ಬರಗೂರು ರಾಮಚಂದ್ರಪ್ಪ ಪತ್ನಿ ರಾಜಲಕ್ಷ್ಮಿ ನಿಧನ
ಬೆಂಗಳೂರು, ಎ.8: ಹಿರಿಯ ಸಾಹಿತಿ ಮತ್ತು ಚಲನಚಿತ್ರ ನಿದೇರ್ಶಕ ಪ್ರೊ. ಬರಗೂರು ರಾಮಚಂದ್ರಪ್ಪನವರ ಪತ್ನಿ ಎಸ್.ರಾಜಲಕ್ಷ್ಮಿ(66)ನಿಧನರಾಗಿದ್ದಾರೆ. ಮೂತ್ರಪಿಂಡ ವೈಫಲ್ಯದಿಂದ ಕಳೆದ ಕೆಲ ದಿನಗಳಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಈ ಹಿಂದೆ ನಾಲ್ಕು ಬಾರಿ ಹೃದಯ ಸ್ತಂಭನಕ್ಕೆ ಒಳಗಾಗಿದ್ದರು. 50 ದಿನಗಳ ಕಾಲ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ರವಿವಾರ ನಿಧನ ಹೊಂದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ನೇತ್ರದಾನ: ಚಿತ್ರ ನಟ ಡಾ. ರಾಜ್ ಕುಮಾರ್ ಅವರ ಪ್ರಭಾವದಿಂದ ರಾಜಲಕ್ಷ್ಮಿ ಯವರು ನೇತ್ರದಾನ ಮಾಡಲು ನಿರ್ಧರಿಸಿದ್ದರು. ಅದರಂತೆ ಈಗ ಅವರ ಎರಡು ಕಣ್ಣುಗಳನ್ನು ದಾನ ಮಾಡಲಾಗಿದೆ. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಸಿದ್ದನಹಳ್ಳಿ ಗ್ರಾಮದಲ್ಲಿ ಜನಿಸಿದ ರಾಜಲಕ್ಷ್ಮಿ ಬಿ.ಎ. ಮತ್ತು ಹಿಂದಿ ವಿದ್ವಾನ್ ಪದವೀಧರರಾಗಿದ್ದರು. ಕನ್ನಡ ಸಾಹಿತ್ಯ ಪ್ರೇಮಿಯಾದ ಅವರು ನಾಲ್ಕು ದಶಕಗಳ ಹಿಂದೆಯೇ ಸಾಹಿತಿ ಬರಗೂರರೊಂದಿಗೆ ಅಂತರ್ ಜಾತಿ ವಿವಾಹವಾಗಿ ದಿಟ್ಟತನ ತೋರಿದ್ದರು.
ಬರಗೂರು ಬೆನ್ನೆಲುಬು: ಬದುಕಿನುದ್ದಕ್ಕೂ ಬರಗೂರರ ಸಾಹಿತ್ಯ ಮತ್ತು ಸಾಮಾಜಿಕ ಚಳವಳಿಗಳ ಕ್ರಿಯಾಶೀಲತೆಗೆ ಬೆಂಬಲವಾಗಿ ನಿಂತಿದ್ದರು. ರಾಜಲಕ್ಷ್ಮಿ ಅವರು ಪತಿ ಪ್ರೊ.ಬರಗೂರು ರಾಮಚಂದ್ರಪ್ಪ, ಇಬ್ಬರು ಮಕ್ಕಳಾದ ಮೈತ್ರಿ ಬರಗೂರು, ಸ್ಫೂರ್ತಿ ಬರಗೂರು, ಸೊಸೆ ಪದ್ಮಶ್ರೀ ಮತ್ತು ಮೊಮ್ಮಗ ಆಕಾಂಕ್ಷ್ ಅವರನ್ನು ಅಗಲಿದ್ದಾರೆ.
ಜೆಪಿ ನಗರದಲ್ಲಿನ ಮನೆಯಲ್ಲಿ ಸೋಮವಾರ ಬೆಳಗ್ಗೆಯಿಂದ ಮಧ್ಯಾಹ್ನ 1ಗಂಟೆ ವರೆಗೆ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದು, ಮಧ್ಯಾಹ್ನ 2ಗಂಟೆಗೆ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಕುಟುಂಬದವರು ಹೇಳಿದ್ದಾರೆ.