ಇಂತಹ ಕ್ರೂರಿಗಳನ್ನು ಯಾಕೆ ಶಿಕ್ಷಿಸಲಾಗುತ್ತಿಲ್ಲ?
Update: 2018-04-13 18:42 GMT
ಮಾನ್ಯರೇ,
ಉನ್ನಾವೊ ಹಾಗೂ ಕಥುವಾ ಅತ್ಯಾಚಾರ ಪ್ರಕರಣ ನಮ್ಮ ದೇಶದೊಳಗೆ ಕಾನೂನಿನ ಬಗ್ಗೆ ಇರುವ ನಿರ್ಲಕ್ಷ್ಯ, ಮನುಷ್ಯನ ಕ್ರೌರ್ಯ, ಸರ್ವಾಧಿಕಾರಿ ಧೋರಣೆಯನ್ನು ಬೆತ್ತಲಾಗಿಸಿದೆ. ಮನುಷ್ಯತ್ವ ಸತ್ತು, ಮನುಷ್ಯ ಪ್ರಾಣಿಗಿಂತಲೂ ಹೆಚ್ಚು ಕ್ರೂರಿಯಾಗುತ್ತಿದ್ದಾನೆ.
ಎರಡು ಪ್ರಕರಣಗಳಲ್ಲೂ ಎರಡು ಮುಗ್ಧ ಮನಸ್ಸು, ಜೀವಗಳ ಮೇಲೆ ಬೀಭತ್ಸ ದಾಳಿಯಾಗಿದೆ. ಯುಪಿಯಲ್ಲಿ ಅತ್ಯಾಚಾರಕ್ಕೊಳಗಾದ 16 ವರ್ಷದ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಜೊತೆಗೆ ಈಕೆಯ ತಂದೆ ಕಸ್ಟಡಿಯಲ್ಲಿರುವಾಗಲೇ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಅತ್ತ ಜಮ್ಮು ಕಾಶ್ಮೀರದಲ್ಲಿ 8 ವರ್ಷದ ಆಸಿಫಾಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಈ ಮುಗ್ಧೆಗೆೆ ಮತ್ತೆ ಜೀವ ಕೊಡುವವರು ಯಾರು..? ಇದೆಲ್ಲ ಸಹಜ ಪ್ರಕ್ರಿಯೆ ಎಂಬಂತೆ ಆರೋಪಿಗಳನ್ನು ಬಂಧಿಸಲಾಗುತ್ತದೆ. ಆದರೆ ಇಂತಹ ಕ್ರೂರ ಅಪರಾಧಿಗಳಿಗೆ ಯಾಕೆ ನಮ್ಮ ದೇಶದಲ್ಲಿ ಈಗಲೂ ಕಠಿಣ ಶಿಕ್ಷೆ ನೀಡಲು ಸಾಧ್ಯವಾಗುತ್ತಿಲ್ಲ..?