ಬೆಂಗಳೂರು: 108 ಕೆ.ಜಿ ಗಾಂಜಾ ವಶ; 9 ಜನರ ಬಂಧನ
ಬೆಂಗಳೂರು, ಎ.7: ಮಾದಕ ವಸ್ತು ಗಾಂಜಾ ಮಾರಾಟ ಜಾಲವನ್ನು ಭೇದಿಸಿರುವ ಸಿಸಿಬಿ ಪೊಲೀಸರು, ಬರೋಬ್ಬರಿ 108 ಕೆ.ಜಿ. ಗಾಂಜಾ ವಶಕ್ಕೆ ಪಡೆದು, ಹೊರ ರಾಜ್ಯಗಳಿಗೆ ಗಾಂಜಾ ರಫ್ತು ಮಾಡುತ್ತಿದ್ದ ಆರೋಪ ಮೇಲೆ 9 ಜನರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.
ಪ್ರಕರಣ ಸಂಬಂಧ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಪ್ರಕರಣದ ಪ್ರಮುಖ ಆರೋಪಿ ನಂದನ್ಕುಮಾರ್ ಸೇರಿ ಒಂಭತ್ತು ಮಂದಿಯನ್ನು ಬಂಧಿಸಲಾಗಿದೆ. ಅದೇ ರೀತಿ, ಕೃತ್ಯಕ್ಕೆ ಬಳಕೆ ಮಾಡುತ್ತಿದ್ದ 2 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ಕೇರಳದ ತ್ರಿಶೂರ್ನ ನಂದನ್ಕುಮಾರ್ (36), ಕೊಚ್ಚಿನ್ನ ಅನಸ್ (26), ಶಾಫಿಕುಂಜು ಮರ್ಕರ್(29), ಪ್ರಜಿಲ್ ದಾಸ್ (27), ತ್ರಿವೆಂಡ್ರಮ್ನ ಸಾಜನ್ ದಾಸ್ (22), ಮಲ್ಲಪುರಂನ ಅಕ್ಷಯ್ ಕುಮಾರ್ (22), ತ್ರಿಶೂರ್ನ ಶಿನಾಜ್(27), ನಝೀಬ್ (25), ಮುಸ್ತಾಕ್ (20) ಬಂಧಿತರು ಎಂದು ಆಯುಕ್ತರು ಮಾಹಿತಿ ನೀಡಿದರು.
ಪ್ರಕರಣದ ವಿವರ: ಒರಿಸ್ಸಾದಿಂದ ಕರ್ನಾಟಕ ಸೇರಿದಂತೆ ತಮಿಳುನಾಡು, ಕೇರಳ ರಾಜ್ಯಗಳಿಗೆ ಗಾಂಜಾವನ್ನು ಮಾರಾಟ ಮಾಡುವ ಜಾಲ ನಗರವನ್ನು ಕೇಂದ್ರವಾಗಿರಿಸಿಕೊಂಡು ದಂಧೆ ನಡೆಸುತ್ತಿರುವ ಮಾಹಿತಿಯಾಧರಿಸಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ನಗರ ಜೀವನ್ ಭೀಮಾನಗರದಲ್ಲಿ ಬಂಧಿಸಿದ ಆರೋಪಿಯೊಬ್ಬ ಗಾಂಜಾ ಮಾರಾಟ ಜಾಲದ ಪ್ರಮುಖ ರೂವಾರಿ ನಂದನ್ಕುಮಾರ್ ಬಗ್ಗೆ ಬಾಯಿಬಿಟ್ಟಿದ್ದ.
ಆರೋಪಿ ನಂದನ್ಕುಮಾರ್ ವಿರುದ್ಧ ಜೀವನ್ಭೀಮಾನಗರ ಪೊಲೀಸ್ ಠಾಣೆ ಸೇರಿ ವಿವಿಧ ಕಡೆ ಮಾದಕ ವಸ್ತು ಮಾರಾಟ ಆರೋಪ ಸಂಬಂಧ ದೂರು ದಾಖಲಾಗಿದ್ದು, ಈತ ತಲೆಮರೆಸಿಕೊಂಡಿದ್ದ. ಎ.4 ರಂದು ನಂದನ್ಕುಮಾರ್ ಸೇರಿ ಇತರರು ಒರಿಸ್ಸಾದಿಂದ ಬೆಂಗಳೂರಿಗೆ ಗಾಂಜಾ ತೆಗೆದುಕೊಂಡು ಹೊರಟಿರುವ ಖಚಿತ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಿದರು.
