ಬಿಜೆಪಿ ಜೊತೆ ಕೈ ಜೋಡಿಸಿದರೆ ಎಚ್‌ಡಿಕೆಗೆ ಬಹಿಷ್ಕಾರ: ಎಚ್.ಡಿ.ದೇವೇಗೌಡ

Update: 2018-04-30 14:50 GMT

ಬೆಂಗಳೂರು, ಎ.30: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಏನಾದರೂ ಬಿಜೆಪಿ ಜೊತೆ ಕೈ ಜೋಡಿಸಿದರೆ ಅವರನ್ನು ಕುಟುಂಬ ಹಾಗೂ ಪಕ್ಷದಿಂದಲೆ ಬಹಿಷ್ಕಾರ ಹಾಕುವುದಾಗಿ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿರುವ ಮಾತನ್ನು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಮರ್ಥಿಸಿಕೊಂಡಿದ್ದಾರೆ.

ಸೋಮವಾರ ಪದ್ಮನಾಭನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಜೊತೆ ನಾವು ಹೋಗುವ ಪ್ರಶ್ನೆಯೇ ಇಲ್ಲ. ಕುಮಾರಸ್ವಾಮಿ ಹೋಗುವುದನ್ನು ನಾನು ಒಪ್ಪುವುದಿಲ್ಲ. ಜನರ ಆಶೀರ್ವಾದದೊಂದಿಗೆ ಸ್ಪಷ್ಟ ಬಹುಮತದೊಂದಿಗೆ ಸರಕಾರ ರಚನೆ ಮಾಡುತ್ತೇವೆ. ಇಲ್ಲವೆ, ವಿರೋಧ ಪಕ್ಷದಲ್ಲಿ ಕೂರುತ್ತೇವೆ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬರದಿದ್ದರೆ ಏನು ಮಾಡುತ್ತಾರೆ ಎಂದು ಮೊದಲು ಅವರು ಹೇಳಲಿ. ಆಗ ಈ ಬಗ್ಗೆ ನಾನು ಉತ್ತರ ಕೊಡುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ವಿರುದ್ಧ ಏನೇ ಸುಳ್ಳು ಹೇಳಿದರು ಈ ಬಾರಿ ರಾಜ್ಯದ ಜನತೆ ನಮ್ಮ ಪಕ್ಷಕ್ಕೆ ಸಂಪೂರ್ಣ ಆಶೀರ್ವಾದ ಮಾಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರಿಗೆ ನಾಚಿಕೆ ಆಗಲ್ವಾ? ಬಿಜೆಪಿ ಜತೆ ದೇವೇಗೌಡರು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಅಂತ ಎಷ್ಟು ಸಾರಿ ಹೇಳ್ತಾರೆ. ಇಷ್ಟು ಕೀಳು ಮಟ್ಟದ ರಾಜಕಾರಣ ಕಾಂಗ್ರೆಸ್ ಮಾಡುತ್ತೆ ಅಂತ ಗೊತ್ತಿರಲಿಲ್ಲ. ನೂರು ಬಾರಿ ಸುಳ್ಳು ಹೇಳಿ ಜನತೆಗೆ ನಿಜ ಎಂದು ತೋರಿಸಲು ಹೊರಟಿದ್ದಾರೆ ಎಂದು ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಕುಮಾರಸ್ವಾಮಿ ಒಂದೇ ವಿಮಾನದಲ್ಲಿ ಸಂಚರಿಸಿರುವ ಬಗ್ಗೆ ನಕಲಿ ಟಿಕೆಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಕೀಳು ಮಟ್ಟದ ರಾಜಕಾರಣ. ಅಸಲಿ ಟಿಕೆಟ್ ಇದ್ದರೆ ಮುಖ್ಯಮಂತ್ರಿ ಬಿಡುಗಡೆ ಮಾಡಲಿ ಎಂದು ಅವರು ಸವಾಲು ಹಾಕಿದರು.

ಸಿದ್ದರಾಮಯ್ಯ ಹಾಗೂ ಝಮೀರ್ ಅಹ್ಮದ್ ಪಾಕಿಸ್ತಾನದ ಕರಾಚಿಗೆ ಹೋಗಿದ್ದಾರೆ ಎಂಬ ವಿಮಾನದ ಟಿಕೆಟ್ ಅನ್ನು ಮಾಧ್ಯಮಗಳಲ್ಲಿ ತೋರಿಸುತ್ತಿದ್ದಾರೆ. ಯಾವುದನ್ನು ನಾವು ನಂಬುವುದು. ಅಮಿತ್ ಶಾ ಹಾಗೂ ಕುಮಾರಸ್ವಾಮಿ ಭೇಟಿಯಾಗಿರುವ ದಾಖಲೆಗಳು ಮುಖ್ಯಮಂತ್ರಿ ಬಳಿ ಇದ್ದರೆ ಬಿಡುಗಡೆ ಮಾಡಲಿ. ಅದನ್ನು ಬಿಟ್ಟು ಸುಮ್ಮನೆ ಬೆಳಗ್ಗೆಯಿಂದ ಸಂಜೆಯವರೆಗೂ ಆರೋಪಗಳನ್ನು ಮಾಡುವುದು ಏಕೆ? ಎಂದು ದೇವೇಗೌಡ ಪ್ರಶ್ನಿಸಿದರು.

ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಸಿದ್ದರಾಮಯ್ಯ ಒಬ್ಬರೆ ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದಾರೆ. ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಈ ಬಗ್ಗೆ ಏನಾದರೂ ಹೇಳುತ್ತಿದ್ದಾರಾ? ಇದಕ್ಕಿಂತ ಬೇರೆ ಏನು ಹೇಳಬೇಕು ಹೇಳಿ ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಮನೆಗೆ ಹೋಗಿದ್ದು ನನಗೆ ಗೊತ್ತು. ಆಗ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಎಚ್ಚೆತ್ತುಕೊಂಡು, ಮಲ್ಲಿಕಾರ್ಜುನ ಖರ್ಗೆಯನ್ನು ಬದಲಾಯಿಸಿ ಸಿದ್ದರಾಮಯ್ಯರನ್ನು ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕೂರಿಸಿದರು. ಇದೆಲ್ಲ ನನಗೆ ಗೊತ್ತಿದೆ. ಆದರೆ, ನಾನು ಮಾತನಾಡಿರಲಿಲ್ಲ ಅಷ್ಟೇ. ಅದರ ಅಗತ್ಯವೂ ಇಲ್ಲ ಎಂದು ದೇವೇಗೌಡ ಹೇಳಿದರು.

ವಿರೋಧ ಪಕ್ಷದಲ್ಲಿ ಕೂರುತ್ತೇವೆ
ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುತ್ತೆ ಎಂಬ ವಿಶ್ವಾಸವಿದೆ. 2004ರಲ್ಲಿ ಕಾಂಗ್ರೆಸ್ ಹಾಗೂ 2006ರಲ್ಲಿ ಬಿಜೆಪಿ ಜೊತೆ ಸೇರಿ ಸರಕಾರ ರಚನೆ ಮಾಡಿರುವ ಅನುಭವ ನಮಗಿದೆ. ಒಂದು ವೇಳೆ ಅತಂತ್ರ ವಿಧಾನಸಭೆ ರಚನೆಯಾದರೆ ನಾವು ವಿರೋಧ ಪಕ್ಷದಲ್ಲಿ ಕೂರುವುದನ್ನು ಆಯ್ಕೆ ಮಾಡಿಕೊಳ್ಳುತ್ತೇವೆಯೆ ಹೊರತು, ಇವರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ.
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News