ಮಸ್ಕತ್: ಜೀವನ್ಮರಣ ಪರಿಸ್ಥಿತಿಯಲ್ಲಿದ್ದ ಕರಾವಳಿಯ ವ್ಯಕ್ತಿಗೆ ಆಸರೆಯಾದ ಸೋಶಿಯಲ್ ಫೋರಮ್

Update: 2018-03-27 12:10 GMT
ಮಂಗಳೂರು ತಲುಪಿದ ಮುಹಮ್ಮದ್ ಕಬೀರ್ 

ಮಸ್ಕತ್, ಮಾ. 27: ಸರಿಯಾದ ದಾಖಲೆ ಪತ್ರಗಳಿಲ್ಲದ ಕಾರಣ ತವರಿಗೆ ಹಿಂತಿರುಗಲು ಸಾಧ್ಯವಾಗದೆ ಅನಾರೋಗ್ಯಪೀಡಿತರಾಗಿ ಜೀವನ್ಮರಣ ಪರಿಸ್ಥಿತಿಯಲ್ಲಿದ್ದ ಕರಾವಳಿಯ ವ್ಯಕ್ತಿಯೊಬ್ಬರನ್ನು ತಾಯ್ನಾಡಿಗೆ ಕಳುಹಿಸುವಲ್ಲಿ ಮಸ್ಕತ್ ಸೋಶಿಯಲ್ ಫೋರಮ್ ಯಶಸ್ವಿಯಾಗಿದೆ.

ಹಳೆಯಂಗಡಿ ಚೇಳಾರ್ ನಿವಾಸಿ ಮುಹಮ್ಮದ್ ಕಬೀರ್ ಎಂಬವರು ಒಮಾನ್ ನ ಮಸ್ಕತ್ ನಗರದಲ್ಲಿ ಸಂಕಷ್ಟಕ್ಕೀಡಾಗಿದ್ದ ವ್ಯಕ್ತಿಯಾಗಿದ್ದು, ನಿರಂತರ 10 ದಿನಗಳ ಕಾಲ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯ ಬಳಿಕ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಅವರನ್ನು ಊರಿಗೆ ಕಳುಹಿಸಲು ಬೇಕಾದ ಎಲ್ಲ ಕಾನೂನು ಪ್ರಕ್ರಿಯೆಗಳನ್ನು  ಮುಗಿಸಿ ಮಸ್ಕತ್ ವಿಮಾನ ನಿಲ್ದಾಣದ ಮೂಲಕ ಮಂಗಳವಾರ ಬೀಳ್ಕೊಡಲಾಗಿದ್ದು, ಅವರು ಇದೀಗ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಅವರ ಬಿಡುಗಡೆಯ ಉಸ್ತುವಾರಿ ವಹಿಸಿಕೊಂಡಿದ್ದ ಸೋಶಿಯಲ್ ಫೋರಮ್ ನ ಅಬ್ದುಲ್ ಹಮೀದ್  ತಿಳಿಸಿದ್ದಾರೆ.

ಅಪರೂಪದ ಪ್ರಕರಣ: ಸಂತ್ರಸ್ತ 50ರ ಹರೆಯದ ಕಬೀರ್ ಅವರು 2013 ರಲ್ಲಿ ದುಬೈಗೆ ಉದ್ಯೋಗಕ್ಕೆ ತೆರಳಿದ್ದು, 5 ವರ್ಷಗಳ ಕಾಲ ದುಡಿದಿದ್ದಾರೆ. ಈ ಮಧ್ಯೆ ಅವರು ತಮ್ಮ ಉದ್ಯೋಗಕ್ಕೆ ಸಂಬಂಧಿಸಿದ ಅಗತ್ಯ ದಾಖಲೆ ಪತ್ರಗಳನ್ನು ಕಳೆದುಕೊಂಡಿದ್ದು ಊರಿಗೆ ಹಿಂತಿರುಗಲು ಸಾಧ್ಯವಾಗದ ಪರಿಸ್ಥಿತಿ ಯಲ್ಲಿದ್ದರು. ಮೂತ್ರಕೋಶದಲ್ಲಿ ತೊಂದರೆ ಕಾಣಿಸಿಕೊಂಡಾಗ ಒಮಾನ್ ಮಾರ್ಗವಾಗಿ ಊರಿಗೆ ಹಿಂತಿರುಗಲು ಪ್ರಯತ್ನಿಸಿದ್ದರು. ಆದರೆ ಒಮಾನ್ ನ ಮಸ್ಕತ್ ನಗರಕ್ಕೆ ತಲುಪಿದ ಅವರಿಗೆ ಆರೋಗ್ಯ ಪರಿಸ್ಥಿತಿ ಉಲ್ಬಣಿಸಿ ನಡೆದಾಡಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದರು. ಅವರಲ್ಲಿ ಸರಿಯಾದ ದಾಖಲೆ ಪತ್ರಗಳು ಇಲ್ಲದಿರುವುದರಿಂದ ಪ್ರಕರಣವು ಜಟಿಲಗೊಂಡಿತ್ತು ಎಂದೂ ಅವರು ಮಾಹಿತಿ ನೀಡಿದ್ದಾರೆ. 

