ಕಥುವಾ ಪೈಶಾಚಿಕ ಘಟನೆಯ ಬಗ್ಗೆ ಹಸಿ ಸುಳ್ಳು ಹರಡುವ ಲೇಖನ ವೈರಲ್

Update: 2018-04-17 08:27 GMT

ಸುಳ್ಳುಸುದ್ದಿ ಪ್ರಕಟಿಸುವಲ್ಲಿ ಅದರಲ್ಲೂ ಮುಖ್ಯವಾಗಿ ಸುಳ್ಳುಮಾಹಿತಿಯನ್ನು ನಾಜೂಕಾಗಿ ನೀಡುವಲ್ಲಿ ಮತ್ತು ಅಪಪ್ರಚಾರ ಮಾಡುವಲ್ಲಿ ಸುದ್ದಿ ಸಂಸ್ಥೆಗಳು ಇಂದು ಕುಖ್ಯಾತವಾಗುತ್ತಿವೆ. ಆದರೆ ತನಗೆ ಒಂದು ವಿಚಾರದ ಬಗ್ಗೆ ಅರಿವಿದ್ದೂ, ಸುಳ್ಳು ಘೋಷಿಸಿ ಅಂಥ ಸುದ್ದಿಯನ್ನು ಒಂದು ಪತ್ರಿಕೆ ಏಕೆ ಪ್ರಕಟಿಸುತ್ತದೆ?, ಜಮ್ಮುವಿನ ಕಥುವಾ ಗ್ರಾಮದಲ್ಲಿ ಕಳೆದ ಜನವರಿಯಲ್ಲಿ ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ, ನಿರಂತರ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣದ ಬಗ್ಗೆ ಕಟ್ಟುಕಥೆ ಎಂದು ತಾನೇ ಒಪ್ಪಿಕೊಂಡ ಒಂದು ಲೇಖನವನ್ನು ಪ್ರಕಟಿಸಿದ "ಸಂಡೇ ಗಾರ್ಡಿಯನ್" ಸಾಪ್ತಾಹಿಕದ ಬಗ್ಗೆ ಈ ಪ್ರಶ್ನೆ ಕೇಳಲೇಬೇಕಾಗುತ್ತದೆ. 

ಪತ್ರಿಕೆಯ ಸಾಪ್ತಾಹಿಕ ಸಂಚಿಕೆಯಲ್ಲಿ ಈ ಲೇಖನ ಪ್ರಕಟವಾಗಿದ್ದು, ಕಥುವಾ ಘಟನೆಯ ಬಗ್ಗೆ ಹಸಿಹಸಿ ಸುಳ್ಳಿನ ಬೀಜ ಬಿತ್ತಲು ಈ ಲೇಖನದಲ್ಲಿ ಪ್ರಯತ್ನಿಸಲಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಆದರೆ ಈ ಲೇಖನ "ಅಭಿಪ್ರಾಯ ಮತ್ತು ವಿಶ್ಲೇಷಣೆ" ವಿಭಾಗದಲ್ಲಿ ಪ್ರಕಟವಾಗಿದ್ದರೂ, 'ಸುಳ್ಳು ಸುದ್ದಿ' ಎಂದೇ ಪಟ್ಟಿ ಮಾಡಲಾಗಿದೆ. ಲೇಖನದ ಶೀರ್ಷಿಕೆಯಲ್ಲಿ ನಕ್ಷತ್ರಚಿಹ್ನೆ ನೀಡಿ, ಅದರ ಅಡಿಟಿಪ್ಪಣಿಯಲ್ಲಿ ಎಚ್ಚರಿಕೆ ಸಂದೇಶವನ್ನು ನೀಡಲಾಗಿದೆ: "ಈ ಲೇಖನವು ಕಲ್ಪನೆಯನ್ನು ಆಧರಿಸಿದ ಕಟ್ಟುಕಥೆ. ಯಾವುದೇ ಪಾತ್ರ ಅಥವಾ ಘಟನಾವಳಿಗಳು ಇದ್ದರೆ ಅದು ಉದ್ದೇಶಪೂರ್ವಕವಲ್ಲ ಅಥವಾ ಕಾಕತಾಳೀಯ" ಎನ್ನಲಾಗಿದೆ.

ತನಿಖಾಧಿಕಾರಿಗಳ ಹೆಸರಿನಿಂದ ಹಿಡಿದು, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರವರೆಗೆ ಕಥುವಾ ಪ್ರಕರಣದಲ್ಲಿ ಒಳಗೊಂಡವರ ನೈಜ ಹೆಸರುಗಳನ್ನು ಲೇಖನದಲ್ಲಿ ನೀಡಲಾಗಿದೆ. ಸಂತ್ರಸ್ತೆಯ ಹೆಸರು ಪ್ರಕಟಿಸದಂತೆ ಕಳೆದ ವಾರ ದಿಲ್ಲಿ ಹೈಕೋರ್ಟ್ ಎಲ್ಲ ಮಾಧ್ಯಮಸಂಸ್ಥೆಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದರೂ, ಲೇಖನದಲ್ಲಿ ಪ್ರಕರಣದ ಸಂತ್ರಸ್ತೆಯ ಹೆಸರು ಪ್ರಕಟಿಸಲಾಗಿದೆ. ಇಷ್ಟು ಮಾತ್ರವಲ್ಲದೇ, ನಗ್ರೋಟಾ ಹಾಗು ಕಥುವಾ ಎರಡು ಪ್ರಕರಣಗಳನ್ನು ಹೋಲಿಕೆ ಮಾಡುವ ಪ್ರಯತ್ನದಲ್ಲಿ, ಇನ್ನೊಂದು ಲೈಂಗಿಕ ಹಲ್ಲೆ ಪ್ರಕರಣದ ಅಪ್ರಾಪ್ತ ವಯಸ್ಕ ಸಂತ್ರಸ್ತೆಯ ಹೆಸರನ್ನೂ ನಮೂದಿಸಲಾಗಿದೆ. ಜತೆಗೆ ತಪ್ಪಾಗಿ ಆಕೆಯನ್ನೂ ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗಿದೆ ಎಂದು ವಿವರಿಸಿದೆ. ಆದರೆ ವಾಸ್ತವವಾಗಿ ಆ ಬಾಲಕಿ ಇನ್ನೂ ಜೀವಂತವಿದ್ದಾಳೆ.

ಈ ಲೇಖನ ಕಥುವಾ ಪ್ರಕರಣಕ್ಕೆ ಸಂಬಂಧಿಸಿದ ಹಲವು ಅಂಶಗಳನ್ನು ಒಳಗೊಂಡಿದೆ. ಇದರ ಜತೆಗೆ ಹಲವು ಕಾಲ್ಪನಿಕ ಅಂಶಗಳನ್ನೂ ಸೇರಿಸಿದೆ. ಉದಾಹರಣೆಗೆ, ಕಥುವಾ ಪ್ರಕರಣದ ಸಂತ್ರಸ್ತೆಯ ಪೋಷಕರನ್ನು ಈ ಹಿಂದೆ ಹತ್ಯೆ ಮಾಡಲಾಗಿತ್ತು ಎಂಬ ಉಲ್ಲೇಖವಿದೆ. ವಾಸ್ತವವಾಗಿ ಬಾಲಕಿಯನ್ನು ಹೆತ್ತವರು ಮತ್ತು ದತ್ತುಪಡೆದವರು ಕೂಡಾ ಜೀವಂತ ಇದ್ದು, ಮಾಧ್ಯಮದ ಜತೆ ಮಾತನಾಡಿದ್ದಾರೆ.

