‘ಐತಿಹಾಸಿಕ ಪ್ರಮಾದ’ವೊಂದಕ್ಕೆ ಈಗ 70 ವರ್ಷ!

Update: 2018-05-15 18:47 GMT

ಜಾಗತಿಕವಾಗಿ ಸಮ್ಮತವಾಗಿರುವ ವುರುಮಾನ್ಯತೆಯ ಹಕ್ಕನ್ನು ಪ್ರತಿಪಾದಿಸುತ್ತಿರುವ ನಿರಾಯುಧರ ಮೆರವಣಿಗೆಯ ಮೇಲೆ ಆತ್ಮರಕ್ಷಣೆಯ ಹೆಸರಿನಲ್ಲಿ ಗುಂಡಿನಮಳೆಗೆರೆದು ಕೊಂದುಹಾಕುವ ಮತ್ತು ತನ್ನ ಕೊನೆಯಿಲ್ಲದ ಅಸ್ತಿತ್ವದ ಆತಂಕಗಳನ್ನು ನೀಗಿಸಿಕೊಳ್ಳಲು ನೆರೆಹೊರೆ ದೇಶಗಳ ಮೇಲೆ ಯಾವುದೇ ಎಗ್ಗಿಲ್ಲದೆ ದಾಳಿ ಮಾಡುವ ಪ್ರಭುತ್ವವೊಂದರ ನಿಜ ಸ್ವರೂಪವೇನಿದ್ದಿರಬಹುದು? 


ಯುದ್ಧವನ್ನು ಮಾಡುತ್ತಲೇ ಅಸ್ತಿತ್ವಕ್ಕೆ ಬಂದ ಇಸ್ರೇಲ್ ತನ್ನ 70ನೇ ವಾರ್ಷಿಕೋತ್ಸವದ ಸನಿಹದಲ್ಲಿರುವಾಗಲೂ ಯುದ್ಧದ ಚಾಳಿಯನ್ನು ಮುಂದುವರಿಸಿದೆ. ಅರಬ್ ಪ್ರಪಂಚದಲ್ಲಿ ನಡೆಯುತ್ತಿರುವ ಕದನಗಳಲ್ಲಿ ಹಲವಾರು ವರ್ಷಗಳಿಂದ ಒಂದಲ್ಲ ಒಂದು ಬಣಕ್ಕೆ ಗುಟ್ಟಾಗಿ ಸಹಕಾರವನ್ನೀಯುತ್ತಾ ಅಥವಾ ಯಾವುದಾದರೊಂದು ದೇಶದ ವಿರುದ್ಧ ಗುಪ್ತ ಕಾರ್ಯಾಚರಣೆ ನಡೆಸುತ್ತಾ ಬಂದ ಇಸ್ರೇಲ್ ಇದೀಗ ಇರಾನ್ ವಿರುದ್ಧ ಪರೋಕ್ಷ ಯುದ್ಧವನ್ನೇ ಸಾರುತ್ತಿದೆ. ಸಿರಿಯದ ನೆಲದಲ್ಲಿ ಈಗ ನಡೆಯುತ್ತಿರುವ ಯುದ್ಧದಲ್ಲಿ ಎಲ್ಲ ಯುದ್ಧಕೋರರೂ ಸೇರಿಕೊಳ್ಳುತ್ತಿದ್ದಾರೆ. ಆದರೆ ಮೇ ತಿಂಗಳಲ್ಲಿ ಈ ಯುದ್ಧತೀವ್ರತೆಯಲ್ಲಿ ಆದ ಅಪಾಯಕಾರಿ ಹೆಚ್ಚಳವನ್ನು ಗಮನಿಸಿದರೆ ಅತ್ಯಂತ ಸನಿಹದಲ್ಲೇ ದೊಡ್ಡ ಮಟ್ಟದ ಯುದ್ಧವು ಸ್ಫೋಟವಾಗುವ ಸಾಧ್ಯತೆಗಳು ನಿಚ್ಚಳವಾಗಿದೆ. ಯುದ್ಧದ ತೀವ್ರತೆ ಹೆಚ್ಚಿಸುವುದಕ್ಕೆ ಅಮೆರಿಕವೇ ಮೇ 8ರಂದು ಹಸಿರು ನಿಶಾನೆಯನ್ನು ತೋರಿಸಿತು. ಜನಾಂಗೀಯವಾದಿಗಳು ಮತ್ತು ಎಲ್ಲಾ ಬಗೆಯ ಯಹೂದಿ ದುರಭಿಮಾನಿಗಳ ನಿಕಟ ಸ್ನೇಹದಲ್ಲಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲಿನ ಯಹೂದಿ ಪ್ರಭುತ್ವವು ಬಹಳ ವರ್ಷಗಳಿಂದ ನಿರಂತರವಾಗಿ ಮಾಡುತ್ತಿದ್ದ ಆಗ್ರಹವೊಂದಕ್ಕೆ ಅಂದು ಒಪ್ಪಿಗೆ ನೀಡಿತು.

