ಬೆಂಗಳೂರು: ಕಳವು ಪ್ರಕರಣದ ಏಳು ಆರೋಪಿಗಳ ಬಂಧನ
ಬೆಂಗಳೂರು, ಮೇ 13: ಬಸ್ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಚಿನ್ನಾಭರಣ, ನಗದು ಕಳವು ಮಾಡುತ್ತಿದ್ದ ಆರೋಪ ಪ್ರಕರಣ ಸಂಬಂಧ ಏಳು ಜನರನ್ನು ಇಲ್ಲಿನ ಉಪ್ಪಾರಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಮಂಡ್ಯ ಮೂಲದ ಮಂಜುನಾಥ್, ಆಂಧ್ರಪ್ರದೇಶದ ನಾಗಮ್ಮ, ವೆಂಕಟೇಶ್, ಬಿಯಾರಾಮ್, ತಮಿಳುನಾಡಿನ ಮಂಜುಳಾ ಹಾಗೂ ತುಮಕೂರಿನ ರಾಕೇಶ್, ಸಂತೋಷ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
23 ಪ್ರಕರಣ: ಆರೋಪಿಗಳ ಬಂಧನದಿಂದ 23 ಪ್ರಕರಣಗಳು ಪತ್ತೆಯಾಗಿದ್ದು, ಇವುಗಳಲ್ಲಿ 12 ಸರ ಅಪಹರಣ, ಎರಡು ರಾತ್ರಿ ಕನ್ನ, ಎರಡು ಇತರೆ ಕಳವು, ವಿಜಯನಗರ ಠಾಣೆಯ ಎರಡು ಸರ ಅಪಹರಣ ಪ್ರಕರಣ, ಕಾಮಾಕ್ಷಿಪಾಳ್ಯ ಎರಡು ಸರ ಅಪಹರಣ, ಅನ್ನಪೂರ್ಣೇಶ್ವರಿನಗರ ಎರಡು ಸರ ಅಪಹರಣ, ಕೆಂಗೇರಿ ಠಾಣೆಯ ಎರಡು, ಜ್ಞಾನಭಾರತಿ ಠಾಣೆಯ ಒಂದು, ಬಸವೇಶ್ವರನಗರದ ಒಂದು, ಸಂಜಯನಗರ ಠಾಣೆಯ ಒಂದು, ಬ್ಯಾಟರಾಯನಪುರ ಠಾಣೆಯ ಎರಡು ಸರಗಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ 1 ಕೆಜಿ 17 ಗ್ರಾಂ ತೂಕದ ಚಿನ್ನಾಭರಣ, 1 ಕೆಜಿ 250 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಆರೋಪಿಗಳು ಪ್ರಯಾಣಿಕರ ಸೋಗಿನಲ್ಲಿ ಬಸ್ ಹತ್ತಿ ಮಹಿಳೆಯರ ಬ್ಯಾಗ್ ಹಾಗೂ ಪುರುಷರ ಪ್ಯಾಂಟ್ ಜೇಬಿನಿಂದ ಹಣ ಕಳ್ಳತನ ಮಾಡುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ.