ಚೆಂಡು ವಿರೂಪ ವಿವಾದ: ಸ್ಟೀವ್ ಸ್ಮಿತ್, ವಾರ್ನರ್ಗೆ ಐಪಿಎಲ್ ನಿಂದ ಗೇಟ್ ಪಾಸ್
Update: 2018-03-28 10:35 GMT
ಹೊಸದಿಲ್ಲಿ,ಮಾ.28 : ಚೆಂಡು ವಿರೂಪಗೊಳಿಸಿದ ಹಗರಣದಲ್ಲಿ ಶಾಮೀಲಾಗಿದ್ದಾರೆನ್ನಲಾದ ಆರೋಪ ಹೊತ್ತಿರುವ ಕ್ರಿಕೆಟಿಗರಾದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಇಬ್ಬರಿಗೂ ಕ್ರಿಕೆಟ್ ಆಸ್ಟ್ರೇಲಿಯಾ ನಿಷೇಧ ಹೇರಿದ ಬೆನ್ನಿಗೇ ಬಿಸಿಸಿಐ ಬುಧವಾರ ಅವರಿಗೆ ಈ ವರ್ಷದ ಐಪಿಎಲ್ ಪಂದ್ಯಗಳಲ್ಲಿ ಭಾಗವಹಿಸದಂತೆ ನಿರ್ಬಂಧ ಹೇರಿದೆ.
ಸ್ಟೀವ್ ಸ್ಮಿತ್ ರಾಜಸ್ಥಾನ್ ರಾಯಲ್ಸ್ ಹಾಗೂ ಡೇವಿಡ್ ವಾರ್ನರ್ ಅವರು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಾಯಕತ್ವ ವಹಿಸುವವರಿದ್ದರು. ಆದರೆ ತಮ್ಮ ಮೇಲೆ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಇಬ್ಬರೂ ತಮ್ಮ ನಾಯಕ ಸ್ಥಾನದಿಂದ ಹಿಂದೆ ಸರಿದಿದ್ದಾರೆ.
ಇಬ್ಬರನ್ನೂ ಈ ವರ್ಷದ ಐಪಿಎಲ್ ನಿಂದ ನಿಷೇಧಿಸಿರುವ ಬಗ್ಗೆ ಇಂದು ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ. ಎರಡೂ ತಂಡಗಳಿಗೆ ಬದಲಿ ಆಟಗಾರರಿಗೆ ಅವಕಾಶವೊದಗಿಸಲು ಅನುವು ಮಾಡಿ ಕೊಡಲಾಗುವುದು ಎಂದೂ ಅವರು ತಿಳಿಸಿದ್ದಾರೆ.