ಅಂದು ಟ್ರಂಪ್ ಅವರು ತನ್ನ ಎಂದಿನ ಆತ್ಮರತಿ ಮತ್ತು ದುರಭಿಮಾನಗಳಿಂದ ಕೂಡಿದ ಭಾಷಣ ಮಾಡುತ್ತಾ ಇರಾನಿನ ಅಣುಶಕ್ತಿ ಸಂಶೋಧನಾ ಕಾರ್ಯಕ್ರಮಗಳ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿ ಅಮೆರಿಕವು ಮಾಡಿಕೊಂಡ ಒಪ್ಪಂದದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದರು. ಒಪ್ಪಂದಕ್ಕೆ ಇರಾನ್, ಅಮೆರಿಕ ಮತ್ತು ಇನ್ನಿತರ ಐದು ಪಾಲುದಾರ ರಾಷ್ಟ್ರಗಳು ಸುದೀರ್ಘ ಮಾತುಕತೆಗಳ ನಂತರ 2015ರಲ್ಲಿ ಸಹಿ ಮಾಡಿದ್ದವು. ಬಹಳಷ್ಟು ಪರಿಣಿತರು ಈ ಒಪ್ಪಂದವನ್ನು ಜಾರಿ ಮಾಡಬಲ್ಲ ವಿಶ್ವಾಸಾರ್ಹ ಪ್ರಕ್ರಿಯೆಗಳಿರುವ ಉತ್ತಮ ಒಪ್ಪಂದವೆಂದು ಪರಿಗಣಿಸಿದ್ದರು. ಇದಕ್ಕೂ ಮುನ್ನ ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದವು ಹೇರುವ ಕೆಲವು ಹೊಣೆಗಾರಿಕೆಗಳನ್ನು ಇರಾನ್ ಸ್ವಲ್ಪಮಟ್ಟಿಗೆ ಉಲ್ಲಂಘಿಸಿದ್ದರಿಂದ ಅದನ್ನು ಜಾಗತಿಕ ಸಮುದಾಯವು ದೂರವಿಟ್ಟಿತ್ತು. ಆದರೆ ಈ ಒಪ್ಪಂದದ ಮೂಲಕ ಆ ಬಹಿಷ್ಕಾರದಿಂದ ಹೊರಬರಲು ಇರಾನ್‌ಗೆ ಸಣ್ಣ ಅವಕಾಶವೊಂದು ದಕ್ಕುತ್ತಿತ್ತು. ಆದರೆ ಅದನ್ನು ಸಹ ಇಸ್ರೇಲ್ ತನ್ನ ಅಸ್ತಿತ್ವಕೆ ಒದಗಿರುವ ಸಂಚಕಾರವೆಂದು ಬಗೆಯುತ್ತಿದೆ. ಇನ್ನು ತಾನು ತನ್ನ ದೇಶದಲ್ಲಿ ಜನತೆಯ ಇಡೀ ಇತಿಹಾಸ ಮತ್ತು ಜನಾಂಗೀಯ ಗುರುತುಗಳನ್ನೇ ನಾಶಮಾಡುವ ಉದ್ದೇಶದೊಂದಿಗೆ ಮಾಡುತ್ತಿರುವ ಯುದ್ಧವನ್ನು ಸಹ ಇಸ್ರೇಲ್ ಹೊಸ ಹಂತಕ್ಕೆ ಕೊಂಡೊಯ್ದಿದೆ. ಅಮೆರಿಕವು ಇಸ್ರೇಲಿನಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಜೆರುಸಲೇಮ್‌ಗೆ ಸ್ಥಳಾಂತರಿಸುವಾಗ ಅಸ್ತಿತ್ವದಲ್ಲಿದ್ದ ಎಲ್ಲಾ ನಿರ್ಬಂಧಗಳನ್ನೂ ಸಡಿಲಿಸಲಾಯಿತು.