ನಗರದಲ್ಲಿ ಅನಾಥರಾಗಿ ಬಿದ್ದಿದ್ದ ಕಬೀರ್ ಅವರನ್ನು ಗಮನಿಸಿದ ಸೋಶಿಯಲ್ ಫೋರಮ್ ಈ ಪ್ರಕರಣವನ್ನು ಬಗೆಹರಿಸುವ ಕಾನೂನಾತ್ಮಕ ಪರಿಹಾರ ಮಾರ್ಗೋಪಾಯಗಳ ಬಗ್ಗೆ ಒಮಾನ್ ಪೊಲೀಸ್ ಇಲಾಖೆ ಮತ್ತು ಭಾರತೀಯ ರಾಯಭಾರ ಕಚೇರಿ ಮತ್ತು ಆಸ್ಪತ್ರೆಯ ಆಡಳಿತ ವಿಭಾಗದೊಂದಿಗೆ ಸಮಾಲೋಚನೆ ನಡೆಸಿತ್ತು. ಭಾರತೀಯ ರಾಯಭಾರಿ ಕಚೇರಿಯು ಅತ್ಯುತ್ತಮ ರೀತಿಯಲ್ಲಿ ಮಾನವೀಯ ನೆಲೆಯಲ್ಲಿ ಸ್ಪಂದಿಸಿತು ಎಂದು ಹೇಳಿದರು.

ಇದೀಗ ಕಬೀರ್ ಅವರು ಚೇತರಿಸಿಕೊಳ್ಳುತ್ತಿದ್ದು ತಕ್ಷಣವೇ ಅವರಿಗೆ ಇನ್ನೊಂದು ಶಸ್ತ್ರಚಿಕಿತ್ಸೆ ಮತ್ತು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂದು ಅಬ್ದುಲ್ ಹಮೀದ್  ತಿಳಿಸಿದರು.

ಕೃತಜ್ಞತೆ: ಪ್ರರಣದ ಸುಖಾಂತ್ಯಕ್ಕೆ ಸಹಕರಿಸಿದ ಸೋಶಿಯಲ್ ಫೋರಮ್ ಕಾರ್ಯಕರ್ತರಾದ ಮುಹಮ್ಮದ್ ಆಸಿಫ್, ಸಂಶುದ್ದೀನ್, ನೂರುದ್ದೀನ್, ಯೂಸುಫ್ ಮುಕ್ಕ, ಮುಆಝ್, ಆಸಿಫ್ ಹಳೆಯಂಗಡಿ, ಅಬ್ದುಲ್ ಸಲಾಮ್ ತುಂಬೆ ಮುಂತಾದವರಿಗೆ ಸೋಶಿಯಲ್ ಫೋರಮ್ ಕೃತಜ್ಞತೆ ಸಲ್ಲಿಸುತ್ತದೆ. 
ಅಲ್ಲದೆ ಕಬೀರ್ ಅವರನ್ನು ಮಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ಆಸ್ಪತ್ರೆಗೆ ಸಾಗಿಸಲು ಅಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಿದ ಹಾಗೂ ಮುಂದಿನ ವೈದ್ಯಕೀಯ ಚಿಕಿತ್ಸೆಗೆ ಮಾರ್ಗದರ್ಶನ ನೀಡಿದ ಪಾಪ್ಯುಲರ್ ಫ್ರಂಟ್ ನ ನವಾಝ್ ಉಳ್ಳಾಲ ಅವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ಫಯಾಝ್ ನೆಕ್ಕಿಲಾಡಿ

contributor

Editor - ಫಯಾಝ್ ನೆಕ್ಕಿಲಾಡಿ

contributor

Similar News