ಗಿಡಗಂಟೆಯಾ ಕೊರಳು

Update: 2018-04-21 12:24 GMT

        ಪದ್ಮಾಶ್ರೀ ರಾಮ್

ಕನ್ನಡದ ಪುಸ್ತಕ ಲೋಕದಲ್ಲಿ ಸಾಹಿತ್ಯ ವಿಜ್ಞಾನ, ಪರಿಸರ, ಕ್ರೀಡೆ, ರಾಜಕೀಯ ಕುರಿತ ಅಸಂಖ್ಯ ಕೃತಿಗಳು ಓದಲು ಸಿಗುತ್ತವೆ. ಆದರೆ ಸಸ್ಯಲೋಕದ ಬಗ್ಗೆ ಬರೆದವರು ಕಡಿಮೆ.

ಲೇಖಕಿ ಪದ್ಮಾಶ್ರೀ ರಾಮ್‌ರವರ ‘ಗಿಡಗಂಟೆಯಾ ಕೊರಳು’ ಆ ಕೊರತೆ ನೀಗಿಸುವ ಹಾಗೂ ಒಂದು ಚೇತೋಹಾರಿ ಓದಿನ ಅನುಭವ ನೀಡುವ ಬರಹವಾಗಿದೆ.

ಹಲವು ದಶಕಗಳ ಹಿಂದೆ ಪ್ರಕಟವಾದ ಬಿ.ಜಿ.ಎಲ್. ಸ್ವಾಮಿಯವರ ಹಸಿರು ಹೊನ್ನು ಹಾಗೂ ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ ಎಂಬ ವಿಶಿಷ್ಟ ಬರಹಗಳು ಕನ್ನಡ ಓದುಗರ ಅರಿವನ್ನು ವಿಸ್ತರಿಸುವ ಕೆಲಸ ಮಾಡಿದ್ದವು. ವಿವಿಧ ಪ್ರಕಾರದ ಹೂ, ಹಣ್ಣಿನ ಗಿಡಗಳು, ಹಲ ಬಗೆಯ ಸಸ್ಯಗಳ ವಿವರಣೆಯಿದ್ದ ಆ ಪುಸ್ತಕಗಳು ಸ್ವಾಮಿಯವರ ಲವಲವಿಕೆಯ ಬರಹದ ಶೈಲಿಯಿಂದಾಗಿ ಹಿತವಾದ ಓದಿನ ಅನುಭವ ನೀಡುವಂತಿದ್ದವು. ಈಗಿನ ಗಿಡಗಂಟೆಯಾ ಕೊರಳು ಸಸ್ಯಜಗತ್ತಿನ ಪರಿಚಯ ಮಾಡಿಸುವ ಧ್ಯೇಯಕ್ಕೆ ಸೀಮಿತವಾಗಿಲ್ಲ. ಓದುಗರಲ್ಲಿ ಒಂದು ಜೀವನದೃಷ್ಟಿಯನ್ನು ಬೆಳೆಸಿಕೊಳ್ಳಲು ಉತ್ತೇಜಿಸುವ ನಿರೂಪಣೆಯಿದೆ. ಅಲ್ಲಲ್ಲಿ ನವಿರಾದ ಹಾಸ್ಯಭಾವ ಇದೆ. ನಿಸರ್ಗದ ಅಗಾಧ ನಿರ್ಮಿತಿ ಶಕ್ತಿಯೆದುರು ವಿನೀತರಾಗುವ, ವಿಸ್ಮಯಗಳನ್ನು ಬೆರಗಿನಿಂದ ನೋಡುವ, ತರ್ಕಬದ್ಧವಾಗಿ ಗ್ರಹಿಸುವ, ವೈಜ್ಞಾನಿಕವಾಗಿ ವಿಶ್ಲೇಷಿಸುವ ಹಲ ಬಗೆಯ ಶೇಡ್‌ಗಳನ್ನು ಈ ಕೃತಿ ಪ್ರತಿಫಲಿಸುತ್ತದೆ.

