ಡಿಜಿಟಲ್ ಕನ್ನಡದ ಶಿಕ್ಷಣ ಮತ್ತು ತರಬೇತಿ

Update: 2018-06-02 17:49 GMT

ಕಂಪ್ಯೂಟರ್ ವಿಜ್ಞಾನದ ಕುರಿತಾಗಿ ಪ್ರಕಟಗೊಂಡಿರುವ ಬಹುತೇಕ ಪುಸ್ತಕಗಳು, ವಿಷಯವನ್ನು ಕನ್ನಡ ಭಾಷೆಯಲ್ಲಿ ತಿಳಿಸುತ್ತವೆಯೇ ಹೊರತಾಗಿ, ಕಂಪ್ಯೂಟರ್‌ಗಳಲ್ಲಿ ಕನ್ನಡವನ್ನು ಬಳಸುವ ಕುರಿತ ಮಾಹಿತಿಯನ್ನು ನೀಡುವ ಪುಸ್ತಕಗಳು ಹೆಚ್ಚು ಪ್ರಕಟಗೊಂಡಿಲ್ಲ. ಕನ್ನಡ ಲಿಪಿತಂತ್ರಾಂಶಗಳ ಬಳಕೆಯ ಶಿಕ್ಷಣ ಮತ್ತು ತರಬೇತಿಗಳನ್ನು ಶಾಸ್ತ್ರೀಯವಾಗಿ ಕಲಿಸುವ ವ್ಯವಸ್ಥೆಯೇ ಇಲ್ಲ. ಕಂಪ್ಯೂಟರಿನಲ್ಲಿ ಕನ್ನಡ ಕಲಿಕೆ ಎಂಬುದು ಒಂದು ರೀತಿಯ ‘ಏಕಲವ್ಯ ಶಿಕ್ಷಣಕ್ರಮವಾಗಿದೆ. ಆಸಕ್ತರು ಅಲ್ಲಲ್ಲಿ ದೊರೆಯುವ ಬಿಡಿಲೇಖನಗಳು ಮತ್ತು ಮಾಹಿತಿಗಳನ್ನು ಅವಲಂಬಿಸಿ ತಾವೇ ಕಸರತ್ತನ್ನು ಮಾಡುವ ಮೂಲಕ ಡಿಜಿಟಲ್ ಕನ್ನಡವನ್ನು ಕಲಿಯುವ ಅನಿವಾರ್ಯತೆ ಇಂದಿಗೂ ಮುಂದುವರಿದಿದೆ.

ಕಂಪ್ಯೂಟರ್ ವಿಜ್ಞಾನವನ್ನು ಕನ್ನಡದಲ್ಲಿ ಕಲಿಯಲು ಮತ್ತು ಕನ್ನಡವನ್ನೇ ಕಂಪ್ಯೂಟರಿನ ಬಳಕೆಯ ಭಾಷೆಯನ್ನಾಗಿಸಿಕೊಳ್ಳಲು ಕನ್ನಡದ ಪೂರಕ ಶಿಕ್ಷಣ ಪರಿಕರಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿಲ್ಲ. ಕಂಪ್ಯೂಟರ್ ಮತ್ತು ಬಿಡಿ ಭಾಗಗಳ ಕುರಿತು ಮತ್ತು ಸಿ ಪ್ರೋಗ್ರಾಮಿಂಗ್ ಲಾಂಗ್ವೇಜ್ ಕಲಿಯಲು ಚಿಕ್ಕನಾಯಕನಹಳ್ಳಿಯ ಶ್ರೀ ಹರೀಶ್ ಸಿದ್ಧಪಡಿಸಿರುವ ಮಲ್ಟಿಮೀಡಿಯಾ ಕಲಿಕಾ ಸಿ.ಡಿ. ಇಲ್ಲಿ ಉಲ್ಲೇಖಾರ್ಹ. ಇಂತಹ ಬಹುಮಾಧ್ಯಮ ಸಿ.ಡಿ.