ಮಗನನ್ನು ಹತ್ಯೆಗೈದು, ಆತ್ಮಹತ್ಯೆಗೆ ಯತ್ನಿಸಿದ ನಿರೂಪಕ ಚಂದನ್ ಪತ್ನಿ

Update: 2018-05-31 15:19 GMT

ಬೆಂಗಳೂರು, ಮೇ 31: ಪತಿಯ ಅಗಲಿಕೆಯ ನೊಂದ ನಿರೂಪಕನ ಪತ್ನಿ ಮಗನನ್ನು ಹತ್ಯೆಗೈದು, ತಾನೂ ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿ ತೀವ್ರ ಅಸ್ವಸ್ಥವಾಗಿರುವ ಘಟನೆ ಗುರುವಾರ ನಡೆದಿದೆ.

ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆಯಲ್ಲಿ ವಾಸವಾಗಿದ್ದ ವೀಣಾ(38), ಪುತ್ರ ತುಷಾರ್(13)ನನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಗೆ ತಲುಪಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಚಿಕಿತ್ಸೆ ನೀಡಲಾಗುತ್ತಿದೆ.

ಖಾಸಗಿ ವಾಹಿನಿಯೊಂದರ ನಿರೂಪಕರಾಗಿದ್ದ ಚಂದನ್, ಮೇ 24ರಂದು ದಾವಣಗೆರೆ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಇದರಿಂದ ಪತ್ನಿ ವೀಣಾ, ಮಗ ತುಷಾರ್ ಕಂಗಾಲಾಗಿದ್ದರು. ಪತಿಯ ಅಗಲಿಕೆಯ ನೋವಿನಿಂದ ಹೊರಬರಲಾಗದೆ ವೀಣಾ ಆತ್ಮಹತ್ಯೆಗೆ ನಿರ್ಧರಿಸಿ ಗುರುವಾರ ಬೆಳಗ್ಗೆ ಮಗನ ಕತ್ತು ಕೊಯ್ದು ಕೊಲೆ ಮಾಡಿ ನಂತರ ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಎಂದಿನಂತೆ ಶಾಲಾ ವಾಹನ ತುಷಾರ್‌ನನ್ನು ಕರೆದುಕೊಂಡು ಹೋಗಲು ಮನೆ ಬಳಿ ಬಂದಾಗ ಬಾಗಿಲು ಹಾಕಿರುವುದನ್ನು ಗಮನಿಸಿ ಬಾಗಿಲು ತಳ್ಳಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ವೀಣಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News