ಅಂತೆಯೇ ಅತ್ಯಾಚಾರಕ್ಕೆ ಯಾವ ಪುರಾವೆಯೂ ಇಲ್ಲ. ಆದರೂ ಈ ಪ್ರಕರಣ ಲೈಂಗಿಕ ಹಲ್ಲೆ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ ಎಂದೂ ಲೇಖನದಲ್ಲಿ ಉಲ್ಲೇಖಿಸಲಾಗಿದೆ. "ವೈದ್ಯಕೀಯ ತಜ್ಞರ ವರದಿಯ ಪ್ರಕಾರ, ಸಂತ್ರಸ್ತೆಯನ್ನು ಹತ್ಯೆ ಮಾಡುವ ಮುನ್ನ ಆಕೆಯ ಮೇಲೆ ಅತ್ಯಾಚಾರ ಎಸಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ" ಎಂದು ಆರೋಪಪಟ್ಟಿಯಲ್ಲಿ ಸ್ಪಷ್ಟವಾಗಿ ಹೇಳಿದ್ದರೂ, ಭಿನ್ನ ಚಿತ್ರಣವನ್ನು ಲೇಖನದಲ್ಲಿ ಬಿಂಬಿಸಲಾಗಿದೆ. ಸಹಜವಾಗಿಯೇ ಇಂಥ ಹೇಯ ಅಪರಾಧ ಕೃತ್ಯವನ್ನು ಲಘುವಾಗಿ ಪರಿಗಣಿಸಿದ ಬಗ್ಗೆ ಹಾಗೂ ಪತ್ರಿಕೆಯ ಎಚರಿಕೆ ಸಂದೇಶದ ಬಗ್ಗೆ ಆನ್‍ಲೈನ್‍ನಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಸಂಡೇ ಗಾರ್ಡಿಯನ್ ಪತ್ರಿಕೆಯ ಸಂಪಾದಕೀಯ ನಿರ್ದೇಶಕ ಎಂ.ಡಿ.ನಲಪತ್ ಅವರಿಗೆ scroll.in ಕೇಳಿರುವ ಪ್ರಶ್ನೆಗಳನ್ನು ಈ ಕೆಳಗೆ ನೀಡಲಾಗಿದೆ.
* ಸುಳ್ಳು ಸುದ್ದಿ ಎಂಬ ಶೀರ್ಷಿಕೆಯಡಿ, ವಾಸ್ತವ ಘಟನೆ ಬಗೆಗೆ ನೈಜ ಹೆಸರು ಮತ್ತು ಉಲ್ಲೇಖಗಳನ್ನು ಒಳಗೊಂಡ ಲೇಖನವನ್ನು ಸಂಡೇ ಗಾರ್ಡಿಯನ್ ಏಕೆ ಪ್ರಕಟಿಸಿದೆ?
*"ಅಭಿಪ್ರಾಯ & ವಿಶ್ಲೇಷಣೆ" ಪುಟದಲ್ಲಿ ಕಲ್ಪನೆಗಳನ್ನು ಆಧರಿಸಿದ ಕಟ್ಟುಕಥೆಯನ್ನು ಪ್ರಕಟಿಸುವುದು ಸಂಡೇ ಗಾರ್ಡಿಯನ್‍ನ ನೀತಿಯೇ?
*ಕಥುವಾ ಪ್ರಕರಣದಲ್ಲಿ ಸಂತ್ರಸ್ತೆಯ ಹೆಸರು ಉಲ್ಲೇಖಿಸಿದ ಬಗ್ಗೆ ದಿಲ್ಲಿ ಹೈಕೋರ್ಟ್ ಮಾಧ್ಯಮಗಳ ಮೇಲೆ ಹರಿಹಾಯ್ದಿದೆ. ಇಷ್ಟಾಗಿಯೂ ಸುಳ್ಳು ಸುದ್ದಿ ಎಂಬ ಶೀರ್ಷಿಕೆಯಡಿ ಪ್ರಕಟವಾದ ಲೇಖನದಲ್ಲಿ ಎಂಟು ವರ್ಷದ ಬಾಲಕಿಯ ಹೆಸರನ್ನು ಸೇರಿಸಿರುವುದನ್ನು ಸಂಡೇ ಗಾರ್ಡಿಯನ್ ಸಮರ್ಥಿಸಿಕೊಳ್ಳುತ್ತದೆಯೇ?
*ಇದೇ ಲೇಖನದಲ್ಲಿ ನಗೋತ್ರಾ ಅತ್ಯಾಚಾರ ಸಂತ್ರಸ್ತೆಯ ಹೆಸರನ್ನೂ ಸೇರಿಸಲಾಗಿದೆ ಮತ್ತು ಆಕೆ ಹತ್ಯೆಗೀಡಾಗಿದ್ದಾಳೆ ಎಂದು ಬಿಂಬಿಸಲಾಗಿದೆ. ಇದನ್ನು ಪ್ರಕಟಿಸಿದ ನಿರ್ಧಾರವನ್ನು ಪತ್ರಿಕೆ ಸಮರ್ಥಿಸಿಕೊಳ್ಳುತ್ತದೆಯೇ?
*ಸಂತಸ್ತೆಯ ಪೋಷಕರನ್ನು ಹತ್ಯೆ ಮಾಡಲಾಗಿತ್ತು, ಲೈಂಗಿಕ ಕಿರುಕುಳಕ್ಕೆ ಪುರಾವೆ ಇಲ್ಲ ಎಂಬಂಥ ಹಲವು ವಿವರಗಳು ಕಾಲ್ಪನಿಕ. ಇದನ್ನು ಪತ್ರಿಕೆ ಸಮರ್ಥಿಸುತ್ತದೆಯೇ?
*ಉದಾಹರಣೆಗೆ ವೈದ್ಯಕೀಯ ವರದಿಯನ್ನು ಆಧರಿಸಿ ಲೈಂಗಿಕ ಕಿರುಕುಳ ಮೇಲ್ನೋಟಕ್ಕೆ ಸಾಬೀತಾಗಿರುವುದನ್ನು ಆರೋಪಪಟ್ಟಿಯಲ್ಲಿ ಹೇಳಿದೆ. ಲೇಖನಕ್ಕೆ ಪತ್ರಿಕೆ ಸ್ಪಷ್ಟನೆ ನೀಡುತ್ತದೆಯೇ?
*ಸುದ್ದಿಪುಟದಲ್ಲಿ ಪ್ರಕಟವಾಗಲೀ ಅಥವಾ ಅಭಿಪ್ರಾಯ ಪುಟದಲ್ಲಿ ಪ್ರಟಕವಾಗಲಿ, ಸುಳ್ಳು ಸುದ್ದಿ, ಮಾಧ್ಯಮ ಎದುರಿಸಬೇಕಾದ ದೊಡ್ಡ ಸಮಸ್ಯೆ ಎಂದು ನೀವು ನಂಬುತ್ತೀರಾ?

ಆನ್ ಲೈನ್ ನಲ್ಲಿ ಈ ವರದಿ ವೈರಲ್ ಆಗುತ್ತಲೇ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಥುವಾದಂತಹ ಭಯಾನಕ ಘಟನೆಗಳ ಮೇಲೆ ವಿಕೃತಿ ತೋರಿ ಬರೆದ ಲೇಖನದ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News