‘ಅಸಹಕಾರಿ’ ಒಕ್ಕೂಟ ವ್ಯವಸ್ಥೆ

Update: 2018-04-19 18:33 GMT

ನವ ಭಾರತ ಯೋಜನೆಯ ದೃಷ್ಟಿಯು ಸಾಮಾಜಿಕ-ಆರ್ಥಿಕ ಕ್ಷೇತ್ರದ ಇತರ ಯೋಜನೆಗಳ ಮೇಲೂ ತನ್ನ ಪ್ರಭಾವವನ್ನು ಬೀರಬಹುದು. ಮೇಲಾಗಿ ಒಂದು ಒಕ್ಕೂಟ ವ್ಯವಸ್ಥೆಯಲ್ಲಿ ಒಟ್ಟಾರೆ ವೆಚ್ಚಗಳಲ್ಲಿ ಶೇ.58ರಷ್ಟನ್ನು ರಾಜ್ಯಗಳೇ ವೆಚ್ಚ ಮಾಡಬೇಕಿರುವಾಗ ಇಂಥ ಯಾವುದೇ ರಾಷ್ಟ್ರೀಯ ಅಭಿವೃದ್ಧಿ ಕಾರ್ಯಸೂಚಿಯು ರಾಜ್ಯಗಳಿಗೆ ವರ್ಗಾಯಿಸಬೇಕಾದ ಸಂಪನ್ಮೂಲಗಳನ್ನು ತಡೆಗಟ್ಟಬಹುದೇ? 

 



ಹಣಕಾಸು ಆಯೋಗವು ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಪನ್ಮೂಲ ಹಂಚಿಕೆಯನ್ನು ನಿಗದಿ ಮಾಡುವ ಸ್ವತಂತ್ರ ಸಂಸ್ಥೆಯಾಗಿದೆ. ಸಂವಿಧಾನದ 7ನೇ ಶೆಡ್ಯೂಲ್‌ನಲ್ಲಿ ನಿಗದಿಪಡಿಸಿರುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮ ತಮ್ಮ ವೆಚ್ಚಗಳ ಜವಾಬ್ದಾರಿಯನ್ನು ಪೂರೈಸಲು ಅನುವಾಗುವಂತೆ ಕೇಂದ್ರೀಯ ತೆರಿಗೆಗಳನ್ನು ಹಂಚಿಕೆ ಮಾಡುವುದು ಅದರ ಪ್ರಮುಖ ಹೊಣೆಗಾರಿಕೆಯಾಗಿದೆ. ಈ ಹಿಂದೆ ಹಣಕಾಸು ಆಯೋಗವು ಈ ಜವಾಬ್ದಾರಿಯನ್ನು ಅದ್ಭುತವಾಗಿ ನಿರ್ವಹಿಸಿತ್ತು ಮತ್ತು ಸಂಬಂಧಪಟ್ಟ ಎಲ್ಲರಿಂದಲೂ ಅಪಾರ ಮನ್ನಣೆಯನ್ನು ಗಳಿಸಿಕೊಂಡಿತ್ತು. ದೇಶದ ವಿತ್ತೀಯ ವ್ಯವಸ್ಥೆಯ ಭಾಗವಾಗಿ ಒಂದು ಸ್ವತಂತ್ರ ಹಣಕಾಸು ಆಯೋಗವಿರುವುದು ಭಾರತದ ಒಕ್ಕೂಟ ವ್ಯವಸ್ಥೆಯ ಒಂದು ಶಕ್ತಿಯಾಗಿದೆ. ಅದು ಒಕ್ಕೂಟ ರಚನೆಯ ತಳಹದಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ಪಾತ್ರವನ್ನು ವಹಿಸುತ್ತಾ ಬಂದಿದೆ. ಆಯೋಗಕ್ಕೆ ನೀಡಲಾಗುವ ಮಾರ್ಗಸೂಚಿ ಅಂಶಗಳು (ಟರ್ಮ್ಸ್ ಆಫ್ ರೆಫೆರೆನ್ಸ್-ಟಿಒಆರ್) ಅದರ ಕಾರ್ಯೋದ್ದೇಶಗಳನ್ನು ನಿಗದಿಗೊಳಿಸುತ್ತವೆ. ಆದರೆ 15ನೇ ಹಣಕಾಸು ಆಯೋಗಕ್ಕೆ ನೀಡಲಾಗಿರುವ ಮಾರ್ಗಸೂಚಿ ಅಂಶಗಳು ರಾಜ್ಯ ಸರಕಾರಗಳಲ್ಲಿ ಅಪಾರ ಆತಂಕ ಹಾಗೂ ಅನುಮಾನಗಳನ್ನು ಹುಟ್ಟಿಸಿವೆ.

