ಸರಕಾರಿ ಕಚೇರಿಗಳ ಭ್ರಷ್ಟಾಚಾರದ ವಿರುದ್ಧದ ಧ್ವನಿ

Update: 2018-04-29 12:12 GMT

ಭಾಗ 41

ಮಗು ಹುಟ್ಟಿದಾಗ, ಮರಣ ಸಂಭವಿಸಿದಾಗ ಪ್ರಮಾಣ ಪತ್ರಗಳನ್ನು ಪಡೆಯುವ ಸಂದರ್ಭದಲ್ಲೂ ಸರಕಾರಿ ಕಚೇರಿಗಳಿಗೆ ಹಣ ನೀಡಿ, ಅಂದರೆ ಲಂಚ ನೀಡುವ ಪ್ರಸಂಗ ನಮ್ಮ ಎದುರು ನಡೆಯುತ್ತದೆ. ನಾವು ಕೆಲವೊಮ್ಮೆ ಇವನ್ನೆಲ್ಲಾ ಗೊತ್ತಿದ್ದೂ ಗೊತ್ತಿಲ್ಲದವರಂತೆ ನಿರ್ಲಕ್ಷಿಸುತ್ತೇವೆ. ಆದರೆ ಇದೇ ಬೆಳೆದು ಇಂದು ಸರಕಾರದ ಬಹುತೇಕ ಕಚೇರಿಗಳಲ್ಲಿ, ಕೆಲಸಗಳು ಲಂಚ ನೀಡಿದರಷ್ಟೇ ಆಗುವುದು ಎಂಬಷ್ಟರಮಟ್ಟಿಗೆ ಜನಸಾಮಾನ್ಯರಿಗೆ ಒಗ್ಗಿ ಹೋಗಿದೆ.

2018ರ ಫೆಬ್ರವರಿ 5ರಂದು ನಮ್ಮ ಸಂಬಂಧಿಕರೊಬ್ಬರು ತೀರಿಕೊಂಡರು. ಅವರ ಮೃತಶರೀರ ಕೊಂಡು ಹೋದಾಗ ಅಲ್ಲಿನ ವಿದ್ಯುತ್ ಶವಾಗಾರ ಕಾರ್ಯನಿರ್ವಹಿಸುತ್ತಿರಲಿಲ್ಲ. ಹಾಗಾಗಿ ಕಟ್ಟಿಗೆಯಲ್ಲಿ ಮೃತದೇಹವನ್ನು ಸುಡಬೇಕಾಯಿತು. ಆವಾಗ ಅಲ್ಲಿ, ವಿವರಗಳನ್ನು ಪಡೆದ ಬಳಿಕ ಎಷ್ಟು ಹಣ ಕೊಡಬೇಕು ಎಂದಾಗ, ಕೊಡಬೇಕು ಎಂಬ ನಿಯಮ ಇಲ್ಲ. ಹಾಗಿದ್ದರೆ ನಾನು ಹಣ ಕೊಡುವುದಿಲ್ಲ ಎಂದೆ. ಆಗ ಕೆಲವರು, ಅವರಿಗೆ ಏನಾದರೂ ಕೊಡಲು ಯಾಕೆ ಹಿಂದೆ ಮುಂದೆ ನೋಡುತ್ತೀ ಎಂದು ಆಕ್ಷೇಪಿಸಿದರು.

ಆದಕ್ಕೆ ನಾನಂದೆ. ಇವತ್ತು ನಾವು ಕೊಡುವುದರಲ್ಲಿ ತಪ್ಪಿಲ್ಲದಿರಬಹುದು. ಆದರೆ, ನಾಳೆ ಹಣ ಇಲ್ಲದವರು ಇಲ್ಲಿಗೆ ಬಂದಾಗಲೂ ಇವರು ಅವರಿಂದಲೂ ಹಣ ಬಯಸುತ್ತಾರೆ. ಅವರಿಗೆ ಹಣ ಕೊಡುವ ಶಕ್ತಿ ಇಲ್ಲದಿದ್ದರೂ ಅವರು ಕೊಡುವುದು ಅನಿವಾರ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ಅಂತಹ ಬಡಪಾಯಿಗಳ ಪರವಾಗಿಯಾದರೂ ನಾವು ತತ್ವಗಳನ್ನು ಅಳವಡಿಸಿಕೊಂಡು ಮುಂದುವರಿಯಬೇಕಾದುದು ನಮ್ಮ ಕರ್ತವ್ಯ ಎಂದೆ. ಮೃತ ದೇಹವನ್ನು ಮನೆಯಿಂದ ಸ್ಮಶಾನಕ್ಕೆ ಸಾಗಿಸುವ ಮಂಗಳೂರು ಮಹಾನಗರ ಪಾಲಿಕೆಯ ಸೇವೆ ಉಚಿತವಾಗಿ ಲಭ್ಯ ಇರುವಂತದ್ದು. ಆದರೆ ಈ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಅದಕ್ಕೂ ಹಣ ನೀಡಲಾಗುತ್ತದೆ. ಯಾಕಾಗಿ ಇದು ಎಂಬುದು ನನ್ನ ಪ್ರಶ್ನೆ. ವಾಹನದ ಚಾಲಕನಿಗೆ ಸರಕಾರದಿಂದ ಹಣ ನೀಡಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ನಾವು ಭ್ರಷ್ಟಾಚಾರಕ್ಕೆ ಸುಲಭವಾಗಿ ಬಲಿ ಬೀಳುತ್ತೇವೆ. ಭಾವನಾತ್ಮಕವಾಗಿ ಇಂತಹ ಮದುವೆ, ಮರಣದ ವೇಳೆ ನಾವು ಬಲಿಬಿದ್ದು, ಲಂಚವೆಂಬ ಭ್ರಷ್ಟಾಚಾರವನ್ನು ನಾವೇ ಸೃಷ್ಟಿಸಿಕೊಳ್ಳುತ್ತೇವೆ.

