ವಿದ್ಯಾರ್ಥಿಗಳು ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು: ಜಾಫೆಟ್
ಬೆಂಗಳೂರು, ಮೇ 3: ‘ವಿದ್ಯಾರ್ಥಿಗಳು ಸಮಾಜ ಪರಿವರ್ತನೆಗೆ ವಿಶೇಷ ಕೊಡುಗೆ ನೀಡಬೇಕು. ಜೊತೆಗೆ ಮಾನವೀಯ ಮೌಲ್ಯಗಳು ಹಾಗೂ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಬೆಂಗಳೂರು ಕೇಂದ್ರ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಸ್.ಜಾಫೆಟ್ ಸಲಹೆ ಮಾಡಿದ್ದಾರೆ.
ಗುರುವಾರ ಜಾಲಹಳ್ಳಿಯ ಸೈಂಟ್ ಕ್ಲಾರೆಟ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿನಿ ಟೀನಾ ಬೆನ್ನಿ ಅವರಿಗೆ ಸ್ಮರಣಿಕೆ ಮತ್ತು ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಇತರರಿಗೆ ಮಾದರಿ ಹಾಗೂ ಮಾರ್ಗದರ್ಶಕರಾಗಬೇಕು ಎಂದು ಅಪೇಕ್ಷಿಸಿದರು.
ಕಾಲೇಜಿನ ಪ್ರಾಂಶುಪಾಲ ರೆ.ಫಾ. ಡಾ.ಸಾಬುಜಾರ್ಜ್, ಪ್ರಾಮಾಣಿಕತೆ, ಸತ್ಯ, ಕರುಣೆ, ಸಹಬಾಳ್ವೆಯನ್ನು ರೂಢಿಸಿಕೊಂಡು ಯಾವುದೇ ಕಠಿಣ ಸಂದರ್ಭದಲ್ಲಿಯೂ ಜೀವನದಲ್ಲಿ ನಿರಾಶೆಗೊಳ್ಳದೆ ಆಶಾದಾಯಕ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆ ಆಡಳಿತಾಧಿಕಾರಿ ಫಾ.ಜೋಸೆಫ್ ಮ್ಯಾಥ್ಯೂ, ರೆ.ಫಾ.ವಿನಿತ್ ಜಾರ್ಜ್, ಎನ್.ಮಾದೇಶ್ ಹಾಜರಿದ್ದರು.