ಈ ಮಹತ್ವದ ಸ್ಥಳಾಂತರವು ಇಸ್ರೇಲ್ ಅಸ್ತಿತ್ವಕ್ಕೆ ಬಂದ ದಿನವಾದ ಮೇ 14ರಂದು ನಡೆಸಲು ನಿರ್ಧರಿಸಿತ್ತು. ಆ ದಿನವನ್ನು ಫೆಲೆೆಸ್ತೀನಿಯರು ನಕ್ಬಾ ಅಥವಾ ವಿನಾಶದ ದಿನವೆಂದು ಆಚರಿಸುತ್ತಾರೆ. ಇಸ್ರೇಲ್ ಆಕ್ರಮಿಸಿಕೊಂಡಿರುವ ನೆಲವನ್ನು ಮತ್ತು ವಿಶಾಲ ಬಯಲು ಬಂಧಿಖಾನೆಯಂತಿರುವ ಗಾಜಾ ಪ್ರದೇಶವನ್ನು ಪ್ರತ್ಯೇಕಿಸಲು ಇಸ್ರೇಲ್ ಅಭೇದ್ಯ ಕೋಟೆಯಂತಿರುವ ಒಂದು ತಡೆಗೋಡೆಯನ್ನು ನಿರ್ಮಿಸಿದೆ. ಮೇ 14ರಂದು ತಡೆಗೋಡೆಯತ್ತ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿದ್ದಾರೆ. ಪ್ರತಿಭಟನೆಯ ವೇಳೆ ಇಸ್ರೇಲ್ ಸೈನಿಕರು ನಡೆಸಿದ ಗೋಲಿಬಾರ್‌ಗೆ ಹಲವಾರು ಮಂದಿ ಫೆಲೆಸ್ತೀನಿಯರು ಮೃತರಾಗಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಗಾಜಾದಲ್ಲಿ ವಾಸಿಸುತ್ತಿರುವ ಮೂರನೇ ಎರಡು ಭಾಗದಷ್ಟು ಜನರು ನಿರಾಶ್ರಿತರು. ಅವರಲ್ಲಿ ಹಲವರು ಪದೇಪದೇ ನಡೆಯುತ್ತಿದ್ದ ಇಸ್ರೇಲ್ ದಾಳಿಯಿಂದಾಗಿ ಹಲವಾರು ಬಾರಿ ತಾವಿದ್ದ ಸ್ಥಳಗಳಿಂದ ಸ್ಥಳಾಂತರಕ್ಕೊಳಗಾಗಿದ್ದವರು. ತಡೆಗೋಡೆಯತ್ತ ಯೋಜಿಸಿದ್ದ ಮೆರವಣಿಗೆಯು ತಮ್ಮ ತಾಯ್ನೆಲವನ್ನು ಮರಳಿ ಪಡೆದುಕೊಳ್ಳಲು ಫೆಲೆೆಸ್ತೀನಿಯರು ಮಾಡುತ್ತಿರುವ ಬಲವಾದ ಪ್ರತಿಪಾದನೆಯಾಗಿದೆ. ಕಳೆದ ಆರು ವಾರಗಳಿಂದ ಪ್ರತಿ ಶುಕ್ರವಾರದ ನಮಾಝ್‌ನ ನಂತರ ಫೆಲೆೆಸ್ತೀನಿಯರು ನಡೆಸುತ್ತಿರುವ ಪ್ರತಿಭಟನೆಗಳಲ್ಲಿ ಈವರೆಗೆ ಹಲವಾರು ಜನರನ್ನು ಇಸ್ರೇಲ್ ಕೊಂದುಹಾಕಿದೆ. ಹ್ಯೂಮನ್ಸ್ ರೈಟ್ ವಾಚ್ ಸಂಸ್ಥೆಯು ಇದನ್ನು ಕಾನೂನು ಬಾಹಿರ ಹತ್ಯೆಯೆಂದು ಘೋಷಿಸಿದೆ.

ಹೀಗಾಗಿ ಇವು ಅಂತರ್‌ರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ತನಿಖೆ ಮಾಡಲು ಯೋಗ್ಯವಾದ ಪ್ರಕರಣಗಳಾಗಿವೆ. ಈ ಪ್ರಕರಣಗಳ ಬಗ್ಗೆ ಪರಿಣಿತರು ಕೊಟ್ಟಿರುವ ತೀರ್ಮಾನಗಳು ಅಮೆರಿಕ ವ್ಯಕ್ತಪಡಿಸುತ್ತಿರುವ ನಿರ್ಲಕ್ಷ್ಯಕ್ಕೆ ತದ್ವಿರುದ್ಧವಾಗಿವೆ. ಗಾಜಾ ಪ್ರದೇಶದಲ್ಲಿ ಇಸ್ರೇಲ್ ಮಾಡುತ್ತಿರುವ ಕೊಲೆಗಳನ್ನು ಮತ್ತು ಸಿರಿಯದಲ್ಲಿ ತೀವ್ರಗೊಳ್ಳುತ್ತಿರುವ ಯುದ್ಧವನ್ನು ಅಮೆರಿಕವು ಇಸ್ರೇಲಿಗೆ ತನ್ನ ಆತ್ಮ ರಕ್ಷಣೆ ಮಾಡಿಕೊಳ್ಳುವ ಹಕ್ಕಿದೆಯೆಂದು ಹೇಳುತ್ತಾ ಸಮರ್ಥಿಸಿಕೊಳ್ಳುತ್ತಿದೆ. ಇಸ್ರೇಲ್ ಅಸ್ತಿತ್ವಕ್ಕೆ ಬಂದು 70 ವರ್ಷ ತುಂಬುತ್ತಿರುವ ಈ ಹೊತ್ತಿನಲ್ಲಿ ಯಾವ ಬಗೆಯ ಜಾಗತಿಕ ವ್ಯವಸ್ಥೆಯಡಿ ಇಸ್ರೇಲಿನ ಅತಿರೇಕಗಳು ನಡೆಯುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಜರೂರಾಗಿದೆ. ಜಾಗತಿಕವಾಗಿ ಸಮ್ಮತವಾಗಿರುವ ವುರುಮಾನ್ಯತೆಯ ಹಕ್ಕನ್ನು ಪ್ರತಿಪಾದಿಸುತ್ತಿರುವ ನಿರಾಯುಧರ ಮೆರವಣಿಗೆಯ ಮೇಲೆ ಆತ್ಮರಕ್ಷಣೆಯ ಹೆಸರಿನಲ್ಲಿ ಗುಂಡಿನಮಳೆಗೆರೆದು ಕೊಂದುಹಾಕುವ ಮತ್ತು ತನ್ನ ಕೊನೆಯಿಲ್ಲದ ಅಸ್ತಿತ್ವದ ಆತಂಕಗಳನ್ನು ನೀಗಿಸಿಕೊಳ್ಳಲು ನೆರೆಹೊರೆ ದೇಶಗಳ ಮೇಲೆ ಯಾವುದೇ ಎಗ್ಗಿಲ್ಲದೆ ದಾಳಿ ಮಾಡುವ ಪ್ರಭುತ್ವವೊಂದರ ನಿಜ ಸ್ವರೂಪವೇನಿದ್ದಿರಬಹುದು? ಇಸ್ರೇಲಿನ ರಾಜಕೀಯ ರಂಗದ ಕೆಲವು ಧಾರೆಗಳು ಈ ಪ್ರಶ್ನೆಗೆ ಸ್ಪಷ್ಟವಾದ ಉತ್ತರಗಳನ್ನು ನೀಡುತ್ತಿವೆ.

