20 ಪದವಿಗಳನ್ನು ಪಡೆದು, ದೇಶದ ಅತಿ ವಿದ್ಯಾವಂತ ಐಎಎಸ್ ಅಧಿಕಾರಿಯಾಗಿದ್ದ ಡಾ. ಶ್ರೀಕಾಂತ್ ಜಿಕ್ಖರ್

Update: 2018-06-06 18:40 GMT

ಜ್ಞಾನ ಮನುಷ್ಯನನ್ನು ಕತ್ತಲಿನಿಂದ ಬೆಳಕಿನೆಡೆಗೆ ಒಯ್ಯುತ್ತದೆ. ನೀವು ಎಷ್ಟೇ ಜ್ಞಾನ ಹೊಂದಿದ್ದರೂ ಅದು ಪರಿಪೂರ್ಣವಲ್ಲ ಅಥವಾ ಸಾಕು ಎನಿಸುವಂಥದ್ದಲ್ಲ. ಡಾ. ಶ್ರೀಕಾಂತ್ ಜಿಕ್ಖರ್ ಇಂಥದ್ದೇ ಸಿದ್ಧಾಂತ ಅನುಸರಿಸುವವರು. ಇವರ ಶೈಕ್ಷಣಿಕ ಅರ್ಹತೆ ಕೇಳಿದರೆ ನೀವು ಹೌಹಾರುತ್ತೀರಿ. ಈ ವ್ಯಕ್ತಿ ಗಳಿಸಿದ ಪದವಿಗಳ ಸಂಖ್ಯೆ ಬರೋಬ್ಬರಿ ಇಪ್ಪತ್ತು!

ಹೌದು ಇದು ವಿಚಿತ್ರವಾದರೂ ನಿಜ. ಡಾ.ಜಿಕ್ಖರ್ ಪತ್ರಿಕೋದ್ಯಮದಿಂದ ಹಿಡಿದು ವೈದ್ಯಕೀಯ ಶಾಸ್ತ್ರದವರೆಗೆ ಎಲ್ಲವನ್ನೂ ಬಲ್ಲವರು. ಮೊತ್ತಮೊದಲು ಎಂಬಿಬಿಎಸ್ ಪದವಿ ಪಡೆದ ಬಳಿಕ, ವೈದ್ಯಕೀಯ ಶಾಸ್ತ್ರದ ಹೊರತಾಗಿ ಇತರ ಕ್ಷೇತ್ರಗಳಲ್ಲೂ ಆಸಕ್ತರಾದರು. ಹೀಗೆ ಮತ್ತಷ್ಟು ಪದವಿ ಪಡೆಯುವ ಗೀಳು ಹಚ್ಚಿಕೊಂಡರು.
ಡಾ.ಜಿಕ್ಖರ್ ಅವರು ಎಂಬಿಬಿಎಸ್, ಎಲ್‌ಎಲ್‌ಬಿ, ಎಂಬಿಎ, ಡಿಬಿಎಂ, ಪತ್ರಿಕೋದ್ಯಮ ಪದವಿಯನ್ನು ಹೊಂದಿದ್ದರೆ, ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ, ಇಂಗ್ಲಿಷ್ ಸಾಹಿತ್ಯ, ತತ್ವಶಾಸ್ತ್ರ, ರಾಜಕೀಯ ವಿಜ್ಞಾನ, ಪ್ರಾಚೀನ ಭಾರತೀಯ ಇತಿಹಾಸ, ಸಂಸ್ಕೃತಿ ಮತ್ತು ಪ್ರಾಚ್ಯಶಾಸ್ತ್ರ ಹಾಗೂ ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.

ಇಷ್ಟೆಲ್ಲ ಇದ್ದ ಮೇಲೆ ಅವರ ಮನೆಯಲ್ಲಿ 52 ಸಾವಿರ ಪುಸ್ತಕಗಳಿರುವ ಗ್ರಂಥಾಲಯ ಇರುವುದು ಅಚ್ಚರಿಯೇ?
ಡಾ.ಜಿಕ್ಖರ್ ಅವರ ಜ್ಞಾನದಾಹ ಇಷ್ಟಕ್ಕೆ ತಣಿಯುವುದಿಲ್ಲ. ಸಂಸ್ಕೃತ ವಿಷಯದಲ್ಲಿ ಅತ್ಯುನ್ನತ ಪದವಿಯಾದ ಡಿ ಲಿಟ್ ಪದವಿ ಗಳಿಸಿರುವುದೂ ಇವರ ಹೆಗ್ಗಳಿಕೆ. ಮುಂದೆ ಅವರು ಏಕಾಂಗಿಯಾಗಿ ಮಹಾರಾಷ್ಟ್ರದಲ್ಲಿ ಸಂಸ್ಕೃತ ವಿಶ್ವವಿದ್ಯಾನಿಲಯ ಆರಂಭಿಸಿ, ಅದರ ಕುಲಪತಿಗಳಾಗಿ ಸೇವೆ ಸಲ್ಲಿಸಿದರು.

ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ 1954ರಲ್ಲಿ ಜನಿಸಿದ ಡಾ.ಜಿಕ್ಖರ್, 19ನೇ ವಯಸ್ಸಿನವರಾಗಿದ್ದಾಗಲೇ ಪದವಿ ಭೇಟೆ ಆರಂಭಿಸಿದರು. 1973ರಿಂದ 1990ರವರೆಗೆ ಇವರು ತಮ್ಮ ಬೇಸಿಗೆ ಹಾಗೂ ಚಳಿಗಾಲಗಳನ್ನು ವಿಶ್ವವಿದ್ಯಾನಿಲಯ ಪರೀಕ್ಷೆ ಬರೆಯುವುದರಲ್ಲೇ ಕಳೆದರು.
1978ರಲ್ಲಿ ಡಾ.ಜಿಕ್ಖರ್ ಭಾರತೀಯ ನಾಗರಿಕ ಸೇವಾ ಪರೀಕ್ಷೆಗೆ ಹಾಜರಾದರು. ಅವರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಭಾರತೀಯ ಪೊಲೀಸ್ ಸೇವೆಗೆ ಆಯ್ಕೆಯಾದರು. ಆದಾಗ್ಯೂ ಅವರ ಗುರಿ ದೊಡ್ಡದಾಗಿತ್ತು. ಸೇವೆಗೆ ರಾಜೀನಾಮೆ ನೀಡಿ ಮತ್ತೆ ಪರೀಕ್ಷೆಗೆ ಹಾಜರಾದರು. ಅದರಲ್ಲೂ ಯಶಸ್ವಿಯಾಗಿ ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್)ಗೆ ಆಯ್ಕೆಯಾದರು.

ಐಎಎಸ್ ಅಧಿಕಾರಿಯಾಗಿ ನಾಲ್ಕು ತಿಂಗಳ ಕಾಲ ಸೇವೆ ಸಲ್ಲಿಸಿದ ಡಾ.ಜಿಕ್ಖರ್ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸಿ, 1980ರಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾದರು. ಆಗ ಅವರ ವಯಸ್ಸು ಕೇವಲ 26. ದೇಶದ ಅತ್ಯಂತ ಕಿರಿಯ ಶಾಸಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು!
ವಯಸ್ಸಿನಲ್ಲಿ ಅತ್ಯಂತ ಕಿರಿಯರಾದರೂ ಡಾ.ಜಿಕ್ಖರ್ ಅತ್ಯುತ್ತಮ ಆಡಳಿತಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 1982ರಿಂದ 1985ರ ಅವಧಿಯಲ್ಲಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ 14 ವಿವಿಧ ಖಾತೆಗಳನ್ನು ನಿರ್ವಹಿಸಿದರು. ಮುಂದಿನ ವರ್ಷ ಅಂದರೆ 1986ರಲ್ಲಿ ಅವರು ಮಹಾರಾಷ್ಟ್ರ ವಿಧಾನ ಪರಿಷತ್ತಿನಲ್ಲಿ ಸೇವೆ ಆರಂಭಿಸಿ, 1992ರ ವರೆಗೂ ಸದನದ ಸದಸ್ಯರಾಗಿದ್ದರು. ಆ ವರ್ಷ ಅವರು ರಾಜ್ಯಸಭಾ ಸದಸ್ಯರಾಗಿ ಚುನಾಯಿತರಾದರು.

1999ರಲ್ಲಿ ಡಾ.ಜಿಕ್ಖರ್ ರಾಜ್ಯಸಭಾ ಚುನಾವಣೆಯಲ್ಲಿ ಸೋತಾಗ ತಮ್ಮ ಗುರಿಯನ್ನು ಪ್ರವಾಸದತ್ತ ಕೇಂದ್ರೀಕರಿಸಿದರು. ಮೂಲತಃ ಹೃದಯದಿಂದ ಕಲಾವಿದರಾದ ಅವರು ಚಿತ್ರಕಲೆ, ಫೋಟೊಗ್ರಫಿ ಮತ್ತು ನಾಟಕ ಕ್ಷೇತ್ರದಲ್ಲಿ ಕೈಯಾಡಿಸಿದರು. ಆರೋಗ್ಯ, ಶಿಕ್ಷಣ ಮತ್ತು ಧರ್ಮದ ಬಗ್ಗೆ ಉಪನ್ಯಾಸ ನೀಡಲು ದೇಶದ ಉದ್ದಗಲಕ್ಕೆ ಓಡಾಡಿದರು. ಇದೇ ವೇಳೆ ಅವರು ಯುನೆಸ್ಕೊದಲ್ಲಿ ಭಾರತವನ್ನು ಪ್ರತಿನಿಧಿಸಿದರು.
ನಲುವತ್ತೈದನೇ ವಯಸ್ಸಿನಲ್ಲಿ ಅವರಿಗೆ ಮೂತ್ರಜನಕಾಂಗ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಅವರು ಕ್ಯಾನ್ಸರ್ ಜತೆ ಹೋರಾಡಿದರು. ಆದರೆ ಅವರ ಜೀವನದ ಯೋಚನೆ ಭಿನ್ನವಾಗಿತ್ತು.

2004ರ ಜೂನ್ 2ರ ದುರ್ದಿನದಂದು ಡಾ.ಜಿಕ್ಖರ್ ತವರು ಜಿಲ್ಲೆ ನಾಗ್ಪುರದ ತಮ್ಮ ಹೊಲದಿಂದ ಸ್ನೇಹಿತನೊಂದಿಗೆ ಮನೆಗೆ ಕಾರಿನಲ್ಲಿ ತೆರಳುತ್ತಿದ್ದಾಗ, ಬಸ್ಸು ಅವರ ಕಾರಿಗೆ ಅಪ್ಪಳಿಸಿತ್ತು. ಆ ದಿನ ರಾತ್ರಿ ಡಾ. ಜಿಕ್ಖರ್ 49ರ ಯುವ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದರು.

ಕೃಪೆ: www.thebetterindia.com 

Writer - ತನ್ವಿ ಪಟೇಲ್

contributor

Editor - ತನ್ವಿ ಪಟೇಲ್

contributor

Similar News