ಆಯೋಗವು ತನ್ನ ಹಂಚಿಕೆಯ ಲೆಕ್ಕಾಚಾರಕ್ಕೆ 1971ರ ಜನಗಣತಿಯ ಬದಲಿಗೆ 2011ರ ಜನಗಣತಿಯನ್ನು ಆಧಾರವಾಗಿಟ್ಟುಕೊಳ್ಳಬೇಕೆಂಬ ನಿರ್ದೇಶನವನ್ನು ನೀಡಲಾಗಿದೆ. ಇದು ಹಲವಾರು ರಾಜ್ಯಗಳ ಹಣಕಾಸಿನ ಪಾಲನ್ನು ಕಡಿಮೆ ಮಾಡುವುದರಿಂದ ಈಗಾಗಲೇ ಸಾಕಷ್ಟು ವಿವಾದವನ್ನು ಹುಟ್ಟುಹಾಕಿದೆ. ಇದಲ್ಲದೆ ಆಯೋಗಕ್ಕೆ ನೀಡಲಾಗಿರುವ ಮಾರ್ಗಸೂಚಿಗಳು ಕೇಂದ್ರದ ಬಗ್ಗೆ ಪಕ್ಷಪಾತಿಯಾಗಿರುವ ಹಲವಾರು ಅಂಶಗಳನ್ನು ಹೊಂದಿದೆ. ಈ ಬಗ್ಗೆ 15ನೇ ಹಣಕಾಸು ಆಯೋಗವು ಸಮತೋಲನದ ನಿಲುವನ್ನು ತೋರದಿದ್ದರೆ ಈಗಾಗಲೇ ಶ್ರೇಣೀಕೃತವಾಗಿರುವ ಕೇಂದ್ರ-ರಾಜ್ಯಗಳ ವಿತ್ತೀಯ ಸಂಬಂಧಗಳು ನಿರ್ದೇಶನ ಮತ್ತು ನಿಯಂತ್ರಣಗಳ ಆಧಾರದಲ್ಲಿರುವ ಅಪ್ರಜಾಸತ್ತಾತ್ಮಕ ಸಂಬಂಧವಾಗಿ ಪರಿವರ್ತನೆಯಾಗಲಿದೆ. ಇದು ಯೋಜನಾ ಆಯೋಗವು ರದ್ದಾದ ನಂತರದಲ್ಲಿ ರಚನೆಗೊಂಡ ಮೊದಲನೇ ಹಣಕಾಸು ಆಯೋಗವಾಗಿದೆ.

