ಸುಳ್ಳು ಆರೋಪ: ಬಿಜೆಪಿ ಜಾಹೀರಾತುಗಳಿಗೆ ಚುನಾವಣಾ ಆಯೋಗ ತಡೆ

Update: 2018-04-27 14:50 GMT

ಬೆಂಗಳೂರು, ಎ.27: ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರದ ಅಂಗವಾಗಿ ಬಿಜೆಪಿ ಪಕ್ಷವೂ ಮಾಧ್ಯಮಗಳಿಗೆ ನೀಡುತ್ತಿರುವ ಜಾಹೀರಾತುಗಳು ಸುಳ್ಳುಗಳಿಂದ ಕೂಡಿದೆ ಎಂದು ರಾಜ್ಯ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ ಬಿಜೆಪಿಯ ಜಾಹೀರಾತುಗಳಿಗೆ ರಾಜ್ಯ ಚುನಾವಣೆ ಆಯೋಗ ತಡೆ ನೀಡಿದೆ.

ಬಿಜೆಪಿಯ ಜಾಹೀರಾತುಗಳಲ್ಲಿರುವ ಆಕ್ಷೇಪಾರ್ಹ ಅಂಶಗಳ ಬಗ್ಗೆ ರಾಜ್ಯ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಈ ದೂರನ್ನು ಪರಿಶೀಲಿಸಿದ ಆಯೋಗವು ಸುದ್ದಿ ವಾಹಿನಿಗಳಿಗೆ ಬಿಜೆಪಿ ನೀಡಿರುವ ಜಾಹೀರಾತುಗಳನ್ನು ತಕ್ಷಣದಿಂದಲೇ ವಾಪಾಸು ಪಡೆದಿದೆ.

ಜೊತೆಗೆ ಈ ಜಾಹೀರಾತುಗಳನ್ನು 24 ಗಂಟೆಗಳೊಳಗೆ ಪುನರ್ ಪರಿಶೀಲನೆಗೊಳಪಡಿಸುವಂತೆ ಪೂರ್ವದೃಢೀಕರಣ ಸಮಿತಿಗೆ ಆದೇಶಿಸಿದೆ. ಅದೇ ರೀತಿ, ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಾಪ್ ಸೇರಿ ಇನ್ನಿತರೆ ಆನ್‌ಲೈನ್ ಮಾಧ್ಯಮಗಳಲ್ಲಿಯೂ ಈ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ಮಾಧ್ಯಮ ಮುಖ್ಯಸ್ಥರಿಗೆ ಆಯೋಗ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News