ಕಳೆದ ವರ್ಷದ ಮಧ್ಯಭಾಗದಲ್ಲಿ ಇದ್ದಕ್ಕಿದ್ದಂತೆ ರಾಜಕೀಯ ರಂಗಕ್ಕೆ ಮರಳಿದ ಇಸ್ರೇಲಿನ ಮಾಜಿ ಪ್ರಧಾನಿ ಯಹೂದ್ ಬರಾಕ್ ಅವರು ಇಸ್ರೇಲ್ ಒಂದು ವರ್ಣಭೇದವನ್ನು ಆಚರಿಸುವ ರಾಷ್ಟ್ರವಾಗುವೆಡೆ ಶೀಘ್ರವಾಗಿ ಜಾರುತ್ತಿದೆ ಎಂಬ ಎಚ್ಚರಿಕೆಯನ್ನು ನೀಡಿದ್ದರು. ಅವರ ಎಚ್ಚರಿಕೆಯಲ್ಲಿ ಹುರುಳಿತ್ತು. ಏಕೆಂದರೆ 2003ರಲ್ಲೇ ಇಸ್ರೇಲಿನ ಕುಲೀನ ವರ್ತುಲಗಳ ಸದಸ್ಯನಾಗಿದ್ದ ಮತ್ತು ಇಸ್ರೇಲಿನ ಶಾಸನ ಸಭೆಯ ಮಾಜಿ ಸಭಾಪತಿಯೂ ಆಗಿದ್ದ ಅಬ್ರಹಾಮ್ ಬರ್ಗ್ ಅವರು ‘‘ವರ್ಣಬೇಧ ವ್ಯವಸ್ಥೆಯು ದೇಶದ ಭವಿಷ್ಯದ ಸಾಧ್ಯತೆಯಲ್ಲ, ಬದಲಿಗೆ ಈಗಾಗಲೇ ಜಾರಿಯಲ್ಲಿರುವ ವ್ಯವಸ್ಥೆಯಾಗಿಬಿಟ್ಟಿದೆ ಎಂದು ಎಚ್ಚರಿಸಿದ್ದರು. ಯಹೂದಿ ದುರಭಿಮಾನಿ ಪ್ರಭುತ್ವವು ಸ್ಥಾಪಿತವಾದಾಗಿನಿಂದಲೂ ಇಸ್ರೇಲಿನ ರಾಜಕೀಯ ಪರಿಭಾಷೆಯಲ್ಲಿ ‘ಜನಸಂಖ್ಯಾ ಸ್ವರೂಪದ ಸಮಸ್ಯೆ’ ಎಂದು ಕರೆಸಿಕೊಳ್ಳಲ್ಪಡುವ ವಿದ್ಯಮಾನದ ಬಗ್ಗೆ ಅತಿಯಾದ ಆತಂಕವಿದೆ. ಹೀಗಾಗಿ ಫೆಲೆಸ್ತೀನೀ ಭೂಪ್ರದೇಶಗಳನ್ನು ಯಹೂದಿಗಳ ಒಡೆತನಕ್ಕೆ ತಂದುಕೊಳ್ಳುವ ಸಲುವಾಗಿ ದೊಡ್ಡ ಸಂಖ್ಯೆಯಲ್ಲಿ ಆ ಪ್ರದೇಶಗಳಲ್ಲಿ ಯಹೂದಿಗಳು ನೆಲೆಗೊಳ್ಳುವಂತೆ ಮಾಡುವುದು ಇಸ್ರೇಲಿ ವ್ಯೆಹತಂತ್ರದ ಮುಖ್ಯ ಭಾಗವಾಗಿದೆ.