ಹೀಗಾಗಿ ಅದು ತಾನು ಶಿಫಾರಸು ಮಾಡುವ ಮಾರ್ಗದಿಂದ ಮಾತ್ರವಲ್ಲದೆ ಇತರ ಮಾರ್ಗಗಳಿಂದಲೂ ಒದಗುವ ಸಂಪನ್ಮೂಲಗಳನ್ನು ಒಳಗೊಂಡಂತೆ ಒಟ್ಟಾರೆ ಕೇಂದ್ರ ಮತ್ತು ರಾಜ್ಯಗಳ ಸಂಪನ್ಮೂಲಗಳ ಬಗ್ಗೆ ಸಮಗ್ರವಾದ ಮತ್ತು ಸಂತುಲಿತವಾದ ದೃಷ್ಟಿಕೋನವನ್ನು ಹೊಂದಿರಬೇಕಾದದ್ದು ಅತ್ಯಗತ್ಯವಾಗಿದೆ. 14ನೇ ಹಣಕಾಸು ಆಯೋಗವು ಆದಾಯ ಮತ್ತು ವೆಚ್ಚಗಳ ಬಗ್ಗೆ ಸಮಗ್ರವಾದ ದೃಷ್ಟಿಕೋನವನ್ನು ಇಟ್ಟುಕೊಂಡಿತ್ತು ಮತ್ತು ರಾಜ್ಯಗಳ ಯೋಜನಾ ವೆಚ್ಚ ಮತ್ತು ಯೋಜನೇತರ ವೆಚ್ಚಗಳನ್ನು ಭರಿಸಲು ಕೇಂದ್ರ ಸಂಪನ್ಮೂಲಗಳಿಂದ ಶೇ.42ರಷ್ಟು ಸಂಪನ್ಮೂಲವನ್ನು ರಾಜ್ಯಗಳಿಗೆ ವರ್ಗಾಯಿಸಬೇಕೆಂದು ಶಿಫಾರಸು ಮಾಡಿತ್ತು. ಅದೇ ರೀತಿ ಕೇಂದ್ರೀಯ ಪಟ್ಟಿಯಲ್ಲಿ ಇರುವ ಜವಾಬ್ದಾರಿಗಳಿಗಾಗಿ ಮತ್ತು ರಾಷ್ಟ್ರೀಯ ಅಭಿವೃದ್ಧಿಯ ಆದ್ಯತೆಗಳಿಗಾಗಿ ಮಾಡುವ ವೆಚ್ಚಗಳಿಗಾಗಿ 2015-16 ಮತ್ತು 2019-20ರ ಅವಧಿಯಲ್ಲಿ ಕೇಂದ್ರಕ್ಕೆ ಅಗತ್ಯವಾಗುವಷ್ಟು ಸಂಪನ್ಮೂಲವನ್ನು 14ನೇ ಹಣಕಾಸು ಆಯೋಗವು ಸಮರ್ಪಕವಾಗಿ ಅಂದಾಜಿಸಿ ಒದಗಿಸಿತ್ತು. ಆದರೆ, ಈಗ ರಾಜ್ಯಗಳಿಗೆ ಅಧಿಕ ಸಂಪನ್ಮೂಲ ವರ್ಗಾವಣೆ ಮಾಡಿರುವುದರಿಂದ ಕೇಂದ್ರದ ವಿತ್ತೀಯ ಪರಿಸ್ಥಿತಿಯ ಮೇಲೆ ಮತ್ತು ‘ನವ ಭಾರತ-2022’ ಎಂಬ ಯೋಜನೆಯನ್ನೂ ಒಳಗೊಂಡಂತೆ ಅತ್ಯಗತ್ಯವಾಗಿ ಕೈಗೊಳ್ಳಲೇ ಬೇಕಿದ್ದ ಇತರ ರಾಷ್ಟ್ರೀಯ ಅಭಿವೃದ್ಧಿ ಕಾರ್ಯಕ್ರಮಗಳ ಮೇಲೆ ಆಗಿರುವ ಪರಿಣಾಮಗಳನ್ನು ಅಂದಾಜು ಮಾಡಬೇಕೆಂಬ ಮಾರ್ಗಸೂಚಿಯನ್ನು 15ನೇ ಹಣಕಾಸು ಆಯೋಗಕ್ಕೆ ನೀಡಲಾಗಿದೆ.

