ಹೊಸ ನಾಯಕ ಅಯ್ಯರ್ ನೇತೃತ್ವದಲ್ಲಿ ಡೆಲ್ಲಿ ಗೆಲುವಿನ ಹುಡುಕಾಟ

Update: 2018-04-26 18:39 GMT

ಹೊಸದಿಲ್ಲಿ, ಎ.26: ಗೌತಮ್ ಗಂಭೀರ್ ನಾಯಕತ್ವ ತ್ಯಜಿಸಿರುವ ಹಿನ್ನೆಲೆಯಲ್ಲಿ ಬಿಕ್ಕಟ್ಟು ಎದುರಿಸುತ್ತಿರುವ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಶುಕ್ರವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಕಠಿಣ ಸವಾಲು ಎದುರಿಸಲಿದೆ. ಡೆಲ್ಲಿ ಹೊಸ ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಗೆಲುವಿನ ಹುಡುಕಾಟ ನಡೆಸಲಿದೆ.

 ತಂಡದ ಪ್ರದರ್ಶನ ಮಟ್ಟ ಸುಧಾರಿಸುವ ಖಾತ್ರಿ ಸಿಗದ ಹಿನ್ನೆಲೆಯಲ್ಲಿ ಗಂಭೀರ್ ಟೂರ್ನಿಯ ನಡುವೆಯೇ ಡೆಲ್ಲಿ ತಂಡದ ನಾಯಕತ್ವ ತ್ಯಜಿಸಿದ್ದಾರೆ. ಹೊಸ ಐಡಿಯಾದೊಂದಿಗೆ ತಂಡಕ್ಕೆ ಮರು ಜೀವ ನೀಡಲು ಗಂಭೀರ್ ಟೀಮ್ ಮ್ಯಾನೇಜ್‌ಮೆಂಟ್‌ಗೆ ನೆರವಾಗಲು ನಿರ್ಧರಿಸಿದ್ದಾರೆೆ. ಸ್ವತಃ ಕಳಪೆ ಫಾರ್ಮ್ ನಲ್ಲಿರುವ ಗಂಭೀರ್‌ಗೆ ಸಹ ಆಟಗಾರರಿಂದಲೂ ಸೂಕ್ತ ಬೆಂಬಲ ಸಿಗಲಿಲ್ಲ. ಯುವ ದಾಂಡಿಗ ರಿಷಬ್ ಪಂತ್ ಮಾತ್ರ ಒಂದಷ್ಟು ಹೋರಾಟ ನೀಡುತ್ತಿದ್ದಾರೆ. ಈ ತನಕ ಆಡಿರುವ 6 ಪಂದ್ಯಗಳಲ್ಲಿ 5ರಲ್ಲಿ ಸೋತಿರುವ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

 ಆತಿಥೇಯ ಡೆಲ್ಲಿ ತಂಡ ಪ್ಲೇ-ಆಫ್‌ನಲ್ಲಿ ಸ್ಥಾನ ಗಿಟ್ಟಿಸಬೇಕಾದರೆ ಉಳಿದ 8 ಪಂದ್ಯಗಳ ಪೈಕಿ ಏಳರಲ್ಲಿ ಜಯ ಸಾಧಿಸಲೇಬೇಕಾಗಿದೆ. 23ರ ಹರೆಯದ ಅಯ್ಯರ್‌ಗೆ ತಂಡವನ್ನು ಗೆಲುವಿನ ಹಳಿಗೆ ತರಬೇಕಾದ ಕಠಿಣ ಸವಾಲು ಎದುರಾಗಿದೆ. ಜೇಸನ್ ರಾಯ್ ಹಾಗೂ ಕ್ರಿಸ್ ಮೋರಿಸ್ ಗಾಯದ ಸಮಸ್ಯೆಯಿಂದ ಇನ್ನೂ ಸರಿಯಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಡೆಲ್ಲಿ ತಂಡಕ್ಕೆ ಆಟಗಾರರ ಫಿಟ್‌ನೆಸ್ ಸಮಸ್ಯೆಯೂ ಕಾಡುತ್ತಿದೆ.

ರಾಯ್ ಔಟಾಗದೆ ದಾಖಲಿಸಿದ 91 ರನ್ ನೆರವಿನಿಂದ ಡೆಲ್ಲಿ ತಂಡ ಟೂರ್ನಿಯಲ್ಲಿ ಏಕೈಕ ಗೆಲುವು ದಾಖಲಿಸಿತ್ತು. ಆಸ್ಟ್ರೇಲಿಯದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ 17,13,47,4 ಹಾಗೂ 12 ರನ್ ಗಳಿಸಿ ನಿರಾಶೆಗೊಳಿಸಿದ್ದಾರೆ.

ಮತ್ತೊಂದೆಡೆ, ಕೋಲ್ಕತಾ ತಂಡದ ಬೌಲಿಂಗ್ ವಿಭಾಗ ಸಮಸ್ಯೆ ಎದುರಿಸುತ್ತಿದೆ. ಆದರೆ, ಬ್ಯಾಟಿಂಗ್ ವಿಭಾಗ ಉತ್ತಮವಾಗಿದೆ. ಸ್ಥಿರ ಪ್ರದರ್ಶನ ನೀಡುತ್ತಿರುವ ಕೋಲ್ಕತಾ ದಾಂಡಿಗರು ತಮ್ಮ ತಂಡ ಎರಡು ಬಾರಿ 200ಕ್ಕೂ ಅಧಿಕ ರನ್ ಗಳಿಸಲು ನೆರವಾಗಿದ್ದರು. ಕೋಲ್ಕತಾ ತಂಡ ಮೂರರಲ್ಲಿ ಜಯ, ಮೂರರಲ್ಲಿ ಸೋಲನುಭವಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ಬಾರಿ ಉಭಯ ತಂಡಗಳು ಮುಖಾಮುಖಿಯಾಗಿದ್ದಾಗ ಕೆಕೆಆರ್ 200 ರನ್ ಗಳಿಸಿತ್ತು. 71 ರನ್‌ಗಳಿಂದ ಜಯ ಸಾಧಿಸಿತ್ತು. ಸ್ಪಿನ್ನರ್‌ಗಳಾದ ಸುನೀಲ್‌ನರೇನ್, ಕುಲ್‌ದೀಪ್ ಯಾದವ್ ಹಾಗೂ ಪಿಯೂಷ್ ಚಾವ್ಲಾ ಕೆಕೆಆರ್‌ಗೆ ನೆರವಾಗಿದ್ದರು.

 ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂನ ಪಿಚ್ ನರೇನ್, ಯಾದವ್ ಹಾಗೂ ಚಾವ್ಲಾಗೆ ನೆರವಾಗುವ ಸಾಧ್ಯತೆಯಿದೆ. ವೇಗದ ವಿಭಾಗದಲ್ಲಿ ಶಿವಂ ಮಾವಿ ಹಾಗೂ ಇಂಗ್ಲೆಂಡ್‌ನ ಟಾಮ್ ಕುರ್ರನ್ ಅವರಿದ್ದಾರೆ. ಆ್ಯಂಡ್ರೆ ರಸ್ಸೆಲ್ ಆಲ್‌ರೌಂಡ್ ಪ್ರದರ್ಶನ ಕೆಕೆಆರ್‌ಗೆ ನೆರವಾಗುತ್ತಿದ್ದು ವೆಸ್ಟ್‌ಇಂಡೀಸ್‌ನ ಆಟಗಾರ ಇದೇ ಪ್ರದರ್ಶನ ಮುಂದುವರಿಸುವ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News