ಸೈದ್ಧಾಂತಿಕ ರಾಜಕಾರಣಕ್ಕೆ ಈಗಲೂ ಭವಿಷ್ಯ: ನಿತೀಶ್‌ ಕುಮಾರ್

Update: 2018-04-11 16:32 GMT

ಬೆಂಗಳೂರು, ಎ.11: ದೇಶದಲ್ಲಿ ಸೈದ್ಧಾಂತಿಕ ರಾಜಕಾರಣಕ್ಕೆ ಈಗಲೂ ಭವಿಷ್ಯವಿದ್ದು, ವಿಧಾನಸಭಾ ಚುನಾವಣೆಯನ್ನು ಸೌರ್ಹಾದತೆಯಿಂದ ಎದುರಿಸಿ ಎಂದು ಜನತಾ ದಳ(ಸಂಯುಕ್ತ) ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.

ಬುಧವಾರ ನಗರದ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಸಂಯುಕ್ತ ಜನತಾದಳದ (ಜೆಡಿಯು) ವತಿಯಿಂದ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಜನರ ನಡುವೆ ಸಾಮಾಜಿಕ ಸಾಮರಸ್ಯ ಕದಡಿ ಅಶಾಂತಿ ಸೃಷ್ಟಿಸುವ ಮೂಲಕ ಮಾಡುವ ರಾಜಕೀಯಕ್ಕೆ ಹೆಚ್ಚು ದಿನ ಭವಿಷ್ಯವಿಲ್ಲ ಎಂದರು.

ಬಿಹಾರದಲ್ಲಿ ನಾವು ಎಂದೂ ಭ್ರಷ್ಟಾಚಾರದ ವಿಚಾರದಲ್ಲಿ ರಾಜಿ ಮಾಡಿಕೊಂಡಿಲ್ಲ. ರಾಜ್ಯದ ಎಲ್ಲ ವರ್ಗದ ಜನರ ಅಭಿವದ್ಧಿಗಾಗಿ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇವೆ. ಸಾಮಾಜಿಕ ಸೌಹಾರ್ದ ರಕ್ಷಣೆ ವಿಚಾರದಲ್ಲೂ ನಮ್ಮ ನಿಲುವು ಸ್ಪಷ್ಟವಾಗಿದೆ. ರಾಜಕೀಯ ಅಂದರೆ ಅಧಿಕಾರ ಪಡೆಯುವುದು ಎಂಬ ತಪ್ಪುಭಾವನೆ ತೆಗೆದು, ರಾಜಕೀಯ ಅಂದರೆ ನಂಬಿಕೆಯ ಮತ್ತು ಸೇವೆಯ ಆಡಳಿತ ಎಂಬುದನ್ನು ಜನತೆಗೆ ತಿಳಿಸಬೇಕಾಗಿದೆ ಎಂದು ನಿತೀಶ್ ಕುಮಾರ್ ನುಡಿದರು.

ಮತದಾರರನ್ನು ಸ್ನೇಹ, ಪ್ರೀತಿ, ವಿಶ್ವಾಸ, ಗೌರವದಿಂದ ಕಾಣಿರಿ. ರಾಜಕೀಯ ಜೀವನದ ಆರಂಭಿಕ ದಿನಗಳಲ್ಲಿ ಕರ್ನಾಟಕದಲ್ಲಿ ನಡೆಯುತ್ತಿದ್ದ ಸಾಮಾಜಿಕ ಸುಧಾರಣೆಗಳ ಬಗ್ಗೆ ಓದಿ ಪ್ರಭಾವಿತನಾಗಿದ್ದೆ. ದೇವರಾಜ ಅರಸು ಅವರ ಭೂ ಸುಧಾರಣಾ ನೀತಿ, ಜಾತಿ ನಿರ್ಮೂಲನೆ ಕಾನೂನು, ಉಳುವವನೆ ಭೂ ಒಡೆಯ, ಪಂಚಾಯತ್ ರಾಜ್ ಸುಧಾರಣೆಯಂತಹ ಉತ್ತಮ ರಾಜನೀತಿಗಳನ್ನು ನೀಡಿದ ಹಾಗೂ ಜೆಡಿಯು ಹುಟ್ಟಿದ ಮಣ್ಣಲ್ಲಿ ಪಕ್ಷದ ಕಾರ್ಯಕರ್ತರು ಶಾಂತಿಯುತವಾಗಿ ಮತದಾರರನ್ನು ಗೆಲ್ಲಬೇಕಾಗಿದೆ ಎಂದು ಕಿವಿಮಾತು ಹೇಳಿದರು.

