ ಪೋಷಕರು ಕಳೆದ ತಿಂಗಳು ಅಲಗೇಶನ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಆಕೆಯನ್ನು ಹಿಂಬಾಲಿಸಿ ವಿವಾಹವಾಗುವಂತೆ ಪದೇಪದೇ ಪೀಡಿಸುತ್ತಿದ್ದ ಎಂಬ ದೂರಿನ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿತ್ತು. ಆಘಾತಕ್ಕೆ ಒಳಗಾಗಿದ್ದ ಅಶ್ವಿನಿ ಕೆಲ ಸಮಯ ಕಾಲೇಜಿನಿಂದ ದೂರ ಉಳಿದಿದ್ದಳು. ಈ ವಾರವಷ್ಟೇ ಆಕೆ ತರಗತಿಗೆ ಬರಲು ಆರಂಭಿಸಿದ್ದಳು ಹಾಗೂ ಅಲಗೇಶನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

ಇಂಥದ್ದೇ ಘಟನೆ 2016ರ ಜೂನ್ 24ರಂದು ಜನನಿಬಿಡ ನುಂಗಂಬಾಕಂನಲ್ಲಿ ನಡೆದಿತ್ತು. ಇನ್ಫೋಸಿಸ್ ಉದ್ಯೋಗಿ ಎಸ್.ಸ್ವಾತಿ ಎಂಬಾಕೆಯನ್ನು ಹಾಡಹಗಲೇ ಆರೋಪಿ ಭೀಕರವಾಗಿ ಹತ್ಯೆ ಮಾಡಿದ್ದ. ಆ ಬಳಿಕ ಪ್ರೇಮಿಸುವಂತೆ ಪೀಡಿಸಿ ನಡೆದ ಇಂಥ ನಾಲ್ಕನೇ ಹತ್ಯೆ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News