'ರಮಝಾನ್ ಉಪವಾಸ ಸಂದರ್ಭ ಮಧುಮೇಹಿಗಳು ಔಷಧಿಗಳನ್ನು ನಿರ್ಲಕ್ಷಿಸಬಾರದು’

Update: 2018-05-30 15:20 GMT

ಬೆಂಗಳೂರು, ಮೇ 30: ಪವಿತ್ರ ರಮಝಾನ್ ಮಾಸದ ಉಪವಾಸದ ಸಂದರ್ಭ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ಯಾವುದೇ ಕಾರಣಕ್ಕೂ ನಿಮ್ಮ ಔಷಧಗಳನ್ನು ನಿರ್ಲಕ್ಷಿಸಬೇಡಿ. ಈ ವೇಳೆ ನಿಮ್ಮ ರಕ್ತದ ಗ್ಲೂಕೋಸ್ ಮಟ್ಟವನ್ನು ಸತತವಾಗಿ ಗಮನಿಸುತ್ತಿರಿ ಎಂದು ನೈಟಿಂಗೇಲ್ ಹೋಮ್ ಹೆಲ್ತ್ ಸರ್ವೀಸಸ್‌ನ ವೈದ್ಯ ಡಾ.ಶ್ವೇತಾ ಚೌಧರಿ ಮನವಿ ಮಾಡಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಉಪವಾಸ 15 ಗಂಟೆಗಳಿಗೂ ಹೆಚ್ಚಿನ ಅವಧಿಗೆ ವಿಸ್ತರಿಸಿದ್ದು, ರಮಝಾನ್‌ನ ಈ ಬೇಸಿಗೆ ಭಾರತದಲ್ಲಿ ಬಹಳಷ್ಟು ಸವಾಲಿನ ಸಮಯ. ಬೆಳಗಿನ ಸಹರಿ, ಸಂಜೆಯ ಇಫ್ತಾರ್ ವೇಳೆ ಸೇವಿಸಬೇಕಾದ ಆಹಾರ-ದ್ರವ ಪದಾರ್ಥಗಳ ಬಗ್ಗೆ ವೈದ್ಯರ ಸಲಹೆ ಪಡೆದರೆ ಸಕ್ಕರೆ ಮಟ್ಟವನ್ನು ನಿಭಾಯಿಸಲು ನೆರವಾಗಲಿದೆ ಎಂದು ಅವರು ಸಲಹೆ ಮಾಡಿದ್ದಾರೆ.

ಮಧುಮೇಹದಂತಹ ದೀರ್ಘಕಾಲದ ರೋಗಗಳನ್ನು ಎದುರಿಸುತ್ತಿರುವವರು 15 ಗಂಟೆಗಳ ಕಷ್ಟಕರವಾದ ಉಪವಾಸ ಸಂಕೀರ್ಣ ತೊಂದರೆಗಳನ್ನು ತಂದೊಡ್ಡಬಹುದು. ಈ ವೇಳೆ ತಮ್ಮ ಆರೋಗ್ಯವನ್ನು ಪರಿಗಣಿಸಿಕೊಂಡು ಯಾವುದೇ ಸಂಕೀರ್ಣ ತೊಂದರೆಗಳು ಉಂಟಾಗದಂತೆ ಉಪವಾಸವನ್ನು ಸಮತೋಲನಗೊಳಿಸಿಕೊಳ್ಳುವುದು ಮುಖ್ಯ ಎಂದು ಅವರು ಸೂಚಿಸಿದ್ದಾರೆ.

ದೀರ್ಘಕಾಲದ ಉಪವಾಸ ಅಥವಾ ಬಹಳ ಸಮಯದ ವರೆಗೆ ಆಹಾರ ಸೇವಿಸದೇ ಇರುವುದರಿಂದ ಮಧುಮೇಹಿಗಳಲ್ಲಿ ಹೈಪೊಗ್ಲಿಸಿಮಿಯ ಉಂಟಾಗುವ ಅಂದರೆ ರಕ್ತದ ಸಕ್ಕರೆ (ಗ್ಲೂಕೋಸ್) ಮಟ್ಟ 4 ಎಂಎಂಒಎಲ್/ಎಲ್‌ಗಿಂತಲೂ ಕಡಿಮೆಯಾಗುವ ಅಪಾಯದ ಸ್ಥಿತಿಯಲ್ಲಿ ಕಂಡುಬರುವ ಕೆಲ ಪ್ರಮುಖ ಲಕ್ಷಣಗಳಲ್ಲಿ ಅತಿಯಾದ ಬೆವರುವಿಕೆ, ಪದೇಪದೇ ಮೂತ್ರವಿಸರ್ಜನೆ, ಸುಸ್ತು ಮತ್ತು ತಲೆ ತಿರುಗುವುದು ಸೇರಿರುತ್ತವೆ.

ಈ ರೀತಿಯ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಾಮಾನ್ಯಮಟ್ಟಕ್ಕೆ ಬರುವಂತೆ ಮಾಡಲು, ರೋಗಿಗಳು ಕ್ಷಿಪ್ರಕಾರ್ಯವೆಸಗುವ ಶರ್ಕರಪಿಷ್ಠ (ಕಾರ್ಬೊಹೈಡ್ರೇಟ್)ಗಳಾದ ಸಿಹಿ ತಿಂಡಿಗಳು, ಸಕ್ಕರೆಯುಳ್ಳ ಪೇಯಗಳು ಅಥವಾ ಹಣ್ಣಿನ ರಸಗಳನ್ನು ಸೇವಿಸಲು ಸಲಹೆ ನೀಡಲಾಗುತ್ತದೆ. ಬಹಳಷ್ಟು ಪ್ರಮಾಣದಲ್ಲಿ ನೀರು ಮತ್ತು ದ್ರವ ಪದಾರ್ಥಗಳನ್ನು ಸೇವಿಸಲು ಹಾಗೂ ಸೂಕ್ತ ಪ್ರಮಾಣದಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಲಾಗುತ್ತದೆ.

ನಿಮಗೆ ವಾಕರಿಕೆ, ಅತಿಯಾದ ಮೂತ್ರವಿಸರ್ಜನೆ, ತಲೆನೋವು, ತಲೆ ತಿರುಗುವುದು ಮತ್ತು ಸುಸ್ತು ಕಂಡು ಬಂದರೆ, ಪರಿಸ್ಥಿತಿ ಕೈಮೀರುವುದನ್ನು ತಡೆಯುವುದಕ್ಕಾಗಿ ತಕ್ಷಣ ವೈದ್ಯಕೀಯ ಸಲಹೆ ಪಡೆಯಿರಿ. ಯಾವುದೆ ಆಕಸ್ಮಿಕ ಸಂದರ್ಭಗಳಲ್ಲೂ ನಿಮ್ಮ ಆರೋಗ್ಯ ಮತ್ತು ಸೌಖ್ಯತೆಗಳಿಗೆ ಆದ್ಯತೆ ನೀಡಬೇಕು ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News