ಸೇವಾ ಮನೋಭಾವದ ಸಮರ್ಥ ಅಭ್ಯರ್ಥಿಗಳನ್ನು ಕಣಕಿಳಿಸಿ ನಿಮ್ಮ ಜೊತೆ ನಾನು ಪ್ರಚಾರ ಮಾಡುತ್ತೇನೆ. ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸೋಣ ಎಂದ ಅವರು, ಹಠದಿಂದ ಸ್ಪರ್ಧಿಸುವ ಬದಲು ಸಾಂಪ್ರದಾಯಿಕ ರಾಜನೀತಿಯ ತಳಹದಿಯ ಮೇಲೆ ಎಲ್ಲ ಜಾತಿ, ಸಮುದಾಯದವರ ಮನಸ್ಸನ್ನು ಗೆಲ್ಲಿರಿ ಎಂದು ಕರೆ ನೀಡಿದರು.

ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಮಾತನಾಡಿ, ಜೆ.ಹೆಚ್.ಪಟೇಲರಂತೆ ನಿತೀಶ್ ಕುಮಾರ್ ಕೂಡ ನುಡಿದಂತೆ ನಡೆಯುವ ವ್ಯಕ್ತಿ. ಹಿಂದಿನ ಜನತಾದಳದ ಪ್ರಾಮಾಣಿಕ ಸರಕಾರ ನೋಡಿದ್ದವರು ಈಗ ನಮ್ಮ ರಾಜ್ಯದ ಕಡೆ ಬರುತ್ತಿದ್ದಾರೆ. ನಮ್ಮ ಚಿಹ್ನೆ ಬಾಣ. ಅದರಂತೆ ನಮ್ಮ ಭಾವನೆಯೂ ಶರವೇಗದಲ್ಲಿ ಜನರನ್ನು ತಲುಪುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯಕ್ಕೆ ಹಸಿರು ಕರ್ನಾಟಕ, ಸಾವಯವ ಕೃಷಿ ಜೊತೆಗೆ ಸಾವಯವ ರಾಜಕಾರಣದ ಅವಶ್ಯಕತೆ ಇದೆ. ಪ್ರಾಮಾಣಿಕ ದಾರಿಯಲ್ಲಿ ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯುವುದು ನಮ್ಮ ಪಕ್ಷದ ಧ್ಯೇಯ. ಹೀಗಾಗಿ, ಪ್ರಾಮಾಣಿಕರೆಲ್ಲರೂ ನಮ್ಮ ಪಕ್ಷದ ಕಡೆ ಬರುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಪಕ್ಷ ಕೆಲವು ಸ್ಥಾನ ಗೆಲ್ಲುವುದು ಖಚಿತ. ಎ.15 ರಂದು ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇವೆ. ಪಕ್ಷದಿಂದ ಘಟಾನುಘಟಿ ನಾಯಕರನ್ನ ಕಣಕ್ಕಿಳಿಸಲು ಸಿದ್ಧತೆ ನಡೆದಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಜೆಡಿಯು ಮುಖಂಡ ಅಖಿಲೇಶ್ ಕಾಟೇರ್, ಸಂಜಯ್ ಕುಮಾರ್ ಝಾ ಸೇರಿ ಪ್ರಮುಖರಿದ್ದರು.

ನಮ್ಮ ಪಕ್ಷದ ಸಹಕಾರ ಇಲ್ಲದೇ ಸರಕಾರ ನಡೆಯದಂತ ವಾತಾವರಣ ನಿರ್ಮಾಣ ಮಾಡುತ್ತೇವೆ. ಹೀಗಾಗಿ ಚುನಾವಣೆಯನ್ನ ಯುದ್ಧದಂತೆ ಕಾಣದೆ ಆಟದಂತೆ ಆಡಿ ಜಯಭೇರಿ ಬಾರಿಸೋಣ. ಪ್ರೀತಿ, ಪ್ರಾಮಾಣಿಕ ಸಮಾಜ ನಿರ್ಮಾಣ ಮಾಡಲು ಎಲ್ಲರು ಒಂದಾಗೋಣ.
-ಮಹಿಮಾ ಪಟೇಲ್, ಜೆಡಿಯು ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News