ಮಗು ಹುಟ್ಟಿದಾಗ, ಮರಣ ಸಂಭವಿಸಿದಾಗ ಪ್ರಮಾಣ ಪತ್ರಗಳನ್ನು ಪಡೆಯುವ ಸಂದರ್ಭದಲ್ಲೂ ಸರಕಾರಿ ಕಚೇರಿಗಳಿಗೆ ಹಣ ನೀಡಿ, ಅಂದರೆ ಲಂಚ ನೀಡುವ ಪ್ರಸಂಗ ನಮ್ಮ ಎದುರು ನಡೆಯುತ್ತದೆ. ನಾವು ಕೆಲವೊಮ್ಮೆ ಇವನ್ನೆಲ್ಲಾ ಗೊತ್ತಿದ್ದೂ ಗೊತ್ತಿಲ್ಲದವರಂತೆ ನಿರ್ಲಕ್ಷಿಸುತ್ತೇವೆ. ಆದರೆ ಇದೇ ಬೆಳೆದು ಇಂದು ಸರಕಾರದ ಬಹುತೇಕ ಕಚೇರಿಗಳಲ್ಲಿ, ಕೆಲಸಗಳು ಲಂಚ ನೀಡಿದರಷ್ಟೇ ಆಗುವುದು ಎಂಬಷ್ಟರಮಟ್ಟಿಗೆ ಜನಸಾಮಾನ್ಯರಿಗೆ ಒಗ್ಗಿ ಹೋಗಿದೆ.

ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆದ ಪ್ರಸಂಗವಿದು!

ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಭೂಮಿ ಅಥವಾ ಕಟ್ಟಡ ಖರೀದಿ ಸಂದರ್ಭ ನೋಂದಣಿ ಮಾಡುವ ಪ್ರಕ್ರಿಯೆ ಇದೆ. ಹಿಂದೆ ನಮಗೆ ಅಲ್ಲಿ ಪರ್ಸಂಟೇಜ್ ವ್ಯವಹಾರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಅಂದರೆ ಯಾವುದೇ ಕೆಲಸಕ್ಕೆ ಇಂತಿಷ್ಟು ಹಣವನ್ನು ಬ್ರೋಕರ್‌ಗಳಿಗೆ ನೀಡಬೇಕು. ಅವರು ಅಲ್ಲಿನ ಅಧಿಕಾರಿಗಳಿಗೆ ಇಂತಿಷ್ಟು ಪ್ರಮಾಣದಲ್ಲಿ ಹಣ ನೀಡಿ ನಮ್ಮ ಕೆಲಸ ಮಾಡಿಸಿಕೊಡುತ್ತಾರೆಂಬ ಆರೋಪ. ಈ ಆರೋಪ ಸುಳ್ಳಾಗಿರಲಿಲ್ಲ. ಹೆಚ್ಚಿನವರು ರಿಜಿಸ್ಟ್ರೇಶನ್‌ಗಳನ್ನು, ಡೀಡ್‌ಗಳನ್ನು ವಕೀಲರ ಮೂಲಕ ಮಾಡಿಸುತ್ತಾರೆ. ವಕೀಲರು ಡ್ರಾಫ್ಟಿಂಗ್ ಟಾರ್ಜ್ ಜತೆ ಸರಕಾರಿ ಅಧಿಕಾರಿಗಳಿಗೆ ನೀಡುವ ಲಂಚವನ್ನೂ ಅದರೊಟ್ಟಿಗೆ ಪಡೆಯುತ್ತಾರೆ. ಇದು ಗಂಭೀರವಾದ ಆರೋಪ. ಹಾಗಿದ್ದರೂ ನಾವು ಈ ಆರೋಪಕ್ಕೆ ಬದ್ಧ. ಹಾಗಾಗಿ ನನ್ನ ಡೀಡ್‌ಗಳನ್ನು ನಾನೇ ಡ್ರಾಫ್ಟ್ ಮಾಡಿಕೊಂಡು ನಾನೇ ರಿಜಿಸ್ಟ್ರೇಶನ್‌ಗೆ ಹೋಗುತ್ತೇನೆ. ಕೆಲವು ಬಾರಿ ನಾನು ಅಂಗಡಿ ರಿಜಿಸ್ಟ್ರೇಶನ್‌ಗೆ ಸಂಬಂಧಿಸಿ ಒಟ್ಟಾಗಿ ಗುಂಪಿನಲ್ಲಿ ಹೋಗಿರುವ ಪ್ರಸಂಗವೂ ಇದೆ. ಆ ಸಂದರ್ಭದ ಪರಿಸ್ಥಿತಿ ನನಗೆ ತಿಳಿದಿಲ್ಲ. ಆದರೆ ನಾನು ಖುದ್ದಾಗಿ ಹೋದಾಗ ನಾನು ಹಲವಾರು ಸಮಸ್ಯೆಗಳನ್ನು, ಅಲ್ಲಿನ ಲಂಚಾವತಾರ, ಅಲ್ಲಿನ ನೌಕರರ ದುರ್ವರ್ತನೆಯನ್ನು ಎದುರಿಸಿದ್ದೇನೆ. ನನ್ನ ಅಂಗಡಿ ಖರೀದಿ ವೇಳೆ ಡೆವಲಪರ್ ಎಲ್ಲಾ ಕೆಲಸವನ್ನು ಮಾಡಿದ್ದರು. ಹಾಗಾಗಿ ಆ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ನಾನು ಈಗ ವಾಸ್ತವ್ಯ ಇರುವ ಫ್ಲಾಟ್ ಖರೀದಿಗೆ ನಾನೇ ಡೀಡ್ ಡ್ರಾಫ್ಟ್ ಮಾಡಿದ್ದೆ. ಅದನ್ನು ಸಬ್‌ರಿಜಿಸ್ಟ್ರಾರ್ ಕಚೇರಿಗೆ ತೆಗೆದುಕೊಂಡು ಹೋಗಿದ್ದೆ. ಫ್ಲಾಟನ್ನು ತೆಗೆದುಕೊಂಡ ಪ್ರಮೋಟರ್ ನಾವು ಅದೇ ಸ್ಥಳದಲ್ಲಿ ಬಾಡಿಗೆ ದಾರರಾಗಿದ್ದ ಕಾರಣ ನಮಗೆ ರಿಯಾಯಿತಿ ದರದಲ್ಲಿ ನಮಗೆ ಆ ಫ್ಲಾಟ್ ನೀಡಿದ್ದರು. ಕೋರ್ಟ್ ನ ಡಿಕ್ರಿ ನಮ್ಮಲ್ಲಿ ಇತ್ತು. ಕೋರ್ಟ್‌ನ ಡಿಕ್ರಿ ನಮೂದಿಸಿ ಫ್ಲಾಟ್‌ನ ಡೀಡ್ ಮಾಡಿ ಅದಕ್ಕೆ ತಕ್ಕುದಾದ ಸ್ಟಾಂಪ್ ಪೇಪರ್ ಖರೀದಿಸಿದ್ದೆ. ಸಬ್ ರಿಜಿಸ್ಟ್ರಾರ್ ಆ ದಿನ ನನ್ನನ್ನು ಕಂಡು ಕಣ್ಣು ಅಗಲಗೊಳಿಸಿದ್ದ. ಹಿಂದೊಮ್ಮೆ ಆತನ ವಿರುದ್ಧ ನಾನು ದೂರು