ಪರಾಗಸ್ಪರ್ಶಕ್ಕೆ ಹೂವುಗಳ ಲೋಕದಲ್ಲಿ ನಡೆಯುವ ಚಮತ್ಕಾರಗಳನ್ನು ಸೊಗಸಾಗಿ ಹಾಗೂ ಅತ್ಯಂತ ಸರಳವಾಗಿ ವಿವರಿಸಲಾಗಿದೆ. ಕೀಟ ಜಗತ್ತು ಹಾಗೂ ಈ ಹೂಗಳ ಜಗತ್ತು ಅದು ಹೇಗೆ ಪರಸ್ಪರ ಅವಲಂಬಿತರಾಗಿ ವಿಕಾಸ ಹೊಂದುತ್ತಾ ಬಂದಿವೆಯೆಂಬ ಸೋಜಿಗವು ಒಂದಾದರೆ ಇವನ್ನು ಪತ್ತೆಹಚ್ಚುವಲ್ಲಿ ಮಾನವನ ಬುದ್ಧ್ದಿಶಕ್ತಿಯು ಹೇಗೆ ಕೆಲಸ ಮಾಡಿದೆಯೆಂಬುದನ್ನು ಇಲ್ಲಿ ವಿವರಿಸಲಾಗಿದೆ. ಹಲವು ಶತಮಾನಗಳ ನಿರಂತರ ಶೋಧಗಳ ಪ್ರತಿಫಲಗಳಿವು.

ಇವಲ್ಲದೆ ಕೊಂಚ ರಾಜಕೀಯ ಹಾಗೂ ಸಾಮಾಜಿಕ ವಿಚಾರಗಳನ್ನು ಹೂವಿನ ಲೋಕದೊಂದಿಗೆ ಇಲ್ಲಿ ಬೆಸೆಯಲಾಗಿದೆ.

ಚೀನಾ ದೇಶವು ಕೊರಿಯಾವನ್ನು ಬಹಳ ಹಿಂದೆ ಒಮ್ಮೆ ಆಕ್ರಮಿಸಿತ್ತು. ಆಗ ದಾಸವಾಳ ಹೂ ಕೊರಿಯಾದ ರಾಷ್ಟ್ರಪುಷ್ಪವಾಗಿದ್ದರಿಂದ ಚೀನಾ ಅದನ್ನು ನಿಷೇಧಿಸಿತ್ತು. ಆದರೆ ಅದೇ ದಾಸವಾಳವು ಕೊರಿಯನ್ನರ ಸ್ವಾಭಿಮಾನದ ಸಂಕೇತವಾಗಿ ಬೆಳೆದ ಬಗೆಯನ್ನು ಒಂದು ಲೇಖನ ಹೇಳಿದೆ. ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಲ್ಲಿ ಕಾಣಿಸುವ ಅಪರೂಪಕ್ಕೆ ಹೂ ಬಿಡುವ ನೀಲಿ ಕುರುಂಜಿಯು ದಕ್ಷಿಣ ಭಾರತದ ಪ್ರತಿನಿಧಿ ಹೂ ಏಕಾಗಬಾರದೆಂಬ ಲೇಖಕಿಯ ಪ್ರಶ್ನೆ ಇವತ್ತಿನ ಉತ್ತರ-ದಕ್ಷಿಣ ಭಾರತದ ಭೇದಭಾವಗಳೆಂಬ ಚರ್ಚೆಯ ಹಿನ್ನೆಲೆಯಲ್ಲಿ ವಿಶಿಷ್ಟವಾಗಿ ಪ್ರತಿಧ್ವನಿಸುವಂತಿದೆ. ಆರ್ಕಿಡ್ ಹೂವುಗಳ ಸೌಂದರ್ಯ ಹಾಗೂ ವೈವಿಧ್ಯದ ಕಾರಣದಿಂದ ಇಂಗ್ಲಿಷ್ ಪದಕೋಶದಲ್ಲಿ ಸುಂದರ ವ್ಯಕ್ತಿತ್ವದವರನ್ನು ಬಣ್ಣಿಸಲು ‘ಆರ್ಕಿಡೇಶಿಯಸ್ ಪರ್ಸನಾಲಿಟಿ’ ಎಂಬ ಪದವೇ ಸೇರ್ಪಡೆಯಾದ ಬಗ್ಗೆ ವಿವರಗಳಿವೆ. ಹಾಗೆಯೇ ಮೈಸೂರಿನ ಕಾಡುಗಳಲ್ಲಿ ಕಾಣುವ ಒಂದು ಆರ್ಕಿಡ್ ಹೂವಿಗೆ ಈ ಪ್ರಾಂತದ ಗೌರವಾರ್ಥ ‘ಪ್ಯಾಲೆನಾಫಿಸ್ ಮೈಸೂರಿನ್ಸಿಸ್’ ಎಂಬ ಹೆಸರಿಟ್ಟಿರುವುದನ್ನು ನಿರೂಪಿಸಲಾಗಿದೆ. ಇದರೊಂದಿಗೆ ಶೋಲಾ ಕಾಡುಗಳ ಚಿತ್ರಣ ಹಾಗೂ ಅವು ರೂಪುಗೊಳ್ಳುವ ಬಗೆ, ಅವು ಹೇಗೆ ಅಗಾಧ ಪ್ರಮಾಣದ ಮಳೆ ನೀರನ್ನು ಹಿಡಿದು, ಹೀರಿಕೊಂಡು ನದಿಗಳ ಜನನಕ್ಕೆ ಕಾರಣವಾಗುತ್ತವೆಂಬ ವಿಶಿಷ್ಟ ಸಂಗತಿಗಳನ್ನು ಲೇಖಕಿ ಇದರಲ್ಲಿ ವಿವರಿಸಿದ್ದಾರೆ.