ನವ ಭಾರತ-2022 ಎಂದರೇನು? ಒಂದು ಸರಕಾರದ ಅವಧಿ 2019ಕ್ಕೆ ಮುಕ್ತಾಯವಾಗುತ್ತಿರುವಾಗ, ಕೇಂದ್ರೀಯ ನಿಧಿಯನ್ನು 2022ರ ತನಕ ಉಳಿಸಿಕೊಂಡು ತನ್ನ ದೃಷ್ಟಿಕೋನವನ್ನೇ ಮುಂದೆ ಬರುವವರು ಅನುಸರಿಸಬೇಕೆಂದು ಕಡ್ಡಾಯ ಮಾಡಬಹುದೇ? ನವ ಭಾರತ ಯೋಜನೆಯ ದೃಷ್ಟಿಯು ಸಾಮಾಜಿಕ-ಆರ್ಥಿಕ ಕ್ಷೇತ್ರದ ಇತರ ಯೋಜನೆಗಳ ಮೇಲೂ ತನ್ನ ಪ್ರಭಾವವನ್ನು ಬೀರಬಹುದು. ಮೇಲಾಗಿ ಒಂದು ಒಕ್ಕೂಟ ವ್ಯವಸ್ಥೆಯಲ್ಲಿ ಒಟ್ಟಾರೆ ವೆಚ್ಚಗಳಲ್ಲಿ ಶೇ.58ರಷ್ಟನ್ನು ರಾಜ್ಯ ಗಳೇ ವೆಚ್ಚ ಮಾಡಬೇಕಿರುವಾಗ ಇಂಥ ಯಾವುದೇ ರಾಷ್ಟ್ರೀಯ ಅಭಿವೃದ್ಧಿ ಕಾರ್ಯಸೂಚಿಯು ರಾಜ್ಯಗಳಿಗೆ ವರ್ಗಾಯಿಸಬೇಕಾದ ಸಂಪನ್ಮೂಲಗಳನ್ನು ತಡೆಗಟ್ಟಬಹುದೇ? ಹೀಗಾಗಿ 15ನೇ ಹಣಕಾಸು ಆಯೋಗಕ್ಕೆ ನೀಡಿರುವ ಮಾರ್ಗಸೂಚಿಯ ಹಿಂದಿನ ಉದ್ದೇಶಗಳು ಸ್ಪಷ್ಟವಾಗಿವೆ. ರಾಜ್ಯಗಳಿಗೆ ನೀಡಲಾಗುತ್ತಿದ್ದ ವಿತ್ತೀಯ ಸ್ವಾಯತ್ತತೆಯನ್ನು ಕಡಿತಗೊಳಿಸಿ ರಾಜ್ಯಗಳ ಸಂಪನ್ಮೂಲಗಳ ಮೇಲೆ ಮತ್ತು ಕಾರ್ಯಭಾರಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದಲು ಕೇಂದ್ರವು ಉತ್ಸುಕವಾಗಿದೆ. ಹಣಕಾಸು ಹಂಚಿಕೆಯ ನಂತರವೂ ರಾಜ್ಯಗಳು ಎದುರಿಸಬಹುದಾದ ವಿತ್ತೀಯ ಕೊರತೆಯನ್ನು ಕೇಂದ್ರವು ಅನುದಾನವನ್ನು ಒದಗಿಸುವ ಮೂಲಕ ಪೂರೈಸುವ ಸೌಲಭ್ಯವನ್ನು 275ನೇ ಕಲಂ ಒದಗಿಸಿಕೊಡುತ್ತದೆ.

