ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮ ಒಡೆಯುವ ಕೆಲಸ ಮಾಡಿಲ್ಲ: ಡಾ.ಕೆ.ಮರುಳಸಿದ್ದಪ್ಪ

Update: 2018-03-27 15:56 GMT

ಬೆಂಗಳೂರು, ಮಾ.27: ಪ್ರಸಕ್ತವಾಗಿ ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಚರ್ಚೆಯಾಗುತ್ತಿದ್ದು, ರಾಜಕೀಯ ಮೇಲಾಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕದಲ್ಲಿ ಒಂದಾಗಿದ್ದ ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಲಿಂಗಾಯತ ಪ್ರತ್ಯೇಕ ಧರ್ಮವಿಚಾರದಲ್ಲಿ ಸಿದ್ದರಾಮಯ್ಯ ತಾಂತ್ರಿಕವಾಗಿ ಬೇಡಿಕೆ ಈಡೇರಿಸಲು ಪೋಸ್ಟ್‌ಮ್ಯಾನ್ ರೀತಿ ಕಾರ್ಯನಿರ್ವಹಿಸಿದ್ದಾರೆ ಹೊರತು, ಮತ್ತೇನು ಅಲ್ಲ ಎಂದು ಹಿರಿಯ ಸಾಹಿತಿ ಹಾಗೂ ಕುವೆಂಪು ಭಾಷಾ ಭಾರತಿ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ ಹೇಳಿದ್ದಾರೆ.

ಮಂಗಳವಾರ ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ಸಮಕಾಲೀನ ವಿಚಾರ ವೇದಿಕೆ ಆಯೋಜಿಸಿದ್ದ ಲಿಂಗಾಯತ ಪ್ರತ್ಯೇಕ ಧರ್ಮ ಒಂದು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಸಿದ್ದರಾಮಯ್ಯನವರ ಬಳಿ ಬಂದಾಗ ಅದಕ್ಕೆ ಪ್ರತ್ಯೇಕ ಸಮಿತಿ ರಚಿಸಿ, ಸಚಿವ ಸಂಪುಟದಿಂದ ಒಪ್ಪಿಗೆ ಪಡೆದು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಇದರಲ್ಲಿ ಧರ್ಮ ಒಡೆಯುವ ಪ್ರಶ್ನೆಯೇ ಇಲ್ಲ. ಕೇವಲ ಸಿದ್ದರಾಮಯ್ಯ ತಾಂತ್ರಿಕವಾಗಿ ಪೋಸ್ಟ್‌ಮ್ಯಾನ್ ಕಾರ್ಯ ನಿರ್ವಹಿಸಿದ್ದಾರೆ ಎಂದರು.

ಲಿಂಗಾಯತ ಪ್ರತ್ಯೇಕ ಧರ್ಮದಿಂದ ಲಿಂಗಾಯತದೊಳಗಿರುವ ಹಿಂದುಳಿದವರಿಗೆ ಎಷ್ಟು ಪ್ರಯೋಜನವಾಗುತ್ತದೆ. ಅದರ ಹೊರಗಿರುವವರ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದನ್ನು ವಿಮರ್ಶೆ ಮಾಡಬೇಕಿದೆ ಎಂದು ನುಡಿದರು.

ಹಿಂದೂ ಧರ್ಮ ಕಲ್ಪಿತ: ಲಿಂಗಾಯತ ಧರ್ಮ ಅಸ್ಮಿತೆ ವಿಚಾರ. ಹಿಂದೂ ಧರ್ಮವೆಂಬುದು ಬ್ರಿಟಿಷರ ವಿರುದ್ಧ ಹೋರಾಡಲು ಹುಟ್ಟು ಹಾಕಿದ ಅಸ್ತ್ರ. ಇದೊಂದು ಕಲ್ಪಿತ ಧರ್ಮವಾದ್ದರಿಂದ ಇದರ ಬಗ್ಗೆ ಎಲ್ಲಿಯೂ ಚರ್ಚೆ ನಡೆದಿಲ್ಲ. ಹೀಗಾಗಿ ಹಿಂದೂ ಧರ್ಮದ ಬಗ್ಗೆ ಚರ್ಚೆ ನಡೆಯಲು ಇದು ಸಕಾಲ ಎಂದು ಮರುಳಸಿದ್ದಪ್ಪ ಹೇಳಿದರು.

ಹಿರಿಯ ಸಾಹಿತಿ ಡಾ.ಚಂದ್ರಶೇಖರ ಪಾಟೀಲ ಮಾತನಾಡಿ, ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಪ್ರಾರಂಭದಲ್ಲಿ ಒಂದು ಬಿಂದುವಿನಿಂದ ಹೊರಟು ದೊಡ್ಡ ಜನಸಮುದಾಯದ ಮೂಲಕ ವಿಚಾರ ಭಾವನೆಯಿಂದ ವಿಸ್ತಾರರೂಪ ಪಡೆದು ಇತಿಹಾಸದಲ್ಲಿ ಬೃಹತ್ ಸಮುದಾಯವಾಗಿ ನಿಂತಿದೆ. ಅಲ್ಪಸಂಖ್ಯಾತ ಎಂಬ ಪದಬಳಕೆ ಮಾಡಿದ್ದರು ಸಹ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರದಾದ್ಯಂತ ಲಿಂಗಾಯತ ಸಮುದಾಯವಿದೆ ಎಂದರು.

ಅವರೇ ಪ್ರತ್ಯೇಕ ಕೇಳಿದರು: ಅಖಿಲ ಭಾರತ ವೀರಶೈವ ಮಹಾಸಭಾದವರು ಅಭಿನಂದನಾ ಸಮಾರಂಭದಲ್ಲಿ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಹಕ್ಕೊತ್ತಾಯ ಮಾಡಿದ್ದರು. ಸೂಚಿತ ಪರಿಹಾರದಲ್ಲಿ ಲಿಂಗಾಯತ ಹಾಗೂ ಬಸವತತ್ವದಲ್ಲಿ ನಂಬಿಕೆ ಇರುವ ವೀರಶೈವರು ಎಂದು ಹೇಳಿರುವುದರಿಂದ ಬಸವ ತತ್ವ ಬೇಡ ವೀರಶೈವ ಲಿಂಗಾಯತ ಬರಬೇಕು ಎನ್ನುತ್ತಿದ್ದಾರೆ ಎಂದು ಅವರು ಹೇಳಿದರು.

12ನೆ ಶತಮಾನದ ಅನುಭವ ಮಂಟಪದಲ್ಲಿ ಸಮಾನತೆ, ಸಾಮಾಜಿಕ ನ್ಯಾಯ ಸಾರಲು ಹೊರಟಾಗ ರಾಜಕೀಯ, ಸಂಘರ್ಷ ಎಲ್ಲವೂ ಇತ್ತು. ವೈದಿಕ ಪರಂಪರೆ ಧಿಕ್ಕರಿಸಿ ವಿಚಾರವಾದದ ಮೂಲಕ ಹೊಸ ಮನ್ವಂತರಕ್ಕೆ ಕಾಲಿಡುವ ಕಾಲಘಟ್ಟಕ್ಕೆ ನಾಂದಿಯಯಿತು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಜಿ.ಎನ್.ನಾಗರಾಜ್, ಟಿ.ಆರ್. ಚಂದ್ರಶೇಖರ್, ಹುಲಿಕುಂಟೆ ಮೂರ್ತಿ, ಡಾ.ಕೆ.ಷರೀಫಾ, ಪ್ರಭಾ ಬೆಳವಂಗಲ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News