ಹೂ-ಸಸ್ಯಲೋಕದ ಸೊಬಗನ್ನು ತಿಳಿಸಲು ಕಪ್ಪು ಬಿಳಿ ಫೋಟೊಗಳನ್ನು ಬಳಸಿರುವುದು ನಿರಾಸೆ ಮಾಡುತ್ತದೆ. ಇದೊಂದು ಶಿಕ್ಷಾರ್ಹ ಅಪರಾಧದಂತೆ ಓದುಗರಲ್ಲಿ ಚಡಪಡಿಕೆ ಉಂಟು ಮಾಡದಿರದು. ಪುಸ್ತಕ ಪ್ರಕಾಶನದವರು ಇದನ್ನು ಗಮನಿಸಲಿ.

ಪದ್ಮಾಶ್ರೀರಾಮ್ ಹಲ ಬಗೆಯ ಜೀವನಾಸಕ್ತಿ ಇರುವ ಲೇಖಕರು. ಅಪಾರ ಓದು, ತಿರುಗಾಟ ಹಾಗೂ ಜೀವನಾನುಭವಗಳನ್ನು ಹಾದು ಬಂದಿರುವ ಅವರಿಂದ ಇನ್ನಷ್ಟು ಹೊಸ ಪುಸ್ತಕಗಳು ಬರಲಿ, ಓರ್ವ ಸಸ್ಯಶಾಸ್ತ್ರ ಪರಿಣಿತೆಯಾಗಿ, ಸೃಜನಶೀಲ ಬರಹಗಾರರೂ ಆಗಿರುವ ಪದ್ಮಾಶ್ರೀರಾಮ್‌ರವರು ಕನ್ನಡದ ಓರ್ವ ಅತಿ ವಿಶಿಷ್ಟ ಬರಹಗಾರ್ತಿ ಎಂಬುದಕ್ಕೆ ಈ ಗಿಡಗಂಟೆಯಾ ಕೊರಳಿಂದ ಹೊರಡುವ ಸ್ವರಮೇಳಗಳೇ ಸಾಕ್ಷಿಯಂತಿವೆ.

Writer - ಪಾರ್ವತೀಶ ಬಿಳಿದಾಳೆ

contributor

Editor - ಪಾರ್ವತೀಶ ಬಿಳಿದಾಳೆ

contributor

Similar News