ಈಗ ನೀಡಲಾಗಿರುವ ಮಾರ್ಗಸೂಚಿಯ ಪ್ರಕಾರ ಅಸಲು ರಾಜ್ಯಗಳ ಹಂಚಿಕೆಯೋತ್ತರ ಆದಾಯ ಕೊರತೆಯನ್ನು ಪೂರೈಸುವ ಅನುದಾನವನ್ನು ಕೇಂದ್ರವು ನೀಡಬೇಕೋ, ಬೇಡವೋ ಎಂಬುದನ್ನೂ ಸಹ ಹಣಕಾಸು ಆಯೋಗವು ಪರಿಶೀಲಿಸಬಹುದಾಗಿದೆ. ಒಂದು ವೇಳೆ ಹಣಕಾಸು ಆಯೋಗವು ಈ ಹಂಚಿಕೆಯೋತ್ತರ ಆದಾಯ ಕೊರತೆಯನ್ನು ನೀಗಿಸುವ ಜವಾಬ್ದಾರಿಯನ್ನು ಸಂಪೂರ್ಣವಾಗಿ ತೆಗೆದೇ ಬಿಟ್ಟರೆ ಆದಾಯ ಕೊರತೆಯನ್ನು ಪೂರೈಸಿಕೊಳ್ಳಲು ಇತರ ಯಾವ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಳ್ಳಬಹುದು? ಹೀಗಾಗಿ ಸಂಪನ್ಮೂಲ ಹಂಚಿಕೆಯ ನಂತರ ಯಾವ ರಾಜ್ಯಗಳೂ ಆದಾಯ ಕೊರತೆಯನ್ನು ತೋರಿಸಬಾರದೆಂಬುದೇ ಈ ಮಾರ್ಗಸೂಚಿಯ ಪರಿಣಾಮವಾಗಿದೆ. ಇದರಿಂದಾಗಿ ರಾಜ್ಯಗಳ ಆದಾಯ ಮತ್ತು ವೆಚ್ಚಗಳ ಬಗ್ಗೆ ಆಯೋಗವು ಮಾಡಿರುವ ಅವಾಸ್ತವಿಕ ಅಂದಾಜುಗಳನ್ನು ಸಮರ್ಥಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ.

ಮಾರ್ಗಸೂಚಿಗಳು ಹಲವಾರು ಪೂರ್ವ ಶರತ್ತುಗಳನ್ನು ಒಡ್ಡುತ್ತದೆ. ಅದರಲ್ಲಿನ 7ನೇ ಮಾರ್ಗಸೂಚಿಯು ಹಲವಾರು ಕ್ಷೇತ್ರಗಳಲ್ಲಿ ರಾಜ್ಯ ಸರಕಾರಗಳ ಸಾಧನೆಯನ್ನು ಅಳೆಯಬಹುದಾದ ಮಾನದಂಡಗಳನ್ನು ಸೂಚಿಸಿ ಅದರ ಆಧಾರದಲ್ಲಿ ಉತ್ತೇಜಕ ಅನುದಾನಗಳನ್ನು ನಿಗದಿಪಡಿಸುವ ಪ್ರಸ್ತಾಪವನ್ನು ಪರಿಶೀಲಿಸಬಹುದೆಂದು ಹೇಳುತ್ತದೆ.

ಇದಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಶ್ನೆಗಳು ಏಳುತ್ತವೆ. ರಾಜ್ಯಗಳ ಸಾಧನೆಯನ್ನು ಅಳೆಯಲು ಮತ್ತು ಅದನ್ನು ಆಧರಿಸಿ ಉತ್ತೇಜನ ಅನುದಾನಗಳನ್ನು ನಿಗದಿಪಡಿಸಲು ಹಣಕಾಸು ಆಯೋಗವು ಸೂಕ್ತ ವೇದಿಕೆಯೇ? ಹಣಕಾಸು ಆಯೋಗದ ಮುಖ್ಯ ಕರ್ತವ್ಯವೇ ವಿತ್ತೀಯ ಅಸಮರ್ಥತೆಯನ್ನು ಸರಿಪಡಿಸುವುದಾಗಿದ್ದಲ್ಲಿ ಈ ಉತ್ತೇಜಕ ಅನುದಾನದ ಪ್ರಸ್ತಾಪವನ್ನು ಎಲ್ಲಿ ಸೇರಿಸುತ್ತಾರೆ? ತೆರಿಗೆ ಹಂಚಿಕೆಯನ್ನು ಉತ್ತೇಜಕ ಮಾನದಂಡಗಳನ್ನು ಅನುಸರಿಸಿ ನಿಗದಿಪಡಿಸುವುದಾಗಿದ್ದಲ್ಲಿ ವಿತ್ತೀಯ ಸಮಾನತೆಯ ಆಶಯಗಳಲ್ಲಿ ರಾಜಿ ಮಾಡಿಕೊಂಡಂತಾಗುವುದಿಲ್ಲವೇ? ಇದನ್ನು ಒಂದು ಅನುದಾನ ಪದ್ಧತಿಯ ಮೂಲಕ ಜಾರಿಗೆ ತರುವುದಾದರೆ ಅಷ್ಟರಮಟ್ಟಿಗೆ ವಿತ್ತೀಯ ವರ್ಗಾವಣೆಗೆ ಸಿಗಬೇಕಾದ ಸಂಪನ್ಮೂಲವನ್ನು ಶರತ್ತಿನ ಅನುದಾನಗಳಿಗಾಗಿ ಕಡಿತಗೊಳಿಸಿದಂತಾಗುವುದಿಲ್ಲವೇ? ಕೇಂದ್ರ ಸರಕಾರವು ಉತ್ತೇಜಕಗಳನ್ನು ಮತ್ತು ಅನುದಾನಗಳನ್ನು ಹಣಕಾಸು ಆಯೋಗೇತರ ಮಾರ್ಗಗಳಿಂದ ಕೊಡುವ ಸಾಧ್ಯತೆ ಇದ್ದೇ ಇರುವಾಗ ಈ ಏಳನೇ ಮಾರ್ಗಸೂಚಿಯ ಮೂಲಕ ಹಣಕಾಸು ಆಯೋಗದ ಕಾರ್ಯನಿರ್ವಹಣೆಯನ್ನು ಸೀಮಿತಗೊಳಿಸುತ್ತಿರುವ ಉದ್ದೇಶವೇನು?

