ಅಖಂಡ ಶ್ರೀನಿವಾಸಮೂರ್ತಿಗೆ ಟಿಕೆಟ್ ಕೈ ತಪ್ಪಲ್ಲ: ಝಮೀರ್‌ ಅಹ್ಮದ್‌ಖಾನ್

Update: 2018-04-12 14:53 GMT

ಬೆಂಗಳೂರು, ಎ.12: ಜೆಡಿಎಸ್ ತೊರೆದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಮ್ಮ ಜೊತೆ ಕಾಂಗ್ರೆಸ್ ಸೇರಿರುವ ಅಖಂಡ ಶ್ರೀನಿವಾಸಮೂರ್ತಿಗೆ ಯಾವುದೆ ಕಾರಣಕ್ಕೂ ಟಿಕೆಟ್ ಕೈ ತಪ್ಪುವುದಿಲ್ಲ ಎಂದು ಮಾಜಿ ಸಚಿವ ಝಮೀರ್‌ಅಹ್ಮದ್ ಖಾನ್ ವಿಶ್ವಾಸ ವ್ಯಕ್ತಪಡಿಸಿದರು.

ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಕೆಲಕಾಲ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಖಂಡ ಶ್ರೀನಿವಾಸಮೂರ್ತಿ ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಯಾವುದೆ ಅನುಮಾನ ಬೇಡ ಎಂದರು.

ಅಖಂಡ ಶ್ರೀನಿವಾಸಮೂರ್ತಿಗೆ ಟಿಕೆಟ್ ನೀಡಲು ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲರೂ ಸಹಮತ ವ್ಯಕ್ತಪಡಿಸಿದ್ದಾರೆ. ಮಾಧಮ್ಯಗಳಲ್ಲಿ ಮಾತ್ರ ಟಿಕೆಟ್ ಕೈ ತಪ್ಪಿದೆ ಎಂಬ ವರದಿಗಳು ಬರುತ್ತಿವೆ ಎಂದು ಅವರು ಹೇಳಿದರು.

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಏಳು ಜನರಿಗೂ ಈ ಬಾರಿ ಟಿಕೆಟ್ ಸಿಗಲಿದೆ, ಈ ವಿಚಾರದಲ್ಲಿ ಯಾವುದೆ ಅನುಮಾನ ಬೇಡ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈಗ ಅದೇ ಭರವಸೆಯನ್ನು ನೀಡಿದ್ದಾರೆ ಎಂದು ಝಮೀರ್‌ಅಹ್ಮದ್‌ಖಾನ್ ತಿಳಿಸಿದರು.

ಕೆ.ಬಿ.ಪ್ರಸನ್ನಕುಮಾರ್ ನಾಲ್ಕು ಬಾರಿ ಶಾಸಕರಾಗಿದ್ದರು. ಅಖಂಡ ಶ್ರೀನಿವಾಸಮೂರ್ತಿ ಬಿ ಫಾರಂ ಜೊತೆ ನಾಮಪತ್ರ ಸಲ್ಲಿಸುವವರೆಗೆ ಅವರು ಟಿಕೆಟ್ ಕೇಳುತ್ತಲೆ ಇರುತ್ತಾರೆ. ಆದರೆ, ಕಾಂಗ್ರೆಸ್ ಕೊಟ್ಟ ಮಾತು ತಪ್ಪದ ಪಕ್ಷ. ನಮಗೆ ಟಿಕೆಟ್ ನೀಡುವ ವಿಚಾರದಲ್ಲಿ ಸ್ವತಃ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯವರೆ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News