ಕರ್ನಾಟಕದಲ್ಲೂ ಗೋಹತ್ಯೆ ನಿಷೇಧಕ್ಕೆ ಸಂಕಲ್ಪ: ಕೇಂದ್ರ ಸಚಿವ ಅನಂತಕುಮಾರ್

Update: 2018-03-29 13:08 GMT

ಬೆಂಗಳೂರು, ಮಾ.29: ಉತ್ತರಪ್ರದೇಶದ ಮಾದರಿಯಲ್ಲಿ ರಾಜ್ಯದಲ್ಲೂ ಗೋ ಹತ್ಯೆ ನಿಷೇಧ ಮಾಡಲು ಬಿಜೆಪಿ ಸಂಕಲ್ಪ ಮಾಡಿದೆ ಎಂದು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ತಿಳಿಸಿದರು.

ಗುರುವಾರ ಜೈನ್ ಯುವ ಸಂಘಟನೆ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಆಯೋಜಿಸಿದ್ದ ಭಗವಾನ್ ಮಹಾವೀರರ 2617ನೆ ಜನ್ಮ ಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಗೋಹತ್ಯೆ ನಿಷೇಧಕ್ಕೆ ತೆಗೆದುಕೊಂಡಿರುವ ಕ್ರಮಗಳನ್ನು ರಾಜ್ಯದಲ್ಲೂ ಅನುಸರಿಸಲಾಗುವುದು ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಶೇ.100ರಷ್ಟು ಸಸ್ಯಾಹಾರಿಗಳು. ನವರಾತ್ರಿ ದಿನಗಳಂದು ಕಟ್ಟುನಿಟ್ಟಿನ ಉಪವಾಸ ಮಾಡುತ್ತಾರೆ. ಹೊರ ದೇಶಗಳಲ್ಲಿದ್ದರೂ ಉಪವಾಸ ವ್ರತವನ್ನು ಕೈ ಬಿಡುವುದಿಲ್ಲ. ಇದಕ್ಕೆ ಭಗವಾನ್ ಮಹಾವೀರರ ಚಿಂತನೆಗಳು ಸ್ಫೂರ್ತಿ ಎಂದು ಪ್ರಧಾನಿ ಮೋದಿ ನನ್ನ ಬಳಿ ಹೇಳಿದ್ದರು ಎಂದು ಅವರು ತಿಳಿಸಿದರು.

ದೇಶಭಕ್ತಿ, ಅಹಿಂಸೆ, ಸೇವಾ ಮನೋಭಾವ ಹಾಗೂ ಧರ್ಮ ಪರಿಪಾಲನೆಯಲ್ಲಿ ಜೈನ ಸಮುದಾಯ ಮಾದರಿಯಾಗಿದೆ. ಭಗವಾನ್ ಮಹಾವೀರರ ಆದರ್ಶ ಚಿಂತನೆಗಳು ದೇಶದ ಅಭಿವೃದ್ಧಿಗೆ ಪೂರಕವಾಗಿದ್ದು, ಅವರ ಮಾರ್ಗದರ್ಶನದಲ್ಲಿ ಸಾಗಲು ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಅವರು ಆಶಿಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್ ಮಾತನಾಡಿ, ಭಗವಾನ್ ಮಹಾವೀರರ ಅಹಿಂಸಾ ತತ್ವ, ಸರಳ ಜೀವನ ದೇಶದ ಅಭಿವೃದ್ಧಿಗೆ ಪ್ರೇರಣೆಯಾಗಿದೆ. ಇಂತಹ ಮೌಲ್ಯಯುತ ಆದರ್ಶಗಳನ್ನು ಪರಿಪಾಲಿಸುವ ಮೂಲಕ ನಾವೆಲ್ಲರೂ ಸೌಹಾರ್ದಯುತ ಜೀವನ ನಡೆಸೋಣವೆಂದು ತಿಳಿಸಿದರು.

ತನಗೆ ಜೈನ ಸಮುದಾಯಕ್ಕೆ ಸೇರಿದ ಹಲವು ಮಂದಿ ಗೆಳೆಯರಿದ್ದಾರೆ. ಅವರು ಭಗವಾನ್ ಮಹಾವೀರರ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದಾರೆ. ತನ್ನೊಂದಿಗೆ ಮಾತನಾಡುವ ಸಂದರ್ಭದಲ್ಲಿ ಎಂದಿಗೂ ನಕಾರಾತ್ಮಕವಾಗಿ ಯೋಚಿಸಿದ್ದನ್ನು ನಾನು ಗಮನಿಸಿಲ್ಲ. ಎಂತಹ ಸಮಸ್ಯೆ ಬಂದರು ತಾಳ್ಮೆಗೆಡದೆ ಸಮಚಿತ್ತದಿಂದ ಪರಿಹಾರೋಪಾಯಗಳನ್ನು ಕಂಡುಕೊಳ್ಳುತ್ತಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜೈನ ಯುವ ಸಂಘಟನೆಯ ಅಧ್ಯಕ್ಷ ಜೈನ್ ವಿನೋದ್ ನಂದಾವತ್, ಕಾರ್ಯದರ್ಶಿ ಜೈನ್ ದಿಲೀಪ್ ಸಂಚೇತಿ, ಆಚಾರ್ಯ ಚಂದ್ರ ಸೂರಿಜಿ ಮಹಾರಾಜ್, ಮುಕ್ತಿಸಾಗರ್ ಸೂರಿಜಿ ಮಹಾರಾಜ್, ರತ್ನಸೇನ್ ಸೂರಿಜಿ ಮಹಾರಾಜ್, ಚಂದ್ರಜೀತ್ ಸೂರಿಜಿ ಮಹಾರಾಜ್, ಸಾಧ್ವಿ ಕಂಚನ್ ಪ್ರಭಾಜಿ, ಸಾಧ್ವಿ ವೀರಕಾಂತಾಜಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಕೇಂದ್ರ ಸರಕಾರ ಭಗವಾನ್ ಮಹಾವೀರರ ಚಿಂತನೆಗಳ ಮಾರ್ಗದಲ್ಲಿ ಆಡಳಿತ ನಡೆಸುತ್ತಿದೆ. ಹೀಗಾಗಿ ರಾಜ್ಯದಲ್ಲಿರುವ ಜೈನ ಸಮುದಾಯ ಭಗವಾನ್ ಮಹಾವೀರರ ತತ್ವಾದರ್ಶಗಳ ಪರವಾಗಿರುವ ಪಕ್ಷಕ್ಕೆ ಬೆಂಬಲ ಸೂಚಿಸಿ.

-ಅನಂತ ಕುಮಾರ್, ಕೇಂದ್ರ ಸಚಿವ 

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೆ ಒಂದು ಸಿದ್ಧಾಂತದಿಂದ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ. ಎಲ್ಲ ತತ್ವಾದರ್ಶಗಳು ಬೇಕಾಗುತ್ತದೆ. ಹೀಗಾಗಿ ರಾಜ್ಯದ ಜೈನ ಸಮುದಾಯ ಯಾವುದೆ ಒಂದು ಪಕ್ಷಕ್ಕೆ ಜೋತು ಬೀಳದೆ ಎಲ್ಲ ಪಕ್ಷಗಳನ್ನು ಬೆಂಬಲಿಸಿ.
-ದಿನೇಶ್‌ಗುಂಡೂರಾವ್ ಕಾರ್ಯಾಧ್ಯಕ್ಷ, ಕೆಪಿಸಿಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News