ಗಳು ‘ಕನ್ನಡ ಕಲಿಕೆ ಮತ್ತು ಬಳಕೆ ಸೇರಿದಂತೆ ಸಮೃದ್ಧ ವಿಷಯಗಳನ್ನು ಒಳಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಹೊರಬರಬೇಕಾಗಿದೆ. ಕನ್ನಡ ಮಾಧ್ಯಮದ ಪ್ರೌಢಶಾಲಾ ಕಂಪ್ಯೂಟರ್ ಶಿಕ್ಷಣದ ‘ಮಾಹಿತಿ ಸಿಂಧು’ ಕಾರ್ಯುಕ್ರಮದಲ್ಲಿ ಕೇವಲ ಪಠ್ಯಪುಸ್ತಕಗಳು ಮಾತ್ರ ಕನ್ನಡದಲ್ಲಿದ್ದವೇ ಹೊರತು ಶಿಕ್ಷಣವು ಪೂರ್ಣವಾಗಿ ಇಂಗ್ಲಿಷ್‌ನಲ್ಲಿ ನಡೆದಿದೆ. ಕಲಿಕೆಗೆ ಕನ್ನಡದ ತಂತ್ರಾಂಶಗಳು ಯಾವುದೂ ಲಭ್ಯವಿರಲಿಲ್ಲ, ಆದರೂ, ಕನ್ನಡ ಬಳಕೆಯ ಪರಿಕಲ್ಪನೆಯನ್ನಾದರೂ ಸಹ ವಿದ್ಯಾರ್ಥಿಗಳಿಗೆ ನೀಡಬಹುದಾಗಿತ್ತು. ಆದರೆ, ಅಂತಹ ಯಾವ ಪ್ರಯತ್ನಗಳೂ ಆಗಲಿಲ್ಲ. ‘ಕನ್ನಡ ಲೋಗೋ (ಪ್ರೋಗ್ರಾಮಿಂಗ್ ತಂತ್ರಾಂಶ) ಉಚಿತವಾಗಿ ಲಭ್ಯವಿದ್ದರೂ ಅದನ್ನು ಪ್ರೌಢಶಾಲೆಗಳ ಕಂಪ್ಯೂಟರ್ ಶಿಕ್ಷಣ ಪಠ್ಯಕ್ರಮದಲ್ಲಿ ಅಳವಡಿಸುವ ಪ್ರಯತ್ನಗಳು ಸಫಲವಾಗಲಿಲ್ಲ. ಇಂಗ್ಲಿಷ್ ಭಾಷೆಯ ಮೂಲಕ ಕಲಿಯುವ ಕಂಪ್ಯೂಟರ್ ಶಿಕ್ಷಣವು ಗ್ರಾಮೀಣ ವಿದ್ಯಾರ್ಥಿಗಳಿಗೆ ಕಷ್ಟಸಾಧ್ಯ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನದ ಪ್ರಾಥಮಿಕ ಶಿಕ್ಷಣದ ಬೋಧನಾ ಮಾಧ್ಯಮವು ಕನ್ನಡವೇ ಆಗಿರಬೇಕು ಮತ್ತು ಕಂಪ್ಯೂಟರ್‌ಗಳ ಬಳಕೆಯ ಭಾಷೆಯೂ ಸಹ ಕನ್ನಡವೇ ಆಗಿರಬೇಕು. ಆದರೆ, ಈಗಿನ ಪರಿಸ್ಥಿತಿ ಹಾಗಿಲ್ಲ. ‘ಮಾಹಿತಿ ಸಿಂಧು ಕಾರ್ಯಕ್ರಮಕ್ಕೇ ಗ್ರಹಣ ಹಿಡಿದಿರುವಾಗ ಕನ್ನಡದಲ್ಲಿ ಕಂಪ್ಯೂಟರ್ ಶಿಕ್ಷಣ ಎಂಬುದು ಒಂದು ಮರೀಚಿಕೆಯೇ ಸರಿ. ಕಳೆದ ಎರಡು ದಶಕಗಳಿಂದ ಬೆಂಗಳೂರಿನಲ್ಲಿನ ಮಲ್ಲೇಶ್ವರಂನಲ್ಲಿರುವ ‘ಕನ್ನಡ ಅನುಷ್ಠಾನ ಮಂಡಳಿ’ಯ ಆರ್.ಎ.ಪ್ರಸಾದ್ ನೇತೃತ್ವದಲ್ಲಿ ‘‘ಕನ್ನಡ ಗಣಕ ಶಿಕ್ಷಣ ಕೇಂದ್ರ ಕಾರ್ಯನಿರತವಾಗಿದೆ. ಇಲ್ಲಿ ಶಿಕ್ಷಣದ ಮಾಧ್ಯಮ ಮತ್ತು ಬಳಕೆಯ ಭಾಷೆ ಎರಡೂ ಸಹ ಕನ್ನಡವೇ ಆಗಿದ್ದು, ಈ ನಿಟ್ಟಿನಲ್ಲಿ, ಇದು ಕನ್ನಡದ ಮೊದಲ ಕಂಪ್ಯೂಟರ್ ಶಿಕ್ಷಣ ಕೇಂದ್ರ ಎಂದು ಪರಿಗಣಿಸಬಹುದು. ಈ ಕೇಂದ್ರದಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಆದ್ಯತೆಯನ್ನು ನೀಡಲಾಗಿದೆ. ಇದಕ್ಕೆ ಸರಕಾರದ ಆರ್ಥಿಕ ಅನುದಾನದ ಉತ್ತೇಜನ ಕಡಿಮೆಯಾಗಿದೆ ಎಂಬುದು ಗಮನಿಸಬೇಕಾದ ಅಂಶ. ಎಸೆಸೆಲ್ಸಿ ಬೋರ್ಡ್‌ನ ಅಡಿಯಲ್ಲಿ ಮಾನ್ಯತೆ ಪಡೆದಿರುವ ಖಾಸಗಿ ಕಾಮರ್ಸ್ ಇನ್‌ಸ್ಟಿಟ್ಯೂಟ್‌ಗಳು ಹಿಂದೆ ಮ್ಯಾನ್ಯುವಲ್ ಟೈಪ್‌ರೈಟರ್‌ಗಳಲ್ಲಿ ಟೈಪಿಂಗ್ ಕಲಿಸುತ್ತಿದ್ದವು. ಈಗ ಅವು ಕರ್ನಾಟಕ ಸರಕಾರದ ಅಧಿಕೃತ ಕೀಲಿಮಣೆ ವಿನ್ಯಾಸವಾಗಿರುವ ‘ನುಡಿ’ ವಿನ್ಯಾಸವನ್ನು ಬಳಸಿ ಕಂಪ್ಯೂಟರ್ ಟೈಪಿಂಗ್ ಕಲಿಸುತ್ತಿವೆ. ಟೈಪಿಂಗ್ ಕಲಿತರಷ್ಟೇ ಕನ್ನಡವನ್ನು ಕಂಪ್ಯೂಟರಿನಲ್ಲಿ ಪರಿಪೂರ್ಣವಾಗಿ ಬಳಸುವುದನ್ನು ಕಲಿತಂತಾಗುವುದಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕಾಗಿದೆ.

ಕನ್ನಡ ಮಾಧ್ಯಮದ ಕಂಪ್ಯೂಟರ್ ಶಿಕ್ಷಣ ನೀಡುವಷ್ಟೇ ಪ್ರಾಮುಖ್ಯತೆಯನ್ನು ‘ಕಂಪ್ಯೂಟರ್‌ಗಳಲ್ಲಿ ಕನ್ನಡದ ಬಳಕೆಯ ಶಿಕ್ಷಣ ಮತ್ತು ತರಬೇತಿ’ಗಳನ್ನು ನೀಡುವುದು ಎಂದಿಗಿಂತಲೂ ಇಂದು ಅವಶ್ಯಕವಾಗಿದೆ. ‘ಕಂಪ್ಯೂಟರ್‌ನಲ್ಲಿ ಕನ್ನಡದ ಸಮಗ್ರ ಬಳಕೆಯಲ್ಲಿನ ಸಮಸ್ಯೆಗಳು’ ಇಂದು ಬಹುಮಟ್ಟಿಗೆ ಪರಿಹಾರವಾಗಿವೆ. ಇಂತಹ ಪರಿಹಾರಗಳ ಕುರಿತು ಪ್ರಚಾರ, ಶಿಕ್ಷಣ ಮತ್ತು ತರಬೇತಿ ಅವಶ್ಯಕವಾಗಿದೆ. ಈ ಆಶಯದ ಒಂದು ಭಾಗವಾಗಿ ಈ ‘ಡಿಜಿಟಲ್ ಕನ್ನಡ ಅಂಕಣವು ಕಳೆದ ಒಂದು ವರ್ಷದ ಕಾಲಾವಧಿಯಲ್ಲಿ ಸಾಕಷ್ಟು ಸಾಹಿತ್ಯವನ್ನು ಓದುಗರಿಗೆ ತಲುಪಿಸಿದೆ. ಕಂಪ್ಯೂಟರ್‌ಗಳಲ್ಲಿ ಕನ್ನಡವನ್ನೂ ಸಹ ಇಂಗ್ಲಿಷ್‌ನಷ್ಟೇ ಸಮರ್ಥವಾಗಿ, ಸಮಗ್ರವಾಗಿ ಹೇಗೆ ಬಳಸಬಹುದು ಎಂಬುದನ್ನು ತರಬೇತಿಯ ಮೂಲಕ ಕನ್ನಡದ ಆಸಕ್ತ ವೃತ್ತಿಪರರಿಗೆ, ಸಮುದಾಯಗಳಿಗೆ ಕಲಿಸಿಕೊಡಬೇಕು. ಇದಕ್ಕಾಗಿ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪ್ರತ್ಯೇಕ ವ್ಯವಸ್ಥೆಯೇ ಅಗತ್ಯವಾಗಿದೆ. ಸರಕಾರ, ಖಾಸಗಿ ಉದ್ಯಮಗಳು ಮತ್ತು ಶಿಕ್ಷಣ ಸಂಸ್ಥೆಗಳ ಅಗತ್ಯಗಳಿಗೆ ಅನುಸಾರ, ಆಯಾಯ ಕಾರ್ಯಕ್ಷೇತ್ರದವರಿಗೆ ಕಂಪ್ಯೂಟರ್‌ನಲ್ಲಿ ಕನ್ನಡ ಬಳಕೆಯ ತರಬೇತಿ ನೀಡಲು ನುರಿತ ತರಬೇತುದಾರರನ್ನು ಸಿದ್ಧಗೊಳಿಸುವುದು ಮೊದಲ ಆದ್ಯತೆ ಆಗಬೇಕು. ಕನ್ನಡದಲ್ಲಿ ಕಂಪ್ಯೂಟರ್‌ಗಳ ಬಳಕೆಯನ್ನು ವ್ಯಾಪಕಗೊಳಿಸಲು ವಿವಿಧ ವರ್ಗಗಳ ಕಂಪ್ಯೂಟರ್ ಬಳಕೆದಾರರಿಗೆ ತಲುಪುವಂತೆ ನಿರಂತರ ಶಿಬಿರಗಳು, ಕಮ್ಮಟಗಳು ಮತ್ತು ಪ್ರಾತ್ಯಕ್ಷಿಕೆಗಳನ್ನು ಸಂಘಟಿಸುವುದು; ವಿವಿಧ ಇಲಾಖೆಗಳ ವೈವಿಧ್ಯಮಯ ಕಾರ್ಯಾನುಸಾರ ಅಗತ್ಯವಿರುವ ಅಧಿಕಾರಿ, ಸಿಬ್ಬಂದಿಗೆ ಸಾಂಸ್ಥಿಕ ತರಬೇತಿಯನ್ನು ಕೋರಿಕೆಯ ಮೇರೆಗೆ ನೀಡುವುದು - ಇವುಗಳು ಆ ವ್ಯವಸ್ಥೆಯ ನಂತರದ ಆದ್ಯತೆ ಆಗಬೇಕು. ಕಂಪ್ಯೂಟರ್ ಶಿಕ್ಷಣವು ಕನ್ನಡ ಬೋಧನಾ ಮಾಧ್ಯಮವನ್ನು ಅಳವಡಿಸುವತ್ತ ಮತ್ತು ಮಾಹಿತಿ ಮತ್ತು ಸಂವಹನ ಕ್ಷೇತ್ರದಲ್ಲಿ ಕನ್ನಡವನ್ನು ಬಳಕೆಯ ಭಾಷೆಯನ್ನಾಗಿಸುವತ್ತ ಎಲ್ಲ ಪ್ರಯತ್ನಗಳನ್ನು ಮಾಡಬೇಕಾದ ಕರ್ತವ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳಿಗೆ ಸೇರಿದೆ. ವಿದ್ಯುನ್ಮಾನ ಆಡಳಿತವು ಎಲ್ಲೆಡೆ ಜಾರಿಗೊಂಡಿರುವುದರಿಂದ ಆಡಳಿತದಲ್ಲಿ ಕನ್ನಡದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಕನ್ನಡ ತಂತ್ರಜ್ಞಾನ ಶಿಕ್ಷಣ ಮತ್ತು ತರಬೇತಿಗೆ ಆದ್ಯತೆ ದೊರೆಯಬೇಕಿದೆ. ಕೇವಲ ‘ನುಡಿ’ ತಂತ್ರಾಂಶದ ಬಳಕೆಗಾಗಿ ಟೈಪಿಂಗ್ ಕಲಿಸಿಕೊಟ್ಟರೆ ಎಲ್ಲವೂ ಮುಗಿಯಿತು