ನೀಡಿದ್ದೇ ಇದಕ್ಕೆ ಕಾರಣ. ಆ ದೂರಿನ ಬಗ್ಗೆ ತನಿಖೆಯ ಮೊದಲು ಆತನ ವರ್ಗಾವಣೆ ಕೂಡಾ ಆಗಿತ್ತು. ಆಸಂದರ್ಭ ನನಗೆ ಮತ್ತು ಆತನ ನಡುವೆ ಸಾಕಷ್ಟು ವಾಗ್ವಾದವೂ ನಡೆದಿತ್ತು. ಆತ, ನಾವೊಂದು ಹಿಂದೂ ಮ್ಯಾರೇಜ್ ಕಾಯ್ದೆಯಡಿ ವಿವಾಹ ನೋಂದಣಿಗೆ ಹೋದಾಗ ಅದನ್ನು ವಿಶೇಷ ವಿವಾಹ ಕಾಯ್ದೆಯಡಿ ನೋಂದಣಿ ಮಾಡಬೇಕೆಂದು ಹೇಳಿದ. ಆಗ ನಿನ್ನ ಸಲಹೆ ಕೇಳಲು ನಾವು ಬಂದಿಲ್ಲ. ಮದುವೆ ನೋಂದಣಿಗೆ ಬಂದಿದ್ದು, ಆ ಕೆಲಸ ಮಾಡು ಎಂದಿದ್ದೆ. ನಾನು ನೋಂದಣಿ ಮಾಡುವುದಿಲ್ಲ ಎಂದು ಆತ ಹೇಳಿದಾಗ, ನೀನು ದಾಖಲೆಯನ್ನು ನಿರಾಕರಿಸಲು ಸಾಧ್ಯ ಇಲ್ಲ. ಹಾಗಿದ್ದರೆ, ನೀನು ಬರವಣಿಗೆಯಲ್ಲಿ ನೀಡು ಎಂದು ಆತನಿಗೆ ಹೇಳಿದೆ. ಆತ ಹಾಗೇ ಮಾಡಿದ. ಅದನ್ನು ನಾನು ಪತ್ರಿಕೆಗಳಲ್ಲಿ ಪ್ರಕಟಿಸಿದೆ. ಸಬ್ ರಿಜಿಸ್ಟ್ರಾರ್ ವಿವಾಹ ನೋಂದಣಿಗೆ ಇರುವುದಲ್ಲ. ಬದಲಾಗಿ ಕೌನ್ಸಿಲಿಂಗ್ ಮಾಡುವ ಕೆಲಸ ಆತನದ್ದು ಎಂದು ಉಲ್ಲೇಖಿಸಿದ್ದೆ. ಇದರಿಂದಾಗಿ ಆತನ ವರ್ಗಾವಣೆಯಾಯಿತು. ಬಳಿಕ ತನಿಖೆ ಆಯಿತು. ಆ ಸಂದರ್ಭ ನಮ್ಮ ನಡುವೆ ಭಾರೀ ವಾಗ್ವಾದ ನಡೆದಿತ್ತು. ಆದರೆ ಇದಾದ ಬಳಿಕ ನಾನದನ್ನು ಮರೆತಿದ್ದೆ. ಆದರೆ ನಾನು ನನ್ನ ಫ್ಲಾಟ್‌ನ ನೋಂದಣಿಗೆ ಹೋದಾಗ ಆತ ಅಲ್ಲಿದ್ದ. ದಾಖಲೆಗಳನ್ನು ಆತ ನೋಡಿದ. ಇದು ‘ಅಂಡರ್ ವ್ಯಾಲ್ಯುವೇಶನ್’ ಎಂದ. ನನಗೆ ಗೊತ್ತು ಎಂದೆ. ಯಾಕೆ ಅಂಡರ್‌ವ್ಯಾಲ್ಯೂ ಎಂಬುದನ್ನು ಡೀಡ್‌ನಲ್ಲಿ ಉಲ್ಲೇಖಿಸಿದ್ದೇನೆ. ಅದನ್ನು ಓದಿ ನೋಡಿ ಎಂದೆ. ಇದನ್ನು ನೀವು ಲಂಚ ನೀಡಿಲ್ಲ ಎಂದು ನಿರಾಕರಿಸುತ್ತಿದ್ದೀರಿ ಎಂದು ಆತನಿಗೆ ಎದಿರೇಟು ನೀಡಿದೆ. ನಾನು ನಿಮ್ಮಲ್ಲಿ ಕೇಳಿಲ್ಲ ಎಂದ. ನಾನು ಕೇಳಿದರೆ ಕೊಡುವುದೂ ಇಲ್ಲ ಎಂದೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆ ಸಂದರ್ಭ ಬಹಳಷ್ಟು ಜನರಿದ್ದರು. ಆಗ ನಾನವನಿಗೆ ಹೇಳಿದೆ, ‘ನೀವು ನನ್ನ ದಾಖಲೆಯನ್ನು ನೋಂದಣಿಗೆ ಸ್ವೀಕರಿಸದಿರಲು ಸಾಧ್ಯವಿಲ್ಲ’’ ಎಂದಾಗ ಆತ ನನಗೆ ನಿಯಮ ತಿಳಿದಿದೆ ಎಂದ. ಹಾಗಿದ್ದರೆ ನಿಯಮದ ಪ್ರಕಾರ ಏನು ಮಾಡುತ್ತೀರಿ ಮಾಡಿ ಎಂದೆ. ಆಯಿತು ಎಂದ. ನಾನು ಆ ದಿನ ಅಲ್ಲಿಂದ ವಾಪಸಾಗಿದ್ದೆ.

Writer - ನಿರೂಪಣೆ: ಸತ್ಯಾ ಕೆ.

contributor

Editor - ನಿರೂಪಣೆ: ಸತ್ಯಾ ಕೆ.

contributor

Similar News