ಪೊಲೀಸ್ ಠಾಣೆಯಲ್ಲಿ ಹಸೆಮಣೆಯೇರಿದ ಜೋಡಿ!
ಬಾರಬಂಕಿ (ಉತ್ತರ ಪ್ರದೇಶ), ಮಾ.26: ಸಮೀಪದ ಮೊಹ್ಮದಾಪುರ ಖಾಲಾ ಪಿಲೀಟ್ ಠಾಣೆ ರವಿವಾರ ಕಲ್ಯಾಣ ಮಂಟಪವಾಗಿ ಮಾರ್ಪಟ್ಟಿತ್ತು. ಪೊಲೀಸ್ ಪೌರೋಹಿತ್ಯದಲ್ಲಿ ಪ್ರೇಮಿಗಳಿಬ್ಬರು ವಿವಾಹ ಬಂಧನಕ್ಕೊಳಗಾದರು.
ಯುವ ಜೋಡಿಯ ಪ್ರೇಮವಿವಾಹಕ್ಕೆ ಎರಡೂ ಕುಟುಂಬಗಳ ವಿರೋಧ ಇದ್ದ ಹಿನ್ನೆಲೆಯಲ್ಲಿ ಪೊಲೀಸರೇ ವಿವಾಹ ಏರ್ಪಡಿಸಿದರು. ವಿನಯ್ ಕುಮಾರ್ ಹಾಗೂ ನೇಹಾ ವರ್ಮಾ ಹಲವು ಸಮಯದಿಂದ ಪ್ರೀತಿಸುತ್ತಿದ್ದರೂ ಇವರ ವಿವಾಹಕ್ಕೆ ಕುಟುಂಬದವರ ಒಪ್ಪಿಗೆ ದೊರಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಬ್ಬರೂ ಮನೆ ಬಿಟ್ಟು ಓಡಿಹೋದರು. ಎರಡೂ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದರು.
ತನಿಖೆ ನಡೆಸಿದಾಗ ಇಬ್ಬರೂ ವಯಸ್ಕರಾಗಿರುವುದು ಮತ್ತು ಪರಸ್ಪರ ಪ್ರೇಮಿಸುತ್ತಿದ್ದುದು ಗೊತ್ತಾಯಿತು. ಈ ಹಿನ್ನೆಲೆಯಲ್ಲಿ ಎರಡೂ ಕುಟುಂಬಗಳ ಒಪ್ಪಿಗೆ ಪಡೆದು ಪೊಲೀಸ್ ಠಾಣೆಯಲ್ಲೇ ವಿವಾಹ ಏರ್ಪಡಿಸಲಾಯಿತು.
"ಯುವಕ- ಯುವತಿ ಎರಡು ದಿನಗಳಿಂದ ನಾಪತ್ತೆಯಾಗಿದ್ದರು. ಅವರ ಪೋಷಕರು ದೂರು ದಾಖಲಿಸಲು ಠಾಣೆಗೆ ಬಂದರು. ಇಬ್ಬರೂ ಪ್ರೇಮವಿವಾಹವಾಗಲು ಮುಂದಾಗಿರುವುದು ಪೊಲೀಸರಿಗೆ ಗೊತ್ತಾಯಿತು. ಆದ್ದರಿಂದ ಎರಡೂ ಕುಟುಂಬಗಳ ಒಪ್ಪಿಗೆ ಪಡೆದು ಠಾಣೆಯಲ್ಲೇ ವಿವಾಹ ಏರ್ಪಡಿಸಲಾಯಿತು" ಎಂದು ಹೆಚ್ಚುವರಿ ಎಸ್ಪಿ ದಿಗಂಬರ್ ಕುಶ್ವಾಹ ಹೇಳಿದ್ದಾರೆ.