ಎಂಬ ಧೋರಣೆಯನ್ನು ತೊರೆದು, ಡೇಟಾಬೇಸ್ ಅಪ್ಲಿಕೇಷನ್‌ಗಳಲ್ಲಿ, ಅಂತರ್ಜಾಲದಲ್ಲಿ ಮತ್ತು ವಿದ್ಯುನ್ಮಾನ ಆಡಳಿತದ ಎಲ್ಲ ಕ್ಷೇತ್ರದಲ್ಲಿ ಕನ್ನಡವನ್ನು ಅಳವಡಿಸಿ ಬಳಸುವ ಶಿಕ್ಷಣ ಮತ್ತು ತರಬೇತಿಯ ಅವಶ್ಯಕತೆ ಇದೆ. ಕನ್ನಡದಲ್ಲಿಯೇ ಪ್ರಾಥಮಿಕ ಕಂಪ್ಯೂಟರ್ ಶಿಕ್ಷಣವನ್ನು ಪಡೆಯಬಯಸುವವರಿಗೆ ಪಠ್ಯಕ್ರಮ (ಸಿಲಬಸ್) ಮತ್ತು ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿ ಕ್ರಮಶಿಕ್ಷಣ ನೀಡುವ ಸೌಲಭ್ಯಗಳನ್ನು ಕನ್ನಡ ವಿಶ್ವವಿದ್ಯಾನಿಲಯ ದಂತಹ ಭಾಷಾ ವಿಶ್ವವಿದ್ಯಾನಿಲಯಗಳು ನಿರ್ವಹಿಸಬೇಕಾಗಿದೆ. ಕನ್ನಡದಲ್ಲಿ ಪ್ರಾಥಮಿಕ ಕಂಪ್ಯೂಟರ್ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಪ್ರಯತ್ನಶೀಲವಾಗಿರುವ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯವು ಪಿಯುಸಿ ನಂತರದ ಡಿಪ್ಲೊಮಾ ತರಗತಿಯನ್ನು ದೂರಶಿಕ್ಷಣ ಕಾರ್ಯಕ್ರಮದ ಅಡಿಯಲ್ಲಿ 2007ರಲ್ಲಿ ಆರಂಭಿಸಿತು. ಕನ್ನಡದ ಮೂಲಕ ಕಂಪ್ಯೂಟರ್ ಕಲಿಸಿಕೊಡುವ ಈ ಮಹತ್ವದ ಕೋರ್ಸ್ ಇಂದು ನಾನಾ ಕಾರಣಗಳಿಗಾಗಿ ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿದೆ. ಹಿಂದಿನ ಅಧ್ಯಯನ ಮಂಡಳಿಗಳು ಪಠ್ಯಕ್ರಮವನ್ನು ಪರಿಷ್ಕರಿಸಿ ನೀಡಿದ್ದರೂ, ಪರಿಷ್ಕೃತ ಪಠ್ಯಕ್ರಮವನ್ನು ಜಾರಿಗೊಳಿಸಿಲ್ಲ. ಹಳೆಯ ಪಠ್ಯಕ್ರಮ ಮತ್ತು ಪಾಠಬರಹಗಳೇ ಇಂದಿಗೂ ಮುಂದುವರಿದಿವೆ. ತಂತ್ರಜ್ಞಾನದ ಭರದ ಬೀಸಿನ ವೇಗಕ್ಕೆ ಕಂಪ್ಯೂಟರ್ ಶಿಕ್ಷಣ ಪಠ್ಯಕ್ರಮವನ್ನು ಎರಡು ವರ್ಷಗಳಿಗೊಮ್ಮೆ ಪರಿಷ್ಕರಿಸುವುದು ಅಗತ್ಯ. ಕಳೆದ ಹತ್ತು ವರ್ಷಗಳಿಂದ ಅದೇ ಪಠ್ಯಕ್ರಮವನ್ನು ಬೋಧಿಸುತ್ತಿರುವುದು