ಆದರೆ ಈ ತಂತ್ರವು ಒಂದು ಹಂತದ ನಂತರ ಅಷ್ಟಾಗಿ ಪ್ರಾಯೋಗಿಕವಲ್ಲ ಎಂದು ಅರಿವಾದ ಮೇಲೆ ಏಕಪಕ್ಷೀಯವಾಗಿ ಯಹೂದಿಯೇತರ ಪ್ರದೇಶಗಳನ್ನು ಪ್ರತ್ಯೇಕಗೊಳಿಸುವ ಯೋಜನೆ ಪ್ರಾರಂಭವಾಯಿತು. 2000ನೇ ಇಸವಿಯಲ್ಲ್ಲಿ ಬರಾಕ್ ಅವರು ಮುಂದಿಟ್ಟ ನಯವಂಚನೆಯ ಶಾಂತಿ ಒಪ್ಪಂದವು ಮುರಿದುಬೀಳುವುದರ ಜೊತೆಗೆ ದ್ವಿರಾಷ್ಟ್ರ ಪರಿಹಾರದ ಚರ್ಚೆಗಳೂ ಕೊನೆಗೊಂಡವು. ಆದರೂ ಈ ಜನಸಂಖ್ಯಾ ಸ್ವರೂಪದ ಸಮಸ್ಯೆಯ ಮುಜುಗರವನ್ನು ತಪ್ಪಿಸಿಕೊಳ್ಳಲು ಈ ಚರ್ಚೆಯನ್ನು ಆಗಾಗ ಹರಿಬಿಡಲಾಗುತ್ತದೆ. ಶಾಂತಿ ಮಾತುಕತೆಯ ಪ್ರಕ್ರಿಯೆಯನ್ನು ಮುಂದುವರಿಸಿಕೊಂಡು ಹೋಗುವ ಕೊನೆಯ ಪ್ರಯತ್ನವಾಗಿ 2008ರಲ್ಲಿ ಅಮೆರಿಕದ ಅಂದಿನ ಅಧ್ಯಕ್ಷ ಜಾರ್ಜ್ ಬುಷ್ ಅವರು ಅಮೆರಿಕದ ಅನಾಪೊಲಿಸ್‌ನಲ್ಲಿ ಒಂದು ದ್ವಿಪಕ್ಷೀಯ ಮಾತುಕತೆಯನ್ನು ಏರ್ಪಡಿಸಿದ್ದರು. ಆಗ ಇಸ್ರೇಲ್ ಸುದೀರ್ಘ ಕಾಲದ ಬಲಪಂಥೀಯರ ಅಧಿಪತ್ಯದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿತ್ತು. ಆದರೆ ಆ ಗುಪ್ತ ಮಾತುಕತೆಯಲ್ಲಿ ಇಸ್ರೇಲಿನ ಪರವಾಗಿ ಭಾಗವಹಿಸಿದ್ದ ಅತ್ಯಂತ ವ್ಯಾವಹಾರಿಕ ಪ್ರಜ್ಞೆಯುಳ್ಳವರೆಂದು ಹೆಸರು ಪಡೆದಿದ್ದ ಆ ದೇಶದ ವಿದೇಶಾಂಗ ಮಂತ್ರಿಯು ಹಾಲಿ ಮಾತುಕತೆಯು ನಡೆಯಬೇಕೆಂದರೆ ಫೆಲೆಸ್ತೀನಿಯರು ಇಸ್ರೇಲನ್ನು ಒಂದು ಶಾಶ್ವತ ಯಹೂದಿ ಪ್ರಭುತ್ವವೆಂದು ಒಪ್ಪಿಕೊಳ್ಳುವುದು ಪೂರ್ವಶರತ್ತೆಂದು ಹಠ ಹಿಡಿದರು.

