ಕೆ.ಎಸ್.ಪುಟ್ಟಣ್ಣಯ್ಯರಿಗೆ ‘ಬೋಧಿವೃಕ್ಷ' ಪ್ರಶಸ್ತಿ ಪ್ರಕಟ

Update: 2018-04-09 14:04 GMT

ಬೆಂಗಳೂರು, ಎ. 9: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಜಯಂತಿ ಹಿನ್ನೆಲೆಯಲ್ಲಿ ‘ಅಂಬೇಡ್ಕರ್ ಶತಮಾನೋತ್ಸವ ಸಮಿತಿ ಟ್ರಸ್ಟ್’ ಹಾಗೂ ‘ಸ್ಫೂತಿಧಾಮ’ ನೀಡುವ 2018ರ ಪ್ರತಿಷ್ಠಿತ ‘ಬೋಧಿವೃಕ್ಷ’ ಪ್ರಶಸ್ತಿಗೆ(ಮರಣೋತ್ತರ) ರೈತ ಮುಖಂಡ, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಬೋಧಿವೃಕ್ಷ ಪ್ರಶಸ್ತಿಯು 1ಲಕ್ಷ ರೂ.ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

‘ಬೋಧಿವರ್ಧನ’ ಪ್ರಶಸ್ತಿ : ಕಾರ್ಮಿಕ ಸಂಘಟನೆ ನಾಯಕಿ ಎಸ್.ವರಲಕ್ಷ್ಮೀ, ಪವಾಡ ರಹಸ್ಯ ಬಯಲು ಮೂಲಕ ವೈಚಾರಿಕ ಪ್ರಜ್ಞೆ ಮೂಡಿಸುತ್ತಿರುವ ಹುಲಿಕಲ್ ನಟರಾಜ್, ವಂಚಿತ ಸಮುದಾಯದ ಹಕ್ಕುಗಳ ಹೋರಾಟಗಾರ್ತಿ ರೂಪಾ ಹಾಸನ, ಗಾಯಕ ಗೊಲ್ಲಹಳ್ಳಿ ಶಿವಪ್ರಸಾದ್ ಹಾಗೂ ದೇವದಾಸಿ ಹೆಣ್ಣುಮಕ್ಕಳ ಸಂಘಟಕಿ ಚಂದ್ರಮ್ಮಗೋಳ ಸೇರಿದಂತೆ ಐದು ಮಂದಿಯನ್ನು ‘ಬೋಧಿವರ್ಧನ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ತಲಾ 20ಸಾವಿರ ರೂ.ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದ್ದು, ಎ.13 ಮತ್ತು 14ರಂದು ಮಾಗಡಿ ರಸ್ತೆಯ ಅಂಜನಾನಗರದಲ್ಲಿನ ‘ಸ್ಫೂರ್ತಿಧಾಮ’ದಲ್ಲಿ ಏರ್ಪಡಿಸಿರುವ ‘ಅಂಬೇಡ್ಕರ್ ಹಬ್ಬ’ ಕಾರ್ಯಕ್ರಮದಲ್ಲಿ ಬೋಧಿವೃಕ್ಷ ಮತ್ತು ಬೋಧಿವರ್ಧನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಉಪನ್ಯಾಸ: ಎ.13ರ ಸಂಜೆ 5ಗಂಟೆಗೆ ‘ಭಾರತದ ರಾಜಕೀಯ ಮತ್ತು ಧಾರ್ಮಿಕ ಸಂಕಥನದ ಬದಲಾಗುತ್ತಿರುವ ಚೌಕಟ್ಟುಗಳು’ ವಿಷಯದ ಕುರಿತು ಚಿಂತಕ ಪೊ.ರಾಮ್‌ಪುನಿಯಾನಿ ಉಪನ್ಯಾಸ ನೀಡಲಿದ್ದು, ಅಧ್ಯಕ್ಷತೆಯನ್ನು ಪತ್ರಕರ್ತ ಇಂದೂಧರ ಹೊನ್ನಾಪುರ ವಹಿಸಲಿದ್ದಾರೆ.

ಎ.14ರ ಬೆಳಗ್ಗೆ 11ಕ್ಕೆ ‘ನನ್ನ ದೇಶ, ನ್ನನ ಬದುಕು’ ವಿಷಯದ ಕುರಿತು ಸಾಂಸ್ಕೃತಿಕ ಸಂವಾದ ಏರ್ಪಡಿಸಿದ್ದು, ಪ್ರೊ.ಬಾಬುಮ್ಯಾಥ್ಯು, ಶ್ರೀಪಾದಭಟ್, ಪೀರ್ ಭಾಷಾ, ಡಾ.ಅಖಿಲಾ ವಾಸನ್, ವಿಜಯ್‌ಕುಮಾರ್ ಎಸ್., ಹಾಗೂ ಡಾ.ಬಿ.ಯು.ಸುಮಾ ಪಾಲ್ಗೊಳ್ಳಲಿದ್ದಾರೆ.

ಸಂಜೆ 5:30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ಸಮಾರಂಭ ಜರುಗಲಿದ್ದು, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್, ಸಂಸ್ಕೃತಿ ಚಿಂತಕ ಪ್ರೊ.ರಹಮತ್ ತರೀಕೆರೆ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಸ್ಫೂರ್ತಿಧಾಮ ಅಧ್ಯಕ್ಷ ಎಸ್.ಮರಿಸ್ವಾಮಿ ವಹಿಸಲಿದ್ದಾರೆಂದು ಟ್ರಸ್ಟ್ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News