ಹಳೇ ಮದ್ರಾಸ್ ರಸ್ತೆಯ ಈಶ್ವರ ನಗರದ ಮನೆಯೊಂದರ ಬಳಿ ಶನಿವಾರ ಮುಂಜಾನೆ 3 ಗಂಟೆ ಸುಮಾರಿಗೆ ನಂದನ್ಕುಮಾರ್ ಕಾರಿನಲ್ಲಿ ಬಂದಿದ್ದು, ಆತನ ಹಿಂದೆ ಇನೊವಾ ಕಾರು ಕೂಡ ಬಂದಿದೆ. ತಕ್ಷಣವೆ ಸುತ್ತುವರೆದ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸಿದಾಗ 7 ಚೀಲಗಳಲ್ಲಿ ಬಂಡಲ್ ಮಾಡಿದ 108 ಕೆಜಿ ಗಾಂಜಾ ಪತ್ತೆಯಾಗಿದೆ. ಇನ್ನು ಆರೋಪಿಯ ಜೊತೆಯಿದ್ದ 8 ಮಂದಿಯನ್ನು ಬಂಧಿಸಲಾಗಿದೆ ಎಂದು ಟಿ.ಸುನೀಲ್ಕುಮಾರ್ ವಿವರಿಸಿದರು.
ಆರೋಪಿಯು ಒರಿಸ್ಸಾದ ನಕ್ಸಲ್ ಪೀಡಿತ ಕಾಜುವಾಕಾದಿಂದ ಗಾಂಜಾ ತೆಗೆದುಕೊಂಡು ಬಂದಿರುವುದಾಗಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಆ ಪ್ರದೇಶದಲ್ಲಿ ಕೆಜಿಗೆ 5 ಲಕ್ಷ ರೂ.ನಂತೆ ಖರೀದಿಸಿ, ಅದನ್ನು 8 ರಿಂದ 10 ಗ್ರಾಂ ತೂಕದ ಸಣ್ಣ ಸಣ್ಣ ಪ್ಯಾಕೇಟ್ ಮಾಡಿ ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ 300 ರಿಂದ 500 ರೂ.ಗಳಿಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ನಂದನ್ಕುಮಾರ್ ಈ ಹಿಂದೆ ಹಲವು ಬಾರಿ ಒರಿಸ್ಸಾ ಹಾಗೂ ವಿಶಾಖಪಟ್ಟಣದಿಂದ ಬೃಹತ್ ಪ್ರಮಾಣದಲ್ಲಿ ಗಾಂಜಾ ತಂದು ಅದನ್ನು ಮನೆಯಲ್ಲಿಟ್ಟು ಬೇರೆಡೆಗೆ ಜಾಲದಲ್ಲಿದ್ದ ಇತರ ಆರೋಪಿಗಳಿಂದ ಮಾರಾಟ ಮಾಡಿಸುತ್ತಿದ್ದ. ಈತನ ಮನೆಯಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರ, ಗಾಂಜಾ ಪ್ಯಾಕೇಟ್ ಮಾಡಲು ಇರಿಸಿದ್ದ ವಸ್ತುಗಳು, 9 ಮೊಬೈಲ್ಗಳು, ಎಟಿಎಂ ಕಾರ್ಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣವನ್ನು ಡಿಸಿಪಿ ಡಾ. ರಾಮ್ನಿವಾಸ್ ನೇತೃತ್ವದ ಮಹಿಳೆ ಮತ್ತು ಮಾದಕದ್ರವ್ಯ ಘಟಕದ ವಿಶೇಷ ತಂಡ ಭೇದಿಸಿದ್ದು, ತಂಡಕ್ಕೆ 1 ಲಕ್ಷ ರೂ.ಗಳ ನಗದು ಬಹುಮಾನವನ್ನು ಆಯುಕ್ತ ಟಿ. ಸುನಿಲ್ ಕುಮಾರ್ ಘೋಷಿಸಿ, ಸಿಬ್ಬಂದಿಯನ್ನು ಶ್ಲಾಘಿಸಿದರು.