ಅದರ ಅರ್ಥ ಇಸ್ರೇಲ್ ಆಕ್ರಮಿತ ಪ್ರದೇಶದಿಂದ ಹೊರದೂಡಲ್ಪಟ್ಟ ಫೆಲೆಸ್ತೀನ್ ನಿರಾಶ್ರಿತರು ವಾಪಸ್ ತಮ್ಮ ಮನೆಗೆ ಮರಳುವ ಪ್ರಶ್ನೆಯೇ ಶಾಶ್ವತವಾಗಿ ಇಲ್ಲವಾಗುವಂತೆ ಮಾಡುವುದು ಮತ್ತು ಇಸ್ರೇಲ್ ಭೂಭಾಗದೊಳಗಿರುವ ಫೆಲೆಸ್ತೀನ್ ಅಲ್ಪಸಂಖ್ಯಾತರ ನಾಗರಿಕತ್ವದ ಸ್ಥಾನಮಾನ ಅತಂತ್ರಗೊಳಿಸುವುದೇ ಆಗಿತ್ತು. ಫೆಲೆಸ್ತೀನಿಯರ ಮಟ್ಟಿಗೆ ಇದು ಸಾಮೂಹಿಕ ಆತ್ಮಹತ್ಯೆಗೆ ನೀಡಿದ ಆಹ್ವಾನದಂತಿತ್ತು. ಅಮೆರಿಕದ ಅಂದಿನ ವಿದೇಶಾಂಗ ಕಾರ್ಯದರ್ಶಿ ಕಾಂಡೊಲಿಸಾ ರೈಸ್ ಅವರೇ ‘ಇಸ್ರೇಲಿ ಪ್ರಭುತ್ವದ ಜನಾಂಗೀಯ ಪರಿಶುದ್ಧತೆ’ಯ ಪ್ರತಿಪಾದನೆಯನ್ನು ಕಂಡು ಅವಾಕ್ಕಾಗಿದ್ದರು. ಆದರೆ ಅದು ಕ್ಷಣ ಮಾತ್ರದ ಮೈಮರೆವು ಮಾತ್ರವಾಗಿತ್ತು. ಕೂಡಲೇ ಸಾವರಿಸಿಕೊಂಡ ರೈಸ್ ಅವರು ಅಮೆರಿಕದ ವ್ಯೆಹಾತ್ಮಕ ನೀತಿಯಾದ ‘ಇಸ್ರೇಲ್ ಮೊದಲು’ ನೀತಿಗೆ ಶರಣಾಗಿ ಇಸ್ರೇಲಿಗೆ ತಮ್ಮ ಅಚಲ ನಿಷ್ಠೆಯನ್ನು ಪ್ರದರ್ಶನ ಮಾಡಿದರು. ಒಬಾಮ ಆಡಳಿತದಡಿಯಲ್ಲಿ ಫೆಲೆಸ್ತೀನಿಯರಿಗೆ ಸೈದ್ಧಾಂತಿಕವಾಗಿ ಒಂದಷ್ಟು ಮೇಲುಗೈ ಸಿಕ್ಕಿದ್ದಿರಬಹುದು. ಆದರೆ ಟ್ರಂಪ್ ಆಡಳಿತ ಇಸ್ರೇಲಿನ ಜನಾಂಗೀಯವಾದಿ ದಮನಕಾರಿ ಪ್ರಭುತ್ವಕೆ ಬೇಶರತ್ ಸಹಕರಿಸುವ ನೀತಿಗೆ ಸಂಪೂರ್ಣವಾಗಿ ಮರಳುವ ಸೂಚನೆಗಳನ್ನು ನೀಡಿದೆ. ಹೀಗೆ ಇಸ್ರೇಲ್ ಮತ್ತೊಮ್ಮೆ ತನ್ನ ನೆರೆಹೊರೆ ದೇಶಗಳ ಸ್ಫೋಟಕ ರಾಜಕೀಯ ಸಂದರ್ಭಕ್ಕೆ ಬೆಂಕಿ ಇಕ್ಕುವ ಪ್ರಯತ್ನ ನಡೆಸುತ್ತಿದೆ. ಈಗಲಾದರೂ ಅದರ ಆಘಾತಕಾರಿ ಪರಿಣಾಮಗಳನ್ನು ಜಗತ್ತು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ಎಲ್ಲಾ ಕಾರಣಗಳಿಂದಾಗಿಯೇ ಅತ್ಯಂತ ಪುರಸ್ಕೃತ ನಾಟಕಕಾರ ಟೋನಿ ಕೃಶ್ನರ್ ಅವರು ಇಸ್ರೇಲನ್ನು ಒಂದು ‘ಐತಿಹಾಸಿಕ ಪ್ರಮಾದ’ವೆಂದು ತೀರ್ಮಾನಿಸಿದ್ದರು. ಇದರ ಒಳಾರ್ಥಗಳನ್ನು ಈಗಲಾದರೂ ಅರ್ಥಮಾಡಿಕೊಳ್ಳಬೇಕು.

ಕೃಪೆ: Economic and Political Weekly

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News