×
Ad

ಮತದಾನದಿಂದ ಉತ್ತಮ ಜನಪ್ರತಿನಿಧಿ ಆಯ್ಕೆ ಸಾಧ್ಯ: ಕೇಂದ್ರ ಸಚಿವ ಅನಂತ್‌ ಕುಮಾರ್

Update: 2018-05-13 20:47 IST

ಬೆಂಗಳೂರು, ಮೇ 13: ಬೆಂಗಳೂರು ನಗರದಲ್ಲಿ ಶೇ.54ರಷ್ಟು ಮತದಾನ ಆಗಿರುವುದು ಬೇಸರದ ಸಂಗತಿ. ಮತದಾನದಿಂದ ಒಳ್ಳೆಯ ರಾಜಕಾರಣಿಯನ್ನು ಆಯ್ಕೆ ಮಾಡಲು ಸಾಧ್ಯ. ಒಳ್ಳೆಯ ಜನಪ್ರತಿನಿಧಿಯಿಂದ ಉತ್ತಮ ಸರಕಾರ ರಚನೆ ಮಾಡಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.

ರವಿವಾರ ಅದಮ್ಯ ಚೇತನದ ವತಿಯಿಂದ ಜೆ.ಪಿ.ನಗರದ ಮಿನಿ ಫಾರೆಸ್ಟ್‌ನಲ್ಲಿ ಆಯೋಜಿಲಾಗಿದ್ದ ‘124ನೇ ಹಸಿರು ಭಾನುವಾರ- ಸಸಿ ನೆಡುವಿಕೆ’ ಹಾಗೂ ಇತ್ತೀಚೆಗೆ ದಿವಂಗತರಾದ ಜಯನಗರ ಶಾಸಕ ಬಿ.ಎನ್.ವಿಜಯಕುಮಾರ್ ಅವರಿಗೆ ‘ಶ್ರದ್ಧಾಂಜಲಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಳ್ಳೆಯ ಸರಕಾರ ರಚನೆಯಾದರೆ ಉತ್ತಮ ಆಡಳಿತ ನಿರೀಕ್ಷೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಮತದಾನದ ಬಗ್ಗೆ ಜನರಲ್ಲಿ ಸಾಕಷ್ಟು ಮನವೊಲಿಸಿದರು ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ. ಈ ನೀರಸ ಮತದಾನಕ್ಕೆ ಜನತೆಯ ಅನಾಸ್ಥೆಯೇ ಕಾರಣ. ಅಲ್ಲದೆ ಇದು ಎಲ್ಲರಿಗೂ ಎಚ್ಚರಿಕೆಯ ಗಂಟೆ ಎಂದ ಅವರು, ಉತ್ತಮವಾದ ಸರಕಾರ ರಚನೆಯಾಗದಿದ್ದರೆ ಪ್ರಶ್ನೆಗೆ ಅರ್ಹವಾಗಿರುವುದಿಲ್ಲ ಎಂದು ಹೇಳಿದರು.

ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ 183 ಕೋಟಿ ರೂ.ಗಳನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆ. ಇದು ಈ ಚುನಾವಣೆಯಲ್ಲಿ ಕುರುಡು ಕಾಂಚಾಣದ ಕುಣಿತ ಹೆಚ್ಚಾಗಿದ್ದನ್ನು ಪ್ರತಿಬಿಂಬಿಸುತ್ತದೆ. ಇದು ನಮ್ಮ ಕಣ್ತೆರೆಸಬೇಕಾದ ಅಂಶಗಳಲ್ಲೊಂದು. ಜನರ ಧ್ವನಿಯನ್ನು ಹಣ ಮುಚ್ಚಬಾರದು. ಮತದಾರರ ನಿರಾಸಕ್ತಿ ಹಾಗೂ ದುಡ್ಡಿನ ತಾಂಡವ ಜನ ಜೀವನದಲ್ಲಿ ಗೊಂದಲ ಉಂಟುಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಬಿ.ಎನ್.ವಿಜಯಕುಮಾರ್ ಅವರಂತಹ ಪ್ರಾಮಾಣಿಕ, ನಿಸ್ವಾರ್ಥ ಹಾಗೂ ಸಕ್ರಿಯ ಜನಪ್ರತಿನಿಧಿಗಳ ಅಗತ್ಯ ಹೆಚ್ಚಿದೆ. ಅವರು ಭವಿಷ್ಯದ ಬೆಂಗಳೂರಿನ ಅಭಿವೃದ್ಧಿಗೆ ಸಾಕಷ್ಟು ಕನಸನ್ನು ಇಟ್ಟುಕೊಂಡಿದ್ದರು. ಇಂತಹ ಭ್ರಷ್ಟ ವ್ಯವಸ್ಥೆಯಲ್ಲಿ ಸ್ವಚ್ಛ ಹಾಗೂ ಪ್ರಾಮಾಣಿಕ ವ್ಯಕ್ತಿ ಹಠಾತ್ತನೆ ನಮ್ಮನ್ನೆಲ್ಲಾ ಅಗಲಿದ್ದು ಬಹಳಷ್ಟು ನೋವನ್ನು ಉಂಟುಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂದಿನ ಕಲುಷಿತ ರಾಜಕಾರಣದಲ್ಲಿ ಸ್ವಚ್ಛ, ಸರಳ, ಸಜ್ಜನಿಕೆಯ ಜನಪ್ರತಿನಿಧಿಗಳನ್ನು ಹುಡುಕಬೇಕಿದೆ. ಕೆಟ್ಟ ರಾಜಕಾರಣದ ಗ್ರಹಣದಲ್ಲಿರುವ ನಾವು ಪ್ರಾಮಾಣಿಕ ರಾಜಕಾರಣಿಗಳ ಕೊಡಗೆ ಸ್ಮರಿಸಿಕೊಳ್ಳಬೇಕು. ಬಿ.ಎನ್.ವಿಜಯ ಕುಮಾರ್‌ರವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಮೂಲಕ ಅವರನ್ನು ಹಾಗೂ ಅವರು ನಂಬಿದ್ದ ಸಿದ್ಧಾಂತಗಳನ್ನು ಜೀವಂತವಾಗಿಡಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಬಿ.ಎನ್.ವಿಜಯಕುಮಾರ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಮಾಜಿ ಮೇಯರ್ ಎಸ್.ಕೆ. ನಟರಾಜ್, ಪಾಲಿಕೆ ಸದಸ್ಯರಾದ ಲಕ್ಷ್ಮಿ ನಟರಾಜ್, ಗೋವಿಂದ ನಾಯ್ಡು, ಮಂಡಲದ ಅಧ್ಯಕ್ಷ ವೇಣುಗೋಪಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News