ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಟ್ವೀಟ್ ಮಾಡಿದ್ದು ಹಾರ್ದಿಕ್ ಪಾಂಡ್ಯಾ ಅಲ್ಲ..?

Update: 2018-03-22 13:48 GMT

ಹೊಸದಿಲ್ಲಿ, ಮಾ.22: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಟ್ವೀಟ್ ಮಾಡಿದ ಆರೋಪಕ್ಕೆ ಸಂಬಂಧಿಸಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಾ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಜೋಧಪುರ್ ಪೊಲೀಸರಿಗೆ ರಾಜಸ್ಥಾನ ಕೋರ್ಟ್ ಆದೇಶಿಸಿರುವ ನಡುವೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ಟ್ವೀಟ್ ಗೂ ಹಾರ್ದಿಕ್ ಪಾಂಡ್ಯಾಗೂ ಯಾವುದೇ ಸಂಬಂಧವಿಲ್ಲ. ಇದು ಹಾರ್ದಿಕ್ ಪಾಂಡ್ಯಾ ಹೆಸರಿನಲ್ಲಿರುವ ನಕಲಿ ಖಾತೆಯ ಟ್ವೀಟ್ ಆಗಿದೆ ಎನ್ನಲಾಗುತ್ತಿದೆ.

@sirhardik3777 ಎನ್ನುವ ಖಾತೆಯಿಂದ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಟ್ವೀಟ್ ಮಾಡಲಾಗಿತ್ತು. ‘‘ಅಂಬೇಡ್ಕರ್ ಯಾರು? ಇದೇ ವ್ಯಕ್ತಿ ಸಂವಿಧಾನವನ್ನು ರಚಿಸಿದರು ಅಥವಾ ದೇಶದಲ್ಲಿ ಮೀಸಲಾತಿ ರೋಗವನ್ನು ಹರಡಿದರು’’ ಎಂದು ಈ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು.

ರಾಜಸ್ಥಾನದ ಜಾಲೋರ್ ಜಿಲ್ಲೆಯ ರಾಷ್ಟ್ರೀಯ ಭೀಮ ಸೇನಾ ಸದಸ್ಯರು ಹಾಗೂ ವೃತ್ತಿಯಲ್ಲಿ ವಕೀಲರಾಗಿರುವ ಮೇಘವಾಲ್ ಕ್ರಿಕೆಟಿಗನ ವಿರುದ್ಧ ಮಂಗಳವಾರ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

‘‘ಜನಪ್ರಿಯ ಕ್ರಿಕೆಟಿಗ ಪಾಂಡ್ಯ ಸಂವಿಧಾನವನ್ನು ಹಾಗೂ ಸಂವಿಧಾನ ಶಿಲ್ಪಿಯನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿ, ಕಡೆಗಣಿಸಲು ಯತ್ನಿಸಿದ್ದಲ್ಲದೆ, ಅಂಬೇಡ್ಕರ್ ಸಮುದಾಯದ ಜನರ ಭಾವನೆಯನ್ನು ಘಾಸಿಗೊಳಿಸಿದ್ದಾರೆ. ದ್ವೇಷವನ್ನು ಹಬ್ಬಿಸಿ ಸಮಾಜವನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ. ಜನವರಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪಾಂಡ್ಯ ಹೇಳಿಕೆಯನ್ನು ನಾನು ಗಮನಿಸಿದ್ದೆ. ವಿವಾದಾತ್ಮಕ ಟ್ವೀಟ್ ಮಾಡಿರುವ ಪಾಂಡ್ಯಗೆ ಸೂಕ್ತ ಶಿಕ್ಷೆ ವಿಧಿಸಬೇಕಾಗಿದೆ’’ ಎಂದು ಮೇಘ್‌ವಾಲ್ ಹೇಳಿದ್ದರು.

ಆದರೆ ಈ ಅವಹೇಳಕನಾರಿ ಟ್ವೀಟ್ ಮಾಡಿದ್ದು ಪಾಂಡ್ಯಾ ಅಲ್ಲ, ಪಾಂಡ್ಯಾರ ಖಾತೆ @hardikpandya7 ಆಗಿದೆ. ಅವಹೇಳನಕಾರಿ ಟ್ವೀಟ್ ಮಾಡಿದ ನಂತರ ಪಾಂಡ್ಯಾ ಹೆಸರಿನ ನಕಲಿ ಟ್ವಿಟರ್ ಖಾತೆ ಡಿಆ್ಯಕ್ಟಿವೇಟ್ ಆಗಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News