ವಿಪರ್ಯಾಸವಾಗಿದೆ. ಮಹತ್ವಾಕಾಂಕ್ಷಿ ಕೋರ್ಸ್ ಮುಚ್ಚುವ ಹಂತಕ್ಕೆ ಬರಲು ಕಾರಣಗಳೇನು? ಈ ಕೋರ್ಸ್‌ಗೆ ಪ್ರವೇಶಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದು ಕೋರ್ಸ್‌ಗೆ ಬೇಡಿಕೆಯಿಲ್ಲ ಎಂಬುದನ್ನು ದೃಢಪಡಿಸುತ್ತಿದೆ ಎನ್ನುವ ಮಾತಿದೆ. ಕಾರಣ, ಕನ್ನಡ ಮಾಧ್ಯಮದಲ್ಲಿ ಓದಿದ ಕಂಪ್ಯೂಟರ್ ಡಿಪ್ಲೊಮಾಗೆ ಮಾನ್ಯತೆ ದೊರೆಯುತ್ತದೆಯೇ ಎಂಬುದು ವಿದ್ಯಾರ್ಥಿಗಳಲ್ಲಿನ ಸಂಶಯ. ಕರ್ನಾಟಕ ಸರಕಾರವು ತನ್ನ ನೌಕರರಿಗೆ ಕಂಪ್ಯೂಟರ್ ಸಾಕ್ಷರತೆಯನ್ನು ಕಡ್ಡಾಯಗೊಳಿಸಿದೆ. ಇದಕ್ಕಾಗಿ ಪಠ್ಯಕ್ರಮವನ್ನೂ ಸಹ ಸಿದ್ಧಪಡಿಸಿದೆ. ಪರೀಕ್ಷೆಗಳು ಇಂಗ್ಲಿಷ್ ಮತ್ತು ಕನ್ನಡದಲ್ಲಿರುತ್ತವೆ. ಆದರೆ, ಕಲಿಕೆಗಾಗಿ ಪಠ್ಯಪುಸ್ತಕಗಳನ್ನು ಕೇವಲ ಇಂಗ್ಲಿಷ್‌ನಲ್ಲಿ ಮಾತ್ರವೇ ಒದಗಿಸಲಾಗಿದೆ. ಕನ್ನಡದಲ್ಲಿ ಕಲಿಯಬಯಸುವವರು ಮಾರುಕಟ್ಟೆಯಲ್ಲಿ ದೊರೆಯುವ ಗೈಡ್ ರೂಪದ ಕನ್ನಡದ ಪುಸ್ತಕಗಳನ್ನೇ ಆಶ್ರಯಿಸಬೇಕಾಗಿದೆ. ಹಂಪಿ ಕನ್ನಡ ವಿಶ್ವವಿದ್ಯಾನಿಲಯವು ಸರಕಾರದ ಕಂಪ್ಯೂಟರ್ ಸಾಕ್ಷರತಾ ಪಠ್ಯಕ್ರಮಕ್ಕೆ ಅನುಗುಣವಾಗಿ ಕನ್ನಡದಲ್ಲಿ ಪಾಠಬರಹಗಳನ್ನು ರೂಪಿಸಿ, ದೂರಶಿಕ್ಷಣದ ಸರ್ಟಿಫಿಕೇಟ್ ಕೋರ್ಸ್‌ನ್ನು ಆರಂಭಿಸಿದರೆ, ಇಂತಹ ಕಂಪ್ಯೂಟರ್ ಪ್ರಾಥಮಿಕ ಶಿಕ್ಷಣ ಮತ್ತು ಸಾಕ್ಷರತೆಗೆ ನ್ಯಾಯ ಒದಗಿಸಿದಂತಾಗುತ್ತದೆ. ಅಲ್ಲದೆ, ಮುಚ್ಚುವ ಹಂತಕ್ಕೆ ಹೋಗಿರುವ ‘ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಡಿಪ್ಲೊಮಾ ಕೋರ್ಸ್‌ಗೆ ಮರುಜೀವ ನೀಡುವ ಪ್ರಯತ್ನವೂ ಆಗಬೇಕಾಗಿದೆ.

Writer - ಡಾ. ಎ. ಸತ್ಯನಾರಾಯಣ

contributor

Editor - ಡಾ. ಎ. ಸತ್ಯನಾರಾಯಣ

contributor

Similar News