‘ಬಿಜೆಪಿ ಸೋಲಿಸಿ, ಮೋದಿಗೆ ಪಾಠ ಕಲಿಸಿ’: ತೆಲುಗು ಭಾಷಿಕರಿಗೆ ಆಂಧ್ರ ಕಾಂಗ್ರೆಸ್ ಸಮಿತಿ ಕರೆ
ಬೆಂಗಳೂರು, ಎ.30: ರಾಜ್ಯ ವಿಧಾನ ಸಭಾ ಚುನಾವಣೆ ಮಹತ್ವವಾಗಿದ್ದು, ಇದರ ಫಲಿತಾಂಶ ದೇಶದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ, ಕರ್ನಾಟಕ ರಾಜ್ಯದಲ್ಲಿರುವ ತೆಲುಗು ಭಾಷಿಕರು ಬಿಜೆಪಿಗೆ ಮತ ನೀಡಬಾರದು ಎಂದು ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿ ಕರೆ ನೀಡಿದೆ.
ಸೋಮವಾರ ನಗರದ ಮಲ್ಲೇಶ್ವರಂನ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಿದ್ದ, ಕರ್ನಾಟಕ ತೆಲುಗು ಸಂಘಗಳ ಸಂಯುಕ್ತ ಸಮಾವೇಶದಲ್ಲಿ ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿ ಮುಖಂಡರು, ಬಿಜೆಪಿಯನ್ನು ತೀರಸ್ಕರಿಸಬೇಕೆಂದು ತೀರ್ಮಾನ ಕೈಗೊಂಡರು.
ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎನ್.ರಘುವೀರ ರೆಡ್ಡಿ, ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಠೇವಣಿ ಸಿಗದಂತೆ ಮಾಡಬೇಕು. ಇದರಿಂದ ಆಂಧ್ರಕ್ಕೆ ಮೋಸ ಮಾಡಿರುವ ಪ್ರಧಾನಿ ನರೇಂದ್ರ ಮೋದಿಗೆ ಪಾಠ ಕಲಿಸಿದಂತೆ ಆಗಲಿದೆ, ಜೊತೆಗೆ ಆಂಧ್ರಪ್ರದೇಶಕ್ಕೆ ನ್ಯಾಯ ಸಿಗಲಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ನಿಜ ಹೇಳುವ ಅಭ್ಯಾಸವೇ ಇಲ್ಲ ಎಂದು ಟೀಕಿಸಿದ ಅವರು, ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ತೆಲುಗು ಭಾಷಿಕರು ಇದ್ದಾರೆ. ಬಿಜೆಪಿ ಸೋಲಿಸಿ, ಮೋದಿಗೆ ಪಾಠ ಕಲಿಸಿ ಎಂದು ನಾವು ಮೂಲೆ ಮೂಲೆಯಲ್ಲಿ ಪ್ರಚಾರ ಆರಂಭಿಸುವುದಾಗಿ ತಿಳಿಸಿದರು.
ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಮಾತನಾಡಿ, ಬೆಂಗಳೂರಿನಲ್ಲಿ ತೆಲುಗು ಭಾಷಿಕರು ಹೆಚ್ಚಿದ್ದಾರೆ. ಅಷ್ಟೇ ಅಲ್ಲದೆ, ಶೇಕಡ 45 ರಷ್ಟು ಜನ ತೆಲುಗು ಭಾಷಿಕ ಶಾಸಕರಿದ್ದಾರೆ. ಇಲ್ಲಿನ ಬೃಹತ್ ಕಟ್ಟಡಗಳು, ದೊಡ್ಡ ದೊಡ್ಡ ವಿದ್ಯಾಸಂಸ್ಥೆಗಳು, ಹೊಟೇಲ್ ಗಳೆಲ್ಲಾ ತೆಲುಗು ಭಾಷಿಕರ ಮಾಲಕತ್ವದಲ್ಲಿದೆ ಎಂದರು.
ಬೆಂಗಳೂರಿನಲ್ಲಿ ತೆಲುಗು ಭಾಷಿಕರು ಅಭಿವೃದ್ಧಿ ಹೊಂದಲು ಕಾಂಗ್ರೆಸ್ ಸರಕಾರವೇ ಕಾರಣವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಅನೇಕ ಕೊಡುಗೆ ನೀಡಿದ್ದು, ದೇಶಕ್ಕೆ ಈ ಸರಕಾರ ಮಾದರಿಯಾಗಿದೆ. ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಲು ತೆಲುಗು ಭಾಷಿಕರ ಪಾತ್ರ ಬಹುದೊಡ್ಡದು ಎಂದು ನುಡಿದರು.
ಕೇಂದ್ರದ ಮಾಜಿ ಸಚಿವ ಎಂ.ಎಂ.ಪಲ್ಲಂ ರಾಜು ಮಾತನಾಡಿ, ಆಂಧ್ರಪ್ರದೇಶಕ್ಕೆ ನೀಡಿದ್ದ ಭರವಸೆಯನ್ನು ಈಡೇರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ಸಂಪೂರ್ಣ ವಿಫಲವಾಗಿದೆ. ಇಂತಹ ಮಾತು ತಪ್ಪಿದ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಸಮಾವೇಶದಲ್ಲಿ ಕೇಂದ್ರದ ಮಾಜಿ ಸಚಿವ ಜೈಪಾಲ್ ರೆಡ್ಡಿ, ಸಚಿವ ರೋಷನ್ ಬೇಗ್, ಆಂಧ್ರದ ಕಾಂಗ್ರೆಸ್ ಹಿರಿಯ ಮುಖಂಡರಾದ ಟಿ.ಸುಬ್ಬರಾಮಿ ರೆಡ್ಡಿ, ಶ್ರೀರಾಮ್ ರೆಡ್ಡಿ, ಸಂಪಂಗಿ, ಸೀತಾರಾಮನ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.