ಬೆಂಗಳೂರು: ಕಾರು ಚಾಲಕನ ಮೇಲೆ ಹಲ್ಲೆ; ನಾಲ್ವರ ಬಂಧನ
Update: 2018-04-03 22:57 IST
ಬೆಂಗಳೂರು, ಎ.3: ಕ್ಷುಲ್ಲಕ ಕಾರಣಕ್ಕೆ ದೊಂಬಿ ನಡೆಸಿ ಕಾರು ಚಾಲಕನ ಮೇಲೆ ತೀವ್ರ ಹಲ್ಲೆ ನಡೆಸಿದ ನಾಲ್ವರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಾಚೋಹಳ್ಳಿ ಕಾಲನಿಯ ಶ್ರೀಕಾಂತ್(26), ಅಗ್ರಹಾರ ದಾಸರಹಳ್ಳಿಯ ಪ್ರದೀಪ್(21), ಗೊಲ್ಲರಹಳ್ಳಿಯ ವಿಜಯಕುಮಾರ್(23), ವಿಜಯನಗರದ ಎಂಸಿ ಲೇಔಟ್ನ ಕಿರಣ್ಕುಮಾರ್(19) ಎಂದು ಗುರುತಿಸಲಾಗಿದೆ.
ಆರೋಪಿಗಳು ಕಳೆದ ಮಾ.26ರ ರಾತ್ರಿ ದಾಸರಹಳ್ಳಿಯ ವ್ಯಾಪ್ತಿಯ ಹೊಟೇಲ್ವೊಂದರ ಬಳಿ ಕಾರು ಚಾಲಕ ಅಕ್ಬರ್ಪಾಷ ಎಂಬುವರು ನಿಂತಿದ್ದಾಗ ಏಕಾಏಕಿ ಬಂದು ಗಲಾಟೆ ಮಾಡಿದ್ದರು. ಗಲಾಟೆಯಲ್ಲಿ ಅಕ್ಬರ್ ಪಾಷ ಅವರ ತೊಡೆ, ಬೆನ್ನು, ಎಡಗೈಗೆ ಹೊಡೆದು ತೀವ್ರ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಸ್ಥಳೀಯರು ಅಕ್ಬರ್ ಪಾಷನನ್ನು ಆಸ್ಪತ್ರೆಗೆ ದಾಖಲಿಸಿ ಅವರ ಮನೆಯವರಿಗೆ ವಿಷಯ ತಿಳಿಸಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ವಿಜಯನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ, ಉಳಿದವರಿಗಾಗಿ ಶೋಧ ನಡೆಸಿದ್ದಾರೆ.