ಅಂತಿಮವಾಗಿ ಋಣಭಾರ, ಕೊರತೆ ಮತ್ತು ವಿತ್ತೀಯ ಹೊಣೆಗಾರಿಕೆಗಳ ಪ್ರಶ್ನೆಗಳು ಉದ್ಭವವಾಗುತ್ತವೆ. ರಾಜ್ಯಗಳು ಒಟ್ಟಾರೆಯಾಗಿ ವಿತ್ತೀಯ ಶಿಸ್ತನ್ನು ಪಾಲಿಸುತ್ತಿವೆ. 2017-18ರ ಸಾಲಿನಲ್ಲಿ ಎಲ್ಲಾ ರಾಜ್ಯಗಳ ಒಟ್ಟು ವಿತ್ತೀಯ ಕೊರತೆ ಒಟ್ಟಾರೆ ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ದ ಶೇ.2.7ರಷ್ಟಿತ್ತು. ಹೀಗಾಗಿ 15ನೇ ಹಣಕಾಸು ಆಯೋಗವು ವಿಧಿಸುವ ರಾಜ್ಯ ಸರಕಾರಗಳ ಋಣಭಾರದ ಯಾವುದೇ ಶರತ್ತುಬದ್ಧ ಇಳಿಕೆಗಳು ರಾಜ್ಯಗಳ ವೆಚ್ಚದ ಮೇಲೆ ಅದರಲ್ಲೂ ಮುಖ್ಯವಾಗಿ ಅವುಗಳ ಅಭಿವೃದ್ಧಿ ವೆಚ್ಚಗಳ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತವೆ. ವಾಸ್ತವವಾಗಿ ವಿತ್ತೀಯ ನಡವಳಿಕೆಯನ್ನು ಸುಧಾರಿಸಿಕೊಳ್ಳುವ ಬಗ್ಗೆ ಕೇಂದ್ರಕ್ಕೆ ಹೇಳಬೇಕೇ ಹೊರತು ರಾಜ್ಯಗಳಿಗಲ್ಲ. 2008ರ ನಂತರದಲ್ಲಿ ಕೇಂದ್ರದಲ್ಲಿದ್ದ ಯಾವುದೇ ಸರಕಾರಗಳು ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ಕಾಯ್ದೆಗೆ ಬದ್ಧವಾಗಿಲ್ಲ ಎಂಬುದನ್ನು ಇಲ್ಲಿ ಮರೆಯಬಾರದು.

ಕೃಪೆ: Economic and Political Weekly

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News