ಸೈಬರ್ ಅಪರಾಧ ತಡೆಗೆ ಒತ್ತು: ಡಾನಾ ಕುರ್ಶ್
ಬೆಂಗಳೂರು, ಮಾ.15: ಭಾರತ ಹಾಗೂ ಇಸ್ರೇಲ್ ನವೋದ್ಯಮ ದೇಶಗಳಾಗಿದ್ದು, ಈ ಎರಡು ದೇಶಗಳಲ್ಲಿ ಯುವ ಸಮೂಹದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಜೊತೆಗೆ ಸೈಬರ್ ಅಪರಾಧ ತಡೆಗಳಿಗೂ ಒತ್ತು ನೀಡಲಾಗಿದೆ ಎಂದು ಇಸ್ರೇಲ್ ಕಾನ್ಸುಲ್ ಜನರಲ್ ಡಾನಾ ಕುರ್ಶ್ ಹೇಳಿದರು.
ಗುರುವಾರ ನಗರದ ಕ್ರೈಸ್ಟ್ ಕಾಲೇಜು ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಟ್ಟದ ವಿಚಾರಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಹಾರದಿಂದ ಹಿಡಿದು ಸೈಬರ್ ಭದ್ರತೆ ವರೆಗೂ ಭಾರತ ಹಾಗೂ ಇಸ್ರೇಲ್ ಒಪ್ಪಂದ ಮಾಡಿಕೊಂಡಿವೆ. ಉತ್ತಮ ಜಗತ್ತು ನಿರ್ಮಾಣಕ್ಕೆ ಈ ಒಪ್ಪಂದಗಳು ಪೂರಕವಾಗಿವೆ ಎಂದರು.
ಇಸ್ರೇಲ್ನ ಸೈಬರ್ ಭದ್ರತಾ ತಜ್ಞರನ್ನು ನಗರಕ್ಕೆ ಕರೆಸಿ, ವಿಷಯ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಹೆಚ್ಚಿನ ಉದ್ಯಮ ಅವಕಾಶಗಳ ಕುರಿತು ಚರ್ಚೆ ನಡೆಸಲಾಗುತ್ತದೆ. ಅಂತೆಯೇ ಇಲ್ಲಿನ ತಜ್ಞರನ್ನು ಇಸ್ರೇಲ್ಗೆ ಕರೆದೊಯ್ದು ವಿಷಯ ವಿನಿಮಯಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇಸ್ರೇಲ್ನ ಸೈಬರ್ ತಜ್ಞೆ ಡೆಬೊರಾ ಹೊಸೆನ್ ಕೌರಿಯಲ್ ಮಾತನಾಡಿ, ಆಡಳಿತದಲ್ಲಿ ಸೈಬರ್ ಭದ್ರತೆ, ಸಂಶೋಧನೆ ಹಾಗೂ ನೀತಿಗಳನ್ನು ಭಾರತ ಉತ್ತಮವಾಗಿ ನಿರ್ವಹಿಸುತ್ತಿದೆ. ಈ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಾಗಿ ಗುರುತಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಉದ್ಯಮ ಕ್ಷೇತ್ರಕ್ಕೂ ಭಾರತ ಅತ್ಯಂತ ಪ್ರಾಶಸ್ತಯ ಸ್ಥಳವಾಗಿದೆ. ಅದಕ್ಕೆ ಪೂರಕವಾದ ವಾತಾವರಣವಿದೆ. ಇಸ್ರೇಲ್ ಹಾಗೂ ಭಾರತ ಸಹಭಾಗಿತ್ವದಲ್ಲಿ ಉದ್ಯಮ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸುವ ಸಾಧ್ಯತೆಗಳು ಹೆಚ್ಚು ಇವೆ ಎಂದು ತಿಳಿಸಿದರು.
ಸೈಬರ್ ತಜ್ಞೆ ಲತಾ ರೆಡ್ಡಿ ಮಾತನಾಡಿ, ಸೈಬರ್ ತಂತ್ರಜ್ಞಾನ ಹೊಸ ಹೊಸ ಆಯಾಮಗಳ ಬಗ್ಗೆ ಪರಸ್ಪರ ಚರ್ಚಿಸಬೇಕಿದೆ. ಆಗ ಮಾತ್ರ ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಬಹುದು ಎಂದು ಅಭಿಪ್